ಮಂಗಳೂರು: ನಗರದ ಕರಂಗಲ್ಪಾಡಿಯ ಪ್ರೀತಿ ಮನೋಜ್(47) ಬಾರದ ಲೋಕಕ್ಕೆ ಹೋಗುವಾಗಲೂ ಹಲವರ ಜೀವ ಉಳಿಸುವ ಮೂಲಕ ಸಾರ್ಥಕತೆ ಮೆರೆದಿದ್ದಾರೆ. ಬಳ್ಳಾಲ್ಬಾಗ್ನಲ್ಲಿ ಏ.9ರಂದು ಕಾರು ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ಪ್ರೀತಿ ಮನೋಜ್ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದಾರೂ ಫಲಿಸಲಿಲ್ಲ.
ಶನಿವಾರ ಪ್ರೀತಿ ಅವರ ಮಿದುಳು ನಿಷ್ಕ್ರಿಯಗೊಂಡಿದೆ ಎಂದು ವೈದ್ಯರು ಖಚಿತಪಡಿಸಿದ್ದು, ನೋವಲ್ಲೂ ಕುಟುಂಬಸ್ಥರು ಪ್ರೀತಿಯ ಅಂಗಾಂಗ ದಾನ ಮಾಡಲು ನಿರ್ಧಾರ ಕೈಗೊಂಡಿದ್ದಾರೆ ಎಂದು ಮಂಗಳೂರು ನಗರ ಪೊಲೀಸ್ ಕಮೀಷನರ್ ಎನ್.ಶಶಿಕುಮಾರ್ ತಿಳಿಸಿದ್ದಾರೆ. ಪ್ರೀತಿ ಅವರು ಏ.9ರಂದು ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ವೇಳೆ ಮಣ್ಣಗುಡ್ಡೆ ನಿವಾಸಿ, ಉದ್ಯಮಿ ಶ್ರವಣ್ ಕುಮಾರ್ ಎಂಬುವರ ಕಾರು ರಸ್ತೆ ವಿಭಜಕವನ್ನು ದಾಟಿ, ಮತ್ತೊಂದು ಬದಿಯಲ್ಲಿ ಹೋಗುತ್ತಿದ್ದ ಸ್ಕೂಟಿ ಹಾಗೂ ಕಾರಿಗೆ ಡಿಕ್ಕಿ ಹೊಡೆದಿತ್ತು.
ಅಪಘಾತದಲ್ಲಿ ಎರಡು ಕಾರುಗಳ ಮಧ್ಯೆ ಸಿಲುಕಿದ ಸ್ಕೂಟಿಯಲ್ಲಿದ್ದ ಪ್ರೀತಿ ಮನೋಜ್ ಗಂಭೀರ ಗಾಯಗೊಂಡಿದ್ದರು. ನಗರದ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಅವರ ಮಿದುಳು ನಿಷ್ಕ್ರಿಯಗೊಂಡಿರುವುದನ್ನು ಶನಿವಾರ ವೈದ್ಯರು ಖಚಿತ ಪಡಿಸಿದ್ದಾರೆ. ಕಾರು ಚಾಲಕ ಶ್ರವಣ್ ಕುಮಾರ್ ವಿರುದ್ಧ ಪ್ರಕರಣ ದಾಖಲಾಗಿದೆ.