ಕೋಟ: ಕನ್ನಡ ಭಾಷೆ ಯಾವಾಗ ಕನ್ನಡಿಗರ ಹಸಿವನ್ನ ನೀಗಿಸುತ್ತದೆಯೋ ಆಗ ನಮ್ಮ ಕನ್ನಡ ಭಾಷೆ ಉಳಿಯುತ್ತದೆ ಎಂದು ಕೋಟೇಶ್ವರದ ಕಾಳಾವರ ವರದರಾಜ ಎಂ ಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ರಾಜೇಂದ್ರ ಎಸ್ ನಾಯಕ್ ಹೇಳಿದರು.
ಇತ್ತೀಚಿಗೆ ಸಾಲಿಗ್ರಾಮ ಗುಂಡ್ಮಿ ಯಕ್ಷಗಾನ ಕಲಾಕೇಂದ್ರದ ಸದಾನಂದ ರಂಗ ಮಂಟಪದಲ್ಲಿ ಭಾನುವಾರ ಕನ್ನಡ ಸಾಹಿತ್ಯ ಪರಿಷತ್ತಿನ ಬ್ರಹ್ಮಾವರ ತಾಲ್ಲೂಕು ಘಟಕದ ನೂತನ ಪದಾಧಿಕಾರಿಗಳ ಪದಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಇಂಗ್ಲೀಷ್ ವ್ಯಾಮೋಹ, ಶೈಕ್ಷಣಿಕ ಕ್ರಾಂತಿ, ಔದ್ಯೋಗಿಕ ಕ್ರಾಂತಿಯಿAದಾಗಿ ನಾವು ನಮ್ಮ ಮಾತೃಭಾಷೆಯಿಂದ ದೂರವಾಗುತ್ತಿದ್ದೇವೆ. ಆದರೆ ನಮ್ಮ ಮಾತೃಭಾಷೆಯ ಬಗ್ಗೆ ಆಸಕ್ತಿ, ತುಡಿತ ಇದ್ದಲ್ಲಿ ಕನ್ನಡ ಎಂದೂ ಅಳಿಯುವುದಿಲ್ಲ ಎಂದರು.
ಬ್ರಹ್ಮಾವರ ತಾಲ್ಲೂಕು ಘಟಕದ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಮಾಡಿದ ಗುಂಡ್ಮಿ ರಾಮಚಂದ್ರ ಐತಾಳ ಮಾತನಾಡಿ ಭಾಷೆಯ ಬೆಳವಣಿಗೆಗೆ ಅನ್ಯ ಭಾಷೆಗಳು ಸಹಕಾರಿಯಾಗುತ್ತದೆ. ಸಾಹಿತ್ಯ ಕಲೆ ಮನಸ್ಸಿಗೆ ನೆಮ್ಮದಿ ನೀಡುವುದರೊಂದಿಗೆ ಸಮಾಜವನ್ನು ಮುನ್ನಡೆಸುತ್ತದೆ ಎಂದು ಹೇಳಿದರು.
ಯೋಜನೆಗಳು :
ಮುಂದಿನ ತನ್ನ ಅಧಿಕಾರದ ಅವಧಿಯಲ್ಲಿ ಸದಸ್ಯತ್ವವನ್ನು ಹೆಚ್ಚಿಸುವ ಬಗ್ಗೆ ಪ್ರಯತ್ನ, ಪ್ರೌಢಶಾಲೆಗಳಲಿ ಕವನ ಕಮ್ಮಟಗಳ ರಚನೆ, ಮನೆಯಂಗಳದಲ್ಲಿ ಸಾಹಿತ್ಯ ಸಂಭ್ರಮ. ಕನ್ನಡದ ಪ್ರಸಿದ್ಧ ಸಾಹಿತಿಗಳ ಕಾದಂಬರಿಗಳ ಸಾರಾಂಶವನ್ನು ವಿದ್ಯಾರ್ಥಿಗಳಿಗೆ ತಿಳಿಸುವ ಪ್ರಯತ್ನ, ಕುಂದಗನ್ನಡದ ಬಗ್ಗೆ ಕಾರ್ಯಕ್ರಮ, ಶಾಲೆಗಳಲ್ಲಿ ರಾಮಾಯಣ ಮಹಾಭಾರತದ ಸಂದೇಶಗಳನ್ನು ತಿಳಿಸುವ ಪ್ರಯತ್ನ ಮಾಡಲ ಯೋಜನೆ ರೂಪಿಸಲಾಗುವುದು ಎಂದರು.
ಕ.ಸಾ.ಪದ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ನೂತನ ಪದಾಧಿಕಾರಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.
ಹಂಗಾರಕಟ್ಟೆ ಯಕ್ಷಗಾನ ಕಲಾಕೇಂದ್ರದ ಕಾರ್ಯದರ್ಶಿ ರಾಜಶೇಖರ ಹೆಬ್ಬಾರ್, ಕ.ಸಾ.ಪ ಉಡುಪಿ ಜಿಲ್ಲೆಯ ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ, ನರೇಂದ್ರ ಕುಮಾರ್ ಕೋಟ, ನಿಕಟ ಪೂರ್ವ ಅಧ್ಯಕ್ಷ ನಾರಾಯಣ ಮಡಿ ಇದ್ದರು.
ತಾಲ್ಲೂಕು ಘಟಕದ ಗೌರವ ಕಾರ್ಯದರ್ಶಿ ಜಿ.ಫಕೀರಪ್ಪ ಸ್ವಾಗತಿಸಿದರು. ಜ್ಯೋತಿ ಕೃಷ್ಣ ಪೂಜಾರಿ ವಂದಿಸಿದರು. ಗೌರವ ಕೋಶಾಧಿಕಾರಿ ಅಲ್ತಾರು ನಾಗರಾಜ ಕಾರ್ಯಕ್ರಮ ನಿರೂಪಿಸಿದರು.
ಸಾಲಿಗ್ರಾಮ ಗುಂಡ್ಮಿ ಯಕ್ಷಗಾನ ಕಲಾಕೇಂದ್ರದ ಸದಾನಂದ ರಂಗ ಮಂಟಪದಲ್ಲಿ ಭಾನುವಾರ ಕನ್ನಡ ಸಾಹಿತ್ಯ ಪರಿಷತ್ತಿನ ಬ್ರಹ್ಮಾವರ ತಾಲ್ಲೂಕು ಘಟಕದ ನೂತನ ಪದಾಧಿಕಾರಿಗಳ ಪದಪ್ರದಾನ ಕಾರ್ಯಕ್ರಮ ಇತ್ತೀಚಿಗೆ ನಡೆಯಿತು . ಬ್ರಹ್ಮಾವರ ತಾಲ್ಲೂಕು ಘಟಕದ ನೂತನ ಅಧ್ಯಕ್ಷ ಗುಂಡ್ಮಿ ರಾಮಚಂದ್ರ ಐತಾಳ, ಕ.ಸಾ.ಪದ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಹಂಗಾರಕಟ್ಟೆ ಯಕ್ಷಗಾನ ಕಲಾಕೇಂದ್ರದ ಕಾರ್ಯದರ್ಶಿ ರಾಜಶೇಖರ ಹೆಬ್ಬಾರ್ ಮತ್ತಿತರರು ಉಪಸ್ಥಿತರಿದ್ದರು.