ಉಡುಪಿ: ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣಗಳು ಕಳವು!

ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣಗಳಿದ್ದ ಬ್ಯಾಗ್ ಕಳವಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಐರೋಡಿ ಗ್ರಾಮದ ಸಂಗೀತಾ ಭಟ್(40) ಎಂಬವರು ಡಿ.24ರಂದು ಬೆಳಗ್ಗೆ ಗೋವಾದ ಪಣಜಿಯಿಂದ ಪುತ್ತೂರಿಗೆ ಹೊರಡುವ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಊರಿಗೆ ಹೊರಟಿದ್ದರು.

ಅವರು ಕಳೆದ ಡಿ.24ರಂದು ಬೆಳಗ್ಗೆ ಸುಮಾರು 7 ಗಂಟೆಗೆ ಪಣಜಿಯಿಂದ ಪುತ್ತೂರಿಗೆ ಹೊರಡುವ ಕೆ.ಎಸ್‌.ಆರ್‌.ಟಿ.ಸಿ. ಬಸ್‌ನಲ್ಲಿ ಊರಿಗೆ ಪ್ರಯಾಣಿಸುತ್ತಿರುವಾಗ ಟ್ರಾಲಿ ಬ್ಯಾಗ್‌ನಲ್ಲಿ ಬಟ್ಟೆ ಬರೆ ಹಾಗೂ ಅದರ ಒಳಗಡೆ ಸಣ್ಣ ವಸ್ತ್ರದ ಚೀಲದಲ್ಲಿ ಚಿನ್ನಾಭರಣ ಇಟ್ಟು ಬ್ಯಾಗಿಗೆ ಬೀಗ ಹಾಕಿ ಕುಳಿತ ಸೀಟಿನ ಕೆಳಗಡೆ ಇಟ್ಟುಕೊಂಡಿದ್ದರು. ತನ್ನೂರು ಬಂದಾಗ ಮಾಬುಕಳದಲ್ಲಿ ಅವರು ಇಳಿದಿದ್ದು, ಮರುದಿನ ಬೆಳಗ್ಗೆ ಮನೆಯಲ್ಲಿ ಬ್ಯಾಗ್‌ ನೋಡಿದಾಗ ಅದರಲ್ಲಿದ್ದ 20 ಲಕ್ಷ ರೂ. ಮೌಲ್ಯದ ಚಿನ್ನದ ಆಭರಣಗಳು ನಾಪತ್ತೆಯಾಗಿರುವುದು ಗೊತ್ತಾಗಿತ್ತು.

ಬಸ್‌ನಲ್ಲಿ ಹಿಂದೆ ಕುಳಿತಿರುವ ಹಿಂದಿ ಮಾತನಾಡುವ ಇಬ್ಬರು ವ್ಯಕ್ತಿಗಳ ಮೇಲೆ ಅನುಮಾನ ಮೂಡಿಬಂದಿರುತ್ತದೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

 
 
 
 
 
 
 
 
 
 
 

Leave a Reply