ಸರಕಾರಿ ಸೇವಾ ಸೌಲಭ್ಯತೆಗಳನ್ನು ಗೌರವಿಸಿ: ದಿನೇಶ್ ಹೆಗ್ಡೆ ಅತ್ರಾಡಿ

ಮಣಿಪಾಲ: ಪರ್ಕಳದ ಹಿರೇಬೆಟ್ಟು ಪ್ರಾಥಮಿಕ ಅರೋಗ್ಯ ಕೇಂದ್ರದ ಉಪಕೇಂದ್ರದಲ್ಲಿ, ಕೋವಿಡ್ ನಿಯಂತ್ರಣಾ ಪಡೆಯ ಸಭೆಯ ಕೇಂದ್ರಕ್ಕೆ ಔಷಧಿಗಳನ್ನು ಪರ್ಕಳ ಗ್ರಾಹಕರ ವಿವಿದೋದ್ದೇಶ ಸಹಕಾರಿ ಸಂಘದ ಪರವಾಗಿ ಅಧ್ಯಕ್ಷ ದಿನೇಶ್ ಹೆಗ್ಡೆ ಅತ್ರಾಡಿ ವಿತರಿಸಿದರು.

ಬಳಿಕ ಮಾತನಾಡಿ, ದೇಶಕ್ಕೆ ಕೋವಿಡ್ 19 ಸೋಂಕಿನ ಹಾವಳಿಯ ನಂತರ ಈ ಎರಡೂ ಅಲೆಗಳ ಅವಧಿಯಲ್ಲಿ ಕೇಂದ್ರ ಹಾಗು ರಾಜ್ಯ ಸರಕಾರ ಈ ಸಾಂಕ್ರಾಮಿಕ ರೋಗ ನಿಯಂತ್ರಣಕ್ಕಾಗಿ ಸಮರೋಪಾದಿಯಲ್ಲಿ ಯೋಜನೆಗಳನ್ನು ರೂಪಿಸಿ ಕಾರ್ಯಪ್ರವೃತ್ತವಾಗಿವೆ ಮತ್ತು ಈ ಸಂದರ್ಭದಲ್ಲಿ ಆದ್ಯತೆಯ ಮೇರೆಗೆ ಸಾಕಷ್ಟು ಸೌಲಭ್ಯತೆಗಳನ್ನು ಉಚಿತವಾಗಿ ಘೋಷಣೆ ಮಾಡಿ ಮಂಜೂರು ಮಾಡಿವೆ. 

ಅರೋಗ್ಯ ಇಲಾಖೆಯಲ್ಲೂ ಸಾಕಷ್ಟು ಸುಧಾರಣೆಗಳನ್ನು ತಂದಿದ್ದು ಇಂದು ಸರಕಾರಿ ಅರೋಗ್ಯ ಸೇವೆಯ ಗುಣಮಟ್ಟ ಖಾಸಗಿ ಸಂಸ್ಥೆಗಳಿಗೆ ಸ್ಪರ್ಧೆ ನೀಡುವಷ್ಟು ಸುಧಾರಣೆ ಕಂಡಿದೆ. ಆದರೆ ನಿಸ್ವಾರ್ಥದಿಂದ ಮತ್ತು ಅಪಾಯಕಾರಿ ವಾತಾವರಣದಲ್ಲಿ ಮಂಚೂಣಿಯಲ್ಲಿ ನಿಂತು ಕರ್ತವ್ಯ ನಿರ್ವಹಿಸುತ್ತಿರುವ ಸರಕಾರಿ ವೈದ್ಯರುಗಳು, ಅರೋಗ್ಯ ಸಹಾಯಕಿಯರು ಮತ್ತು ಆಶಾ ಕಾರ್ಯಕರ್ತೆಯರು ಸಾರ್ವಜನಿಕ ಟೀಕಾ ಪ್ರಹಾರಗಳ ಸವಾಲಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಸಾರ್ವಜನಿಕ ವಲಯ ಸರಕಾರಿ ಸೌಲಭ್ಯತೆಗಳ ಮತ್ತು ಸರಕಾರಿ ನೌಕರರ ಸೇವೆಯನ್ನು ಗುರುತಿಸಿ ಗೌರವಿಸಬೇಕು ಎಂದರು.

ನಗರಸಭೆ ಅಧ್ಯಕ್ಷೆ ಸುಮಿತ್ರಾ ಆರ್ ನಾಯಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಂಘದ ಪದಾಧಿಕಾರಿಗಳಾದ ಗೋಪಾಲ್ ಆಚಾರ್, ಚೇತನನಾಯಕ್, ಸುಖಾನಂದ್, ರಮೇಶ್ ನಾಯಕ್ ಮಾಣಿಬೆಟ್ಟು,ನಗರಸಭಾ ಸದಸ್ಯರಾದ ವಿಜಯಲಕ್ಷ್ಮಿ, ಅಶ್ವಿನಿ ಅರುಣ್ ಪೂಜಾರಿ, ಮಂಜುನಾಥ್ ಮಣಿಪಾಲ, ವೈದ್ಯಾಧಿಕಾರಿ ನರಸಿಂಹ ನಾಯಕ್, ಅರೋಗ್ಯ ಸಹಾಯಕಿಯರಾದ ಹರಿಣಾಕ್ಷಿ, ದಾವಲಬಿ ರುಸ್ತುಮ್, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು, ಹಾಜರಿದ್ದರು.

 
 
 
 
 
 
 
 
 
 
 

Leave a Reply