ಮಲ್ಪೆ: ಬಹುಶಃ ಸಾಮೂಹಿಕ ಬ್ರಹ್ಮೋಪದೇಶವನ್ಮು ಪ್ರಥಮವಾಗಿ ಪ್ರಾರಂಭಿಸಿದ ಬ್ರಾಹ್ಮಣ ವಲಯ ಎಂದರೆ ಅದು ಕೊಡವೂರು ಬ್ರಾಹ್ಮಣ ಮಹಾಸಭಾ
ಕಳೆದ 24 ವರ್ಷಗಳಿಂದ ಲೋಕ ಕಲ್ಯಾಣಾರ್ಥಗೋಸ್ಕರ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸದಾ ಸಮಾಜ ಬಾಂಧವರ ಸೇವೆ ಮಾಡುತ್ತಾ ಇಂದು 25ನೆ ವರ್ಷಕ್ಕೆ ಪಾದಾರ್ಪಣೆ ಮಾಡುವ ಈ ಸಂದರ್ಭದಲ್ಲಿ ರಜತೋತ್ಸವವನ್ನು ಉದ್ಘಾಟಿಸಲು ತುಂಬಾ ಸಂತೋಷವಾಗುತ್ತದೆ ಎಂದು ಪಲಿಮಾರು ಮಠದ ಕಿರಿಯ ಪಟ್ಟ ಶ್ರೀ ಶ್ರೀ ವಿದ್ಯಾರಾಜೇಶ್ವರ ತೀರ್ಥ ಶ್ರೀಪಾದರು ಹೇಳಿದರು. ಅವರು ಬುಧವಾರದಂದು ಕೊಡವೂರು ಬ್ರಾಹ್ಮಣ ಮಹಾಸಭಾದ ರಜತೋತ್ಸವ ಸರಣಿ ಕಾರ್ಯಕ್ರ್ರಮಗಳ ಸಮಾರಂಭವನ್ನು ಉದ್ಘಾಟಿಸಿ, ಆಶೀರ್ವಚನ ನೀಡಿದರು. ವೇದಿಕೆಯಲ್ಲಿ ಇದ್ದ ಎಲ್ಲಾ ಅತಿಥಿಗಳು 24 ದೀಪಗಳನ್ನು ಬೆಳಗಿದರೆ, ಪೂಜ್ಯ ಸ್ವಾಮೀಜಿಯವರು 25 ನೇ ಬೆಳ್ಳಿ ದೀಪ ಬೆಳಗಿಸಿದರು. ಈ ಸಂದರ್ಭದಲ್ಲಿ 25 ಮಂದಿ ಮಹಿಳೆಯರು ಶಂಖನಾದ ಮೊಳಗಿಸಿದರು.ಇದೇ ಸಂದರ್ಭದಲ್ಲಿ ಖ್ಯಾತ ಭಾಷಾ ವಿಜ್ಞಾನಿ ಹಾಗೂ ಕನ್ನಡ ಗಣಕ ಕೀಲಿಮಣೆ ಕರ್ತೃ ಶ್ರೀ ಕೆ. ಪಿ. ರಾವ್ ಇವರಿಗೆ “ವಿಪ್ರ ಜ್ಞಾನಿ” ಎಂಬ ಬಿರುದನ್ನು ನೀಡಿ ಸನ್ಮಾನಿಸಲಾಯಿತು. ಕೊಡವೂರು ಬ್ರಾಹ್ಮಣ ಮಹಾಸಭಾ ಪ್ರಾರಂಭವಾಗಲು ಮಾರ್ಗದರ್ಶನ ನೀಡಿದ ಶ್ರೀ ಹರಿದಾಸ ಉಪಾಧ್ಯಾಯ ಹಾಗೂ ಶ್ರೀ ಜಯರಾಮ ರಾವ್ ಮತ್ತು ಕೊಡವೂರು ಬ್ರಾಹ್ಮಣ ಮಹಾಸಭಾದ ಸ್ಥಾಪಕ ಕಾರ್ಯದರ್ಶಿ ಶ್ರೀ ಗೋವಿಂದ ಐತಾಳರನ್ನು ಗೌರವಿಸಲಾಯಿತು.
ಮುಖ್ಯ ಅತಿಥಿಗಳಾಗಿ ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯದ ಧರ್ಮಾಧಿಕಾರಿ ಡಾ|| ಭೀಮೇಶ್ವರ ಜೋಶಿಯವರು, ಕರ್ನಾಟಕ ಬ್ಯಾಂಕಿನ ಡಿ.ಜಿ.ಎಂ ಶ್ರೀ ಬಿ ಗೋಪಾಲಕೃಷ್ಣ ಸಾಮಗ, ಉಡುಪಿ ತಾಲ್ಲೂಕು ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಶ್ರೀ ಮಂಜುನಾಥ ಉಪಾಧ್ಯಾಯ ಹಾಗು ವೇದಮೂರ್ತಿ ಶ್ರೀ ರಾಧಾಕೃಷ್ಣ ಉಪಾಧ್ಯಾಯ, ಕಂಬಳಕಟ್ಟ ಆಗಮಿಸಿದ್ದರು. ಇದೇ ಸಂದರ್ಭದಲ್ಲಿ ರಜತೋತ್ಸವದ ಬಗ್ಗೆ ಮನವಿಯೊಂದನ್ನು ಬಿಡುಗಡೆಗೊಳಿಸಲಾಯಿತು.