ವಿಜಯಪುರದ ಲಚ್ಯಾಣ ಗ್ರಾಮದಲ್ಲಿ ಬುಧವಾರ ಕೊಳವೆ ಬಾವಿಗೆ ಬಿದ್ದ ಎರಡು ವರ್ಷದ ಮಗು ಸಾತ್ವಿಕ್ ಮುಜಗೊಂಡ ರಕ್ಷಣಾ ಕಾರ್ಯ ಮುಗಿದಿದ್ದು, ಸಾವಿರಾರು ಜನರ ಪ್ರಾರ್ಥನೆಯ ಮೂಲಕ ಮಗು ಜೀವಂತವಾಗಿ ಹೊರ ತೆಗೆಯಲಾಗಿದೆ. ಬೋರ್ವೆಲ್ಗೆ ಬಿದ್ದ ಮಗುವನ್ನು ಸತತ 20 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಯಶಸ್ವಿಯಾಗಿ ರಕ್ಷಣೆ ಮಾಡಲಾಗಿದೆ. ಕೊಳೆವೆ ಬಾವಿಯಿಂದ ಮಗುವನ್ನ ಸುರಕ್ಷಿತವಾಗಿ ಎಸ್ಡಿಆರ್ಎಫ್, ಎನ್ಡಿಆರ್ಎಫ್ ಸಿಬ್ಬಂದಿ ಹೊರತೆಗೆದಿದ್ದು, ಮಗುವಿಗೆ ಹೆಚ್ಚಿನ ಚಿಕಿತ್ಸೆ ಕೊಡಿಸಲು ಆಸ್ಪತ್ರೆಗೆ ಆ್ಯಂಬುಲೆನ್ಸ್ ಮೂಲಕ ಶಿಫ್ಟ್ ಮಾಡಲಾಗಿದೆ.
ನಿನ್ನೆ ಸಾಯಂಕಾಲ 5:30ಕ್ಕೆ 2 ವರ್ಷದ ಸಾತ್ವಿಕ್ ಕೊಳವೆ ಬಾವಿಗೆ ಬಿದ್ದಿದ್ದ. ಕೂಡಲೇ ರಕ್ಷಣಾ ಕಾರ್ಯಾಚರಣೆ ಆರಂಭ ಮಾಡಿ ಕೊಳವೆ ಬಾವಿ ಪಕ್ಕ 20 ಅಡಿಯವರೆಗೆ ಡಿಗ್ಗಿಂಗ್ ಮಾಡಲಾಗಿತ್ತು. ಆದರೆ 20 ಅಡಿ ಅಗೆದ ಬಳಿಕ ಅಡ್ಡಲಾಗಿ 3-4 ಅಡಿ ರಂಧ್ರ ಕೊರೆದು ಬಾಲಕನನ್ನು ಹೊರತೆಗೆಯಲು ಪ್ಲ್ಯಾನ್ ಮಾಡಲಾಗಿತ್ತು. ಈ ವೇಳೆ ಕಲ್ಲು ಅಡ್ಡ ಬಂದ ಕಾರಣ ಕಾರ್ಯಾಚರಣೆ ವಿಳಂಬ ಆಗಿತ್ತು. ಕೊನೆಗೂ ರಕ್ಷಣಾ ಸಿಬ್ಬಂದಿ ಮಗುವನ್ನು ಯಶಸ್ವಿಯಾಗಿ ರಕ್ಷಣೆ ಮಾಡಿದ್ದಾರೆ. ಸ್ಥಳದಲ್ಲಿ ಸಂಭ್ರಮಾದ ವಾತಾವರಣ ನಿರ್ಮಾಣವಾಗಿದೆ.