ಕೆಲಸಕಾರ್ಯಗಳ ಒತ್ತಡದ ಈ ಪರಿಸ್ಥಿತಿಯಲ್ಲಿ ಅಂಗಡಿಗಳಿಗೆ ಅಲೆದಾಟದ ಪರದಾಟವಿಲ್ಲದೇ ಮನೆಯಲ್ಲಿ ಕುಳಿತು ಕಳೆದ ವರುಷದಂತೆ ಈ ವರುಷವೂ ಮೊಬೈಲ್ ನಿಂದ ಅಂತರ್ಜಾಲದ ಮೂಲಕ ಸಹೋದರರಿಗೆ ರಾಖಿಯನ್ನು ಕಳುಹಿಸುವ ವಿನೂತನ ಪರಿಕಲ್ಪನೆಯನ್ನು ಭಾರತೀಯ ಅಂಚೆ ಇಲಾಖೆಯ ಕರ್ನಾಟಕ ವೃತ್ತ ಜಾರಿಗೆ ತಂದಿದೆ.
www.karnatakapost.gov.in ಇದರ ಮುಖಾಂತರ ಮನೆಯಲ್ಲಿ ಕುಳಿತು ಕರ್ನಾಟಕ ರಾಜ್ಯದೊಳಗಿನ ಗ್ರಾಹಕರು ಭಾರತದ ಯಾವುದೇ ಪ್ರದೇಶಕ್ಕೂ ಕೂಡಾ ರಾಖಿಯನ್ನು ತ್ವರಿತ ಅಂಚೆ (ಸ್ಪೀಡ್ ಪೋಸ್ಟ್) ಮುಖಾಂತರ, ಬಹು ಸುಲಭ ವಾಗಿ, ಕೇವಲ 120 ರೂಪಾಯಿ ವೆಚ್ಚದಲ್ಲಿ ಕಳುಹಿಸಬಹುದು.
ಈ ಸೇವಾಯೋಜನೆಯನ್ನು ಕರ್ನಾಟಕ ವೃತ್ತ ಇತ್ತೀಚೆಗೆ ಲೋಕಾರ್ಪಣೆ ಮಾಡಿದ್ದು ಕಳೆದ ಕೆಲವು ವರುಷಗಳಿಂದ ಭಾರತೀಯ ಅಂಚೆ ಇಲಾಖೆಯಲ್ಲಿ ದೊರೆಯುತ್ತಿದ್ದ ರಾಖಿ ಲಕೋಟೆಗಳಿಗೆ ಹೊಸ ಆಯಾಮ ದೊರೆತಂತಾಗಿದೆ.
ಕೇವಲ ಸಹೋದರರಿಗೆ ಮಾತ್ರವಲ್ಲದೇ ಲಡಾಕ್ ಗಡಿ ಪ್ರದೇಶದಲ್ಲಿರುವ ಸೇನಾ ಯೋಧರಿಗೂ ರಾಖಿ ತಲುಪಿಸುವ ಅವಕಾಶವಿದ್ದು ಅವರಿಗೆಂದೇ ಮುದ್ರಿತ ಸಂದೇಶವನ್ನು ಆಯ್ಕೆ ಮಾಡಿ ರವಾನಿಸಬಹುದಾಗಿದೆ.
ರಾಖಿ ಕಳುಹಿಸುವ ವಿಧಾನ:
ಬಲು ಸರಳವಾದ ಪ್ರಕ್ರಿಯೆಯನ್ನು ಹೊಂದಿರುವ ಈ ಸೇವಾ ಯೋಜನೆಯಲ್ಲಿ www.karnatakapost. gov.in/Rakhi_Post ಗೆ ಲಾಗಿನ್ ಆಗಿ ಕಳುಹಿಸುವವರ ಪೂರ್ಣ ವಿವರಗಳನ್ನು ನೀಡಿ ಮುಂದುವರೆದಾಗ ಸುಮಾರು ಏಳು ವಿಧದ ಆಕರ್ಷಕ ವಿನ್ಯಾಸವುಳ್ಳ ರಾಖಿಗಳು ವೀಕ್ಷಣೆ ಮಾಡಲು ಲಭ್ಯವಿರುತ್ತದೆ.
ಪ್ರತಿಯೊಂದು ವಿನ್ಯಾಸದ ಎದುರು ವಿನ್ಯಾಸ ಅಂಕಿ ನಮೂದಿಸಿದ್ದು ನಮಗೆ ಬೇಕಾದ ವಿನ್ಯಾಸವನ್ನು ಆರಿಸಿ ಮುಂದುವರೆದಾಗ ಸಂದೇಶ ಕಳುಹಿಸುವ ಆಯ್ಕೆ ಕಾಣ ಸಿಗುತ್ತದೆ. ಸುಮಾರು ಮೂರು ರೀತಿಯ ಮುದ್ರಿತ ಸಂದೇಶಗಳನ್ನು ಆಯ್ಕೆ ಮಾಡುವ ಇಲ್ಲವೇ ನಮಗೆ ಬೇಕಾದ ಸಂದೇಶವನ್ನು ಫೋಟೊ ತೆಗೆದು ಕಳುಹಿಸುವ ಅವಕಾಶವೂ ಲಭ್ಯವಿದೆ.
ಕೊನೆಯಲ್ಲಿ ಸ್ವೀಕರಿಸುವವರ ಪೂರ್ಣ ವಿವರ ಗಳನ್ನು ಬರೆಯಲು ಅವಕಾಶವಿದೆ. ರಾಖಿಗಳು ಬಣ್ಣಬಣ್ಣದಲ್ಲಿ ಬರೆದ ಅರ್ಥಪೂರ್ಣ ಸಂದೇಶ ವನ್ನು ಹೊತ್ತು ವಿಶೇಷ ವಿನ್ಯಾಸದ ರಾಖಿ ಲಕೋಟೆಗಳೊಂದಿಗೆ ಸಹೋದರರಿಗೆ ಇಲ್ಲವೇ ಸೇನಾ ಯೋಧರಿಗೆ ಸೇರುವ ಪರಿಕಲ್ಪನೆಯೇ ವಿಶಿಷ್ಟ.
ರಾಖಿಗಳ ಸೀಮಿತ ದಾಸ್ತಾನು ಲಭ್ಯವಿದ್ದು ಈ ಸೇವಾ ವಿಧಾನದ ಮೂಲಕ ರಾಖಿ ಕಳುಹಿಸಲು ಆಗಸ್ಟ್ ತಿಂಗಳ 6 ನೇ ತಾರೀಕು ಕೊನೆಯ ದಿನವಾಗಿರುತ್ತದೆ.ರಾಖಿ ಕಳುಹಿಸಲು ರೂಪಾಯಿ 120/- ಶುಲ್ಕವಾಗಿದ್ದು ಅದನ್ನು ಅಂತರ್ಜಾಲ ಬ್ಯಾಂಕಿಂಗ್, ನಮ್ಮದೇ ಇಲಾಖೆಯ ಐಪಿಪಿಬಿ, ಗೂಗಲ್ ಪೇ, ಭೀಮ್ ಆ್ಯಪ್, ಫೋನ್ ಪೇ, ಮುಂತಾದ ನೆಟ್ ಪೇಮೆಂಟ್ ವಿಧಾನದಲ್ಲಿ ನೀಡಬಹುದಾಗಿದೆ. ಮನೆಯೊಳಗೇ ಕುಳಿತು ಭಾರತದ ಯಾವುದೇ ಮೂಲೆಗೂ ಕಳುಹಿಸಬಹುದಾದ ಈ ಸೇವೆ ಅಪಾರ ಜನಮನ್ನಣೆ ಪಡೆದಿದ್ದು ಸಾಮಾನ್ಯ ಜನರಿಗೆ ಅನುಕೂಲಕರವಾಗಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಉಡುಪಿ ಅಂಚೆ ವಿಭಾಗದ ಅಂಚೆ ಅಧೀಕ್ಷಕರಾದ ನವೀನ್ ಚಂದರ್ ರವರು ಪತ್ರಿಕಾ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.