ವಿಜಯಪುರದಲ್ಲಿ ರಾಜ್ಯಮಟ್ಟದ 37ನೇ ಪತ್ರಕರ್ತರ ಸಮ್ಮೇಳನದ ಪೂರ್ವಭಾವಿ ಸಭೆ

ವಿಜಯಪುರದಲ್ಲಿ ನಡೆಯಲಿರುವ ರಾಜ್ಯಮಟ್ಟದ 37ನೇ ಪತ್ರಕರ್ತರ ಸಮ್ಮೇಳನವನ್ನು ಯಶಸ್ವಿಗೊಳಿಸಲು ದಿಟ್ಟವಾದ ಹೆಜ್ಜೆ ಇಟ್ಟು ಸಂಘದ ಎಲ್ಲ ಸದಸ್ಯರು ಒಟ್ಟಾಗಿ ಕೆಲಸ ಮಾಡಬೇಕು ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರ ಕರೆ ನೀಡಿದರು.

ರವಿವಾರ ನಗರದ ವನಶ್ರೀ ಸಂಸ್ಥಾನ ಮಠದ ಸಭಾಭವನದಲ್ಲಿ ಸಮ್ಮೇಳನದ ಪೂರ್ವಸಿದ್ಧತೆ ಕುರಿತು ಚರ್ಚಿಸಲು ಕರೆಯಲಾಗಿದ್ದ ಕಾನಿಪ ಸಂಘದ ಜಿಲ್ಲೆಯ ಸರ್ವ ಸದಸ್ಯರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ರಾಜ್ಯ ಸಮ್ಮೇಳನ ಅಂದಾಗ ದೊಡ್ಡಮಟ್ಟದ ಸಿದ್ಧತೆ, ವ್ಯವಸ್ಥೆ ಆಗಬೇಕಾಗುತ್ತದೆ. ಸಮ್ಮೇಳನವನ್ನು ಯಾರೂ ಅಷ್ಟು ಲಘುವಾಗಿ ಭಾವಿಸಬಾರದು. ಸಂಘದ ಪ್ರತಿಯೊಬ್ಬ ಸದಸ್ಯರು ಸಮ್ಮೇಳನದ ಭಾಗವಾಗಿ ಅತ್ಯಂತ ಜವಾಬ್ದಾರಿಯಿಂದ ಕೆಲಸ ಮಾಡಬೇಕಾಗುತ್ತದೆ. ಸಮ್ಮೇಳನವನ್ನು ಅಚ್ಚುಕಟ್ಟಾಗಿ, ಯಶಸ್ವಿಯಾಗಿ ನಡೆಯಲು ಎಲ್ಲರೂ ಸಹಕಾರ ನೀಡಬೇಕು ಎಂದು ಅವರು ಮನವಿ ಮಾಡಿಕೊಂಡರು.

ಸಮ್ಮೇಳನಕ್ಕೆ ರಾಜ್ಯದ ಪ್ರತಿ ಜಿಲ್ಲೆಗಳಿಂದ ಪ್ರತಿನಿಧಿಗಳು ಬರುವುದಷ್ಟೇ ಅಲ್ಲದೇ, ಹೊರರಾಜ್ಯ ಹಾಗೂ ಹೊರದೇಶಗಳಿಂದಲೂ ಪತ್ರಕರ್ತರನ್ನು ಆಹ್ವಾನಿಸಲಾಗುತ್ತಿದೆ. ಹೀಗಾಗಿ ವಿಜಯಪುರ ಜಿಲ್ಲೆಯ ಪತ್ರಕರ್ತರ ಮೇಲೆ ಬಹಳ ದೊಡ್ಡ ಜವಾಬ್ದಾರಿ ಇದೆ. ಸಮ್ಮೇಳನದಲ್ಲಿ ಪಾಲ್ಗೊಳ್ಳಲು ನಿಮ್ಮೂರಿಗೆ ಬರುವ ಪತ್ರಕರ್ತರೆಲ್ಲರಿಗೂ ಆದರಾತಿಥ್ಯ ನೀಡುವಲ್ಲಿ ಯಾವುದೇ ರೀತಿ ಲೋಪವಾಗದಂತೆ ನೋಡಿಕೊಳ್ಳಬೇಕು. ಎಲ್ಲರೊಂದಿಗೆ ಅತ್ಯಂತ ಗೌರವದಿಂದ ನಡೆದುಕೊಳ್ಳಬೇಕು. ಇಲ್ಲಿ ನೀವು ತೋರುವ ಪ್ರೀತಿ, ನೀಡುವ ಆದರಾತಿಥ್ಯ ಸಮ್ಮೇಳನ ಮುಗಿಸಿಕೊಂಡು ಪತ್ರಕರ್ತರು ತಮ್ಮ ತಮ್ಮ ಊರುಗಳಿಗೆ ಹೋದ ಮೇಲೂ ಅವರ ಮನದಲ್ಲಿ ಅಚ್ಚಳಿಯದೇ ಉಳಿಯಬೇಕು. ಆ ರೀತಿ ಗೌರವದ ಆದರಾತಿಥ್ಯ ನೀಡುವ ಮೂಲಕ ವಿಜಯಪುರ ಜಿಲ್ಲೆಯ ಕೀರ್ತಿ ಹೆಚ್ಚಿಸಿದಂತಾಗುತ್ತದಲ್ಲದೇ, ರಾಜ್ಯಕ್ಕೂ ಈ ಜಿಲ್ಲೆಯಿಂದ ಒಂದು ಒಳ್ಳೆಯ ಸಂದೇಶ ರವಾನೆಯಾದಂತಾಗುತ್ತದೆ ಎಂದು ಅವರು ಕಿವಿಮಾತು ಹೇಳಿದರು.

ಹಿಂದಿನ ಮೂರು ವರ್ಷಗಳ ಅವಧಿಯಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ಮೂರು ಸಮ್ಮೇಳನಗಳು ಅತ್ಯಂತ ಯಶಸ್ವಿಗಾಗಿ ನಡೆದಿವೆ. ವಿಜಯಪುರ ಸಮ್ಮೇಳನವೂ ಒಂದು ಮಾದರಿ ಸಮ್ಮೇಳನವಾಗಿಸಲು ಎಲ್ಲರೂ ಕೈಜೋಡಿಸಬೇಕು. ಅಖಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮಾದರಿಯಲ್ಲಿಯೇ ಈ ಸಮ್ಮೇಳನ ನಡಸಲಾಗುತ್ತಿದೆ. ಸಮ್ಮೇಳನದಲ್ಲಿ ಜಿಲ್ಲಾಮಟ್ಟದ ಪತ್ರಿಕೆಗಳು, ರಾಜ್ಯಮಟ್ಟದ ಪತ್ರಿಕೆಗಳು ಹಾಗೂ ಸುದ್ದಿಮನೆಯಲ್ಲಿ ಕೆಲಸ ಮಾಡುವ ಪತ್ರಕರ್ತರು ಎದುರಿಸುವ ಸಮಸ್ಯೆಗಳ ಕುರಿತು ವಿವಿಧ ಗೋಷ್ಠಿಗಳು, ಮಹಿಳೆಯರಿಗಾಗಿಯೇ ಒಂದು ಪ್ರತ್ಯೇಕ ಮಹಿಳಾ ಗೋಷ್ಠಿ, ವಸ್ತು ಪ್ರದರ್ಶನ, ಛಾಯಾಚಿತ್ರ ಪ್ರದರ್ಶನ, ಸಾಂಸ್ಕøತಿಕ ಕಾರ್ಯಕ್ರಮಗಳನ್ನೂ ಆಯೋಜಿಸಲಾಗುತ್ತಿದೆ. ಎರಡು ದಿನಗಳ ಸಮ್ಮೇಳನ ಇದಾಗಿದ್ದು, ಮೊದಲನೇ ದಿನ ಮುಖ್ಯಮಂತ್ರಿಗಳು ಉದ್ಘಾಟನೆ ನೆರವೇರಿಸಿ ಸಮ್ಮೇಳನಕ್ಕೆ ಚಾಲನೆ ನೀಡುವರು. ಮಾರನೇ ದಿನ ನಡೆಯುವ ಸಮಾರೋಪ ಸಮಾರಂಭದಲ್ಲಿ ಪತ್ರಕರ್ತರಿಗೆ ಪ್ರಶಸ್ತಿ ವಿತರಣೆ ಮಾಡಲಾಗುವುದು. ಸಮ್ಮೇಳನದ ಸಂದರ್ಭದಲ್ಲಿಯೇ ಸಂಘದ ಸಾಮಾನ್ಯ ಸಭೆಯನ್ನೂ ನಡೆಸಲಾಗುತ್ತದೆ. ಹಿಂದಿನ ಮೂರು ಸಮ್ಮೇಳನದ ರೂಪುರೇಷೆಗಳು ಒಳಗೊಂಡಂತೆ ಈ ಸಮ್ಮೇಳನದÀ ಯಶಸ್ವಿಗೆ ಕಾರ್ಯಯೋಜನೆ ರೂಪಿಸಲಾಗುತ್ತದೆ ಎಂದು ಶಿವಾನಂದ ತಗಡೂರ ಅವರು, ಸಮ್ಮೇಳನದ ಪಕ್ಷಿ ನೋಟವನ್ನು ಸಂಕ್ಷಿಪ್ತವಾಗಿ ಸಭೆಗೆ ತಿಳಿಸಿದರು.

ಸಮ್ಮೇಳನದ ಅಂಗವಾಗಿ “ಪತ್ರಕರ್ತ” ಎಂಬ ಸ್ಮರಣ ಸಂಚಿಕೆ ಹೊರತರಲಾಗುತ್ತದೆ. ಈ ಸಂಚಿಕೆಗೆ ಸಂಘದ ಸದಸ್ಯರು ಜಾಹೀರಾತುಗಳನ್ನು ಕಳುಹಿಸಬಹುದು ಎಂದರು.

ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ ಮಾತನಾಡಿ, ಸಮ್ಮೇಳನ ನಡೆಸಲು ಬೇರೆ- ಬೇರೆ ಜಿಲ್ಲೆಯವರು ಬೇಡಿಕೆ ಇಟ್ಟಿದ್ದರು. ಈ ಬಾರಿಯೂ ಉತ್ತರ ಕರ್ನಾಟಕಕ್ಕೆ ಪ್ರಾಧಾನ್ಯತೆ ನೀಡಿ ವಿಜಯಪುರ ಜಿಲ್ಲೆಗೆ ಸಮ್ಮೇಳನÀ ನಡೆಸಲು ಆತಿಥ್ಯ ವಹಿಸಿಕೊಡಲಾಗಿದೆ. ನಾಡಿನ ವಿವಿಧೆಡೆಯಿಂದ ಆಗಮಿಸುವ ಪ್ರತಿನಿಧಿಗಳಿಗೆ ಪ್ರೀತಿಯಿಂದ ಆದರಾತಿಥ್ಯ ನೀಡಬೇಕು ಎಂದು ಕೋರಿದರು.

ಕೆಯುಡಬ್ಲ್ಯೂಜೆ ರಾಜ್ಯ ಉಪಾಧ್ಯಕ್ಷ ಭವಾನಿಸಿಂಗ್ ಠಾಕೂರ ಮಾತನಾಡಿ, ಪತ್ರಕರ್ತರ ಸಮ್ಮೇಳನ ಈ ಹಿಂದೆ ದಕ್ಷಿಣ ಭಾಗದ ಜಿಲ್ಲೆಗಳಿಗೆ ಮಾತ್ರ ಸೀಮಿತವಾಗಿತ್ತು, ಈಗ ಉತ್ತರ ಕರ್ನಾಟಕಕ್ಕೂ ಪ್ರಾಧಾನ್ಯತೆ ಸಿಗುತ್ತಿದೆ. ಹಿಂದಿನ ಕಲಬುರ್ಗಿ ಸಮ್ಮೇಳನದ ನಂತರ ಈ ವರ್ಷ ಪಕ್ಕದ ವಿಜಯಪುರ ಜಿಲ್ಲೆಗೆ 37ನೇ ಪತ್ರಕರ್ತರ ರಾಜ್ಯ ಸಮ್ಮೇಳನ ನಡೆಸುವ ಅವಕಾಶ ದೊರೆತಿದ್ದು ಹೆಮ್ಮೆಯ ಸಂಗತಿಯಾಗಿದೆ. ನಮ್ಮೊಳಗೆ ಏನೇ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳಿದ್ದರೂ ಅದನ್ನು ಬದಿಗೊತ್ತಿ ಸಂಘದ ಎಲ್ಲ ಸದಸ್ಯರು ಇದು ನಮ್ಮ ಮನೆಯ ಕಾರ್ಯಕ್ರಮವೆಂದು ಭಾವಿಸಿ ಸಮ್ಮೇಳನವನ್ನು ಯಶಸ್ವಿಗೊಳಿಸಬೇಕೆಂದು ಕಿವಿಮಾತು ಹೇಳಿದರು.

ಕಾನಿಪ ಸಂಘದ ಜಿಲ್ಲಾಧ್ಯಕ್ಷ ಸಂಗಮೇಶ ಟಿ.ಚೂರಿ ಪ್ರಾಸ್ತಾವಿಕವಾಗಿ ಮಾತನಾಡಿ, ಸಮ್ಮೇಳನ ಯಶಸ್ವಿಗೆ ಸಂಘದ ಎಲ್ಲ ಸದಸ್ಯರು ಸಂಪೂರ್ಣ ಸಹಕಾರ ನೀಡಬೇಕು. ಸಮ್ಮೇಳನದ ಪೂರ್ವ ಸಿದ್ಧತೆಯ ಚಟುವಟಿಕೆಗ¼ಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಕಳಕಳಿಯ ಮನವಿ ಮಾಡಿದರು.

ಐಎಫ್ ಡಬ್ಲ್ಯೂಜೆ ರಾಷ್ಟ್ರೀಯ ಮಂಡಳಿ ಸದಸ್ಯ ಮಹೇಶ ಶೆಟಗಾರ, ಕಾನಿಪ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾದ ಕೆ.ಕೆ.ಕುಲಕರ್ಣಿ, ಡಿ.ಬಿ.ವಡವಡಗಿ, ವಿಶೇಷ ಆಮಂತ್ರಿತರಾದ ಶ್ರೀಮತಿ ಕೌಶಲ್ಯ ಪನ್ನಾಳಕರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೋಹನ ಕುಲಕರ್ಣಿ, ಹಾಗೂ ಪದಾಧಿಕಾರಿಗಳಾದ ಪ್ರಕಾಶ ಬೆಣ್ಣೂರ, ಅವಿನಾಶ ಬಿದರಿ, ಅವಿನಾಶ ಬಿದರಿ, ಮಲ್ಲಿಕಾರ್ಜುನ ಕೆಂಭಾವಿ, ಶಕೀಲ ಬಾಗಮಾರೆ, ರಾಹುಲ ಆಪ್ಟೆ ವೇದಿಕೆ ಮೇಲಿದ್ದರು. ಸಂಘದ ಜಿಲ್ಲಾ ಉಪಾಧ್ಯಕ್ಷ ಇಂದುಶೇಖರ ಮಣೂರ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ಸಲಹಾ ಸಮಿತಿ ಸದಸ್ಯರಾದ ಜಿ.ಎಸ್.ಕಮತರ, ರುದ್ರಪ್ಪ ಆಸಂಗಿ, ಸಚೇಂದ್ರ ಲಂಬು, ದೇವೇಂದ್ರ ಹೆಳವರ, ರಾಜು ಕೊಂಡಗೂಳಿ, ಅಶೋಕ ಯಡಳ್ಳಿ, ಇರ್ಫಾನ್ ಶೇಖ, ಹಿರಿಯ ಪತ್ರಕರ್ತರಾದ ಸುಶೀಲೇಂದ್ರ ನಾಯಿಕ, ಜಿ.ಸಿ.ಮುತ್ತಲದಿನ್ನಿ, ಗಾಂಧೀಗೌಡ ಪಾಟೀಲ, ಗುರು ಹಿರೇಮಠ, ಟಿ.ಕೆ.ಮಲಗೊಂಡ, ಶ್ರೀಮತಿ ರಶ್ಮಿ ಪಾಟೀಲ, ಶ್ರೀಮತಿ ಲಕ್ಷ್ಮೀ ವಾಲೀಕರ, ಕಾನಿಪ ಸಂಘದ ಸಿಂದಗಿ ತಾಲೂಕು ಅಧ್ಯಕ್ಷ ಆನಂದ ಶಾಬಾದಿ, ಇಂಡಿ ತಾಲೂಕು ಅಧ್ಯಕ್ಷ ಅಬುಶಾಮ ಹವಾಲ್ದಾರ, ಬಸವನ ಬಾಗೇವಾಡಿ ತಾಲೂಕು ಅಧ್ಯಕ್ಷ ಅಜೀಜ್ ಬಳಬಟ್ಟಿ, ನಿಡಗುಂದಿ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ ತೊರಗಲ್ಲಮಠ, ದೇವರ ಹಿಪ್ಪರಗಿ ತಾಲೂಕು ಅಧ್ಯಕ್ಷ ಸಂಗಮಶ ಉತ್ನಾಳ, ಪ್ರಧಾನ ಕಾರ್ಯದರ್ಶಿ ಶಿವಾನಂದ ಕುಂಬಾರ, ಚಡಚಣ ತಾಲೂಕು ಅಧ್ಯಕ್ಷ ರಮೇಶ ಬಿರಾದಾರ, ಮುದ್ದೇಬಿಹಾಳ ತಾಲೂಕು ಮಾಜಿ ಅಧ್ಯಕ್ಷ ಅಮೀನಸಾಬ ಮುಲ್ಲಾ ಸೇರಿದಂತೆ ಸಂಘದ ಜಿಲ್ಲೆಯ ವಿವಿಧ ತಾಲೂಕು ಘಟಕಗಳ ಹಲವಾರು ಸದಸ್ಯರು ಸಭೆಯಲ್ಲಿ ಭಾಗವಹಿಸಿದ್ದರು.

 
 
 
 
 
 
 
 
 
 
 

Leave a Reply