ಮೈಸೂರು: ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಬಗ್ಗೆ ಐಎಎಸ್ ಅಧಿಕಾರಿ ಶಿಲ್ಪಾ ನಾಗ್ ಆರೋಪ ಮಾಡಿದ್ದೂ ನೆನಪಿದೆ ತಾನೆ. ಈಗ ಐಪಿಎಸ್ ಅಧಿಕಾರಿ ಡಿ.ರೂಪಾ ಕೂಡ ಕಿತ್ತಾಟದ ಅಖಾಡಕ್ಕೆ ಇಳಿದಿದ್ದಾರೆ. ರೋಹಿಣಿ ಸಿಂಧೂರಿ ಮೈಸೂರು ಜಿಲ್ಲಾಧಿಕಾರಿಯಾಗಿದ್ದಾಗ ಸರ್ಕಾರಿ ನಿವಾಸದಲ್ಲಿ ನಿರ್ಮಿಸಿದ್ದ ಈಜುಕೊಳದ ಬಗ್ಗೆ ಡಿ.ರೂಪಾ ಪ್ರತಿಕ್ರಿಯಿಸಿದ್ದು, ರೋಹಿಣಿ ಸಿಂಧೂರಿ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಫೇಸ್ಬುಕ್ನಲ್ಲಿ ಪೋಸ್ಟ್ ಹಾಕಿದ್ದಾರೆ.
ಎಲ್ಲರೂ ಕೊರೋನಾ ಹಾಗೂ ಆರ್ಥಿಕ ಸಂಕಷ್ಟದಲ್ಲಿರುವಾಗ ಜನರ ಹಣದಲ್ಲಿ ಸ್ವಿಮ್ಮಿಂಗ್ ಪೂಲ್ ಕಟ್ಟಿರುವುದು ರೋಹಿಣಿ ಸಿಂಧೂರಿಯವರ ನೈತಿಕ ಅಧಃಪತನವನ್ನು ತೋರುತ್ತದೆ. ಪಾರಂಪರಿಕ ಕಟ್ಟಡದಲ್ಲಿ ಈಜುಕೊಳ ಕಟ್ಟಲು ಪರವಾನಗಿ ತೆಗೆದುಕೊಂಡಿಲ್ಲ ಎನ್ನುವುದು ನಂತರದ ವಿಚಾರ. ಆದರೆ ಈಜುಕೊಳ ನಿರ್ಮಾಣವನ್ನು ಮುಂದೂಡಲೂ ಬಹುದಿತ್ತು ಎಂದು ಕಿಡಿಕಾರಿದ್ದಾರೆ.
ಸ್ವಿಮ್ಮಿಂಗ್ ಪೂಲ್ ನಿರ್ಮಾಣ ಸಂಬಂಧ ಪ್ರಾದೇಶಿಕ ಆಯುಕ್ತರು ರಾಜ್ಯ ಸರ್ಕಾರಕ್ಕೆ ನಿನ್ನೆ ತನಿಖಾ ವರದಿ ಸಲ್ಲಿಸಿದ್ದಾರೆ. ಅದರಲ್ಲಿ ರೋಹಿಣಿ ಸಿಂಧೂರಿ ಆಡಳಿತಾತ್ಮಕ ಮಂಜೂರಾತಿಯನ್ನು ಪಡೆದಿಲ್ಲ ಎಂದು ವರದಿ ನೀಡಿದ್ದು, ರೋಹಿಣಿ ಸಿಂಧೂರಿ ಅವರನ್ನು ಸಂಕಷ್ಟಕ್ಕೆ ಸಿಲುಕಿಸಿದೆ.