ಕಾಶಿ ಮಸೀದಿಯಲ್ಲಿ ಶುಭ ಲಗ್ನದಲ್ಲಿ ಶಿವಲಿಂಗ ದರ್ಶನ..!

ಇವತ್ತು ಶುಭಕೃತ್ ಸಂವತ್ಸರದ, ವೃಷಭ ಮಾಸದ ವೈಶಾಖ ಶುದ್ಧ ಪೌರ್ಣಮಿ. ಅಲ್ಲದೆ ಸೋಮವಾರವೂ ಆಗಿದೆ. ಇವತ್ತು ಮಧ್ಯಾಹ್ನ ಕರ್ಕಾಟಕ ಲಗ್ನ ಕಾಲದಲ್ಲಿ ಕಾಶಿ ವಿಶ್ವನಾಥನ ಸಾನಿಧ್ಯ ಶೋಧನೆ ಮಾಡಿದಾಗ ಗಂಗೆಯೊಳಗಿಂದ ಈಶ್ವರನ ಮೂಲ ಬಿಂಬವಾದ ಶಿವಲಿಂಗ ದರ್ಶನವಾಯ್ತು. ಅದೆಷ್ಟೋ ವರ್ಷದಿಂದ ವೃಷಭ (ನಂದಿ) ಕಾಯುತ್ತಾ ಇತ್ತು ಲಿಂಗ ದರ್ಶನಕ್ಕೆ..! ಇವತ್ತು ವೃಷಭ ಮಾಸದ ಮೊದಲ ದಿನವೇ ನಂದಿಯು ಪರಮೇಶ್ವರನ ದರ್ಶನ ಪಡೆದ. ನಾವೆಲ್ಲ ಕೇವಲ ನಿಮಿತ್ತ ಮಾತ್ರ ಎಂಬುದು ಇಲ್ಲಿ ಅರ್ಥ ಮಾಡಿಕೊಳ್ಳಬೇಕು.

ಶಿವಲಿಂಗ ದರ್ಶನವಾದ ಕ್ಷಣದ ಕುಂಡಲಿ ಏನು ಹೇಳುತ್ತದೆ..?

ಕರ್ಕ ಲಗ್ನ, ಲಗ್ನಕ್ಕೆ ಚತುರ್ಥ ಕೇತು, ಅಷ್ಟಮದಲ್ಲಿ ಶನಿ ಕುಜರ ಗ್ರಹ ಯುದ್ಧ, ಭಾಗ್ಯದಲ್ಲಿ ಲಗ್ನದಲ್ಲಿ ಉಚ್ಚನಾಗುವ ಗುರು ಸ್ವಕ್ಷೇತ್ರದಲ್ಲಿ. ವಿಶೇಷ ಎಂದರೆ ಆ ಗುರುವೂ ಲಗ್ನವನ್ನೇ ನೋಡುವುದು. ಲಗ್ನ ಪಂಚಮವನ್ನೂ ನೋಡುವುದು. ಈ ಮೂರೂ ಕ್ಷೇತ್ರಗಳೂ ಜಲ ತತ್ವದ ತ್ರಿಕೋಣ ರಾಶಿಗಳೇ. ಯಾಕೆ ಮತ್ತೊಂದು ಗಂಟೆಯ ನಂತರ ಶಿವಲಿಂಗ ಕಾಣಬಾರದಿತ್ತೇ? ಲಗ್ನಾಧಿಪತಿ ಚಂದ್ರನನ್ನೂ ಗುರು ವೀಕ್ಷಣೆ ಇನ್ನೊಂದು ವಿಶೇಷ. ಒಟ್ಟಿನಲ್ಲಿ ಇದೊಂದು ದೈವ ಪ್ರೇರಣೆ ಎನ್ನಬೇಕಷ್ಟೆ.

ಇವತ್ತಿನ ನಕ್ಷತ್ರ ಪ್ರಕಾರ ಅದೂ ಗುರು ನಕ್ಷತ್ರವೇ. ಗುರುವಿಗೆ ಪುನರ್ವಸು ನಕ್ಷತ್ರ (ರಾಮನ ನಕ್ಷತ್ರ), ಪೂರ್ವಾಭಾದ್ರ, ವಿಶಾಖ ನಕ್ಷತ್ರಗಳು ಬರುತ್ತದೆ. ಇವತ್ತಿನ ನಕ್ಷತ್ರಕ್ಕೆ ಗುರು ದಶೆಯೂ ಇದೆ. ಗುರು ಎಂದರೆ ರುದ್ರಾಂಶವೇ. ವಿಷ್ಣು ಅಂಶದ ಬುಧನಿಗೆ ನಿಪುಣ ಯೋಗ ಏಕಾದಶದಲ್ಲಿ. ಇದು ಕಿರೀಟ ಸ್ಥಾನ.

ಅಂದರೆ ಈ ಭೂಮಿಯ ಕಿರೀಟವೇ ಶ್ರೀರಾಮ ಚಂದ್ರ ಪ್ರಭು. ಅವನ ಮಂದಿರದ ಕುಂಭಾಭಿಷೇಕದ ಪೂರ್ವಭಾವಿಯಾಗಿ ರುದ್ರ ದೇವರು ಆಶೀರ್ವದಿಸಲು ಬಂದಂತಿದೆ. ಅಂದರೆ ನಾವು ಮಾನವರು. ನಮ್ಮ ಈಗಿನ ಆಡಳಿತವು ಲೋಪವಿಲ್ಲದೆ ಕೆಲಸ ಮಾಡುತ್ತಿದೆ. ಹಾಗಾಗಿ ದೇವ ದೇವರುಗಳು ಅನುಗ್ರಹ ನೀಡುತ್ತಿದ್ದಾರೆ ಎಂದರ್ಥ.
ಜ್ಞಾನವಾಪಿ ಮಸೀದಿ ಪ್ರಕರಣದ ತೀರ್ಪು ಕೊಟ್ಟ ನ್ಯಾಯಾಧೀಶರಿಗೆ ಜೀವಭಯ!
ಇವೆಲ್ಲದರ ಪರಿಣಾಮವಾಗಿ ಶತ್ರುಗಳು ಕಲಹಕ್ಕಿಳಿಯುವ ಸಾಧ್ಯತೆಗಳನ್ನು ಸೂಚಿಸುತ್ತದೆ. ಅಷ್ಟಮದಲ್ಲಿ ಕುಜ ಇರುವುದು ಕಲಹ ಲಕ್ಷಣವೆ. ಆದರೆ ಆ ಕುಜನು ಸ್ವಕ್ಷೇತ್ರ, ಮೂಲ ತ್ರಿಕೋಣದ ಶನಿ ಮಹರಾಜರೊಂದಿಗೆ ಗ್ರಹ ಯುದ್ಧದಲ್ಲಿ ಇರುವುದು ಇದೊಂದು ಪ್ರಯೋಜನವಾಗದ ವ್ಯರ್ಥ ಕಲಹದ ಸೂಚನೆ. ಅಲ್ಲಿ ಶನಿಗೇ ಜಯ. ಗುರುವು ಜಲ ರಾಶಿಯಲ್ಲಿ ಉಚ್ಚ ಶುಕ್ರನೊಂದಿಗಿರುವುದು ಶೃಂಗಾರ ಗೌರಿಯ ಜತೆಗೆ ಶಿವನು ವಿರಾಜಮಾನನಾಗಿದ್ದಾನೆ ಎನ್ನುವುದರ ಸೂಚನೆ.

ಬಹಳ ಅಲಂಕಾರಯುಕ್ತವಾದ ಮಂದಿರ ಅದಾಗಿತ್ತು. ಆದರೆ ರಾಕ್ಷಸರು ಅದನ್ನು ನಾಶಮಾಡಲು ಯತ್ನಿಸಿದ್ದರು ಎಂಬುದರ ಸೂಚನೆ. ಈ ಸಾನ್ನಿಧ್ಯದ ಪರಿವಾರದಲ್ಲಿ ಗಣಪತಿ, ಸರ್ಪ, ವಿಷ್ಣು ಸಾನ್ನಿಧ್ಯಗಳಲ್ಲದೆ, ಇನ್ನೂ ಅನೇಕ ಸ್ವರೂಪದ ಶಿವನ ಸಾನ್ನಿಧ್ಯಗಳೂ ಸೇರಿವೆ ಎಂದರ್ಥ.

ಒಟ್ಟಿನಲ್ಲಿ ಮುಂದೆ ಕಾಶೀ ದರ್ಶನವು ಶಿವನ ಸಕಲ ಪರಿವಾರವಿರುವ ಕೈಲಾಸ ದರ್ಶನ ಎಂಬುದರಲ್ಲಿ ಎರಡು ಮಾತಿಲ್ಲ. ಈವತ್ತಿನ ಸೂಚನೆಯ ಪ್ರಕಾರ ಶ್ರೀಕೃಷ್ಣ ಮಂದಿರ ಮಥರಾ ನಗರಕ್ಕೂ ಮುಕ್ತಿ ದೊರಕಿಸಲಿದೆ. ಬಹುಶಃ ಏಕಕಾಲಕ್ಕೆ ಅಯೋಧ್ಯಾ, ಮಥುರಾ, ಕಾಶಿಗಳು ಆಕ್ರಮಣಕ್ಕೊಳಗಾಗಿ, ಅದೇ ಏಕಕಾಲಕ್ಕೆ ಮತ್ತೆ ಮುಕ್ತಿ ಪಡೆಯುವುದರ ಸೂಚನೆ ಈ ಕುಂಡಲಿಯಲ್ಲಿದೆ.

ಲೇಖಕರು: ಪ್ರಕಾಶ್ ಅಮ್ಮಣ್ಣಾಯ, ಖ್ಯಾತ ಜ್ಯೋತಿರ್ವಿಜ್ಞಾನಿಗಳು

 
 
 
 
 
 
 
 
 
 
 

Leave a Reply