ಉಡುಪಿ ಕಲ್ಸಂಕ ಜಂಕ್ಷನ್ ವಾಹನ ದಟ್ಟಣೆ ತಪ್ಪಿಸಲು ಸರ್ಕಲ್ ನಿರ್ಮಾಣಕ್ಕೆ ಚಿಂತನೆ

 ತೀರ್ಥಹಳ್ಳಿ – ಮಲ್ಪೆ ರಾಷ್ಟ್ರೀಯ ಹೆದ್ದಾರಿ – 169A ಹಾದುಹೋಗುವ ಕಲ್ಸಂಕ ಜಂಕ್ಷನ್ ನಲ್ಲಿ ಅತಿಯಾದ ವಾಹನ ದಟ್ಟಣೆಯಿಂದ ಸಾರ್ವಜನಿಕವಾಗಿ ಸಮಸ್ಯೆಗಳು ಉಂಟಾಗುತ್ತಿದ್ದು, ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಕಲ್ಸಂಕ ಜಂಕ್ಷನ್ ನಲ್ಲಿ ಸರ್ಕಲ್ ರಚಿಸುವ ಬಗ್ಗೆ ಇಂದು ದಿನಾಂಕ 23-04-2022 ರಂದು ರಾಷ್ಟ್ರೀಯ ಹೆದ್ದಾರಿ ಇಂಜಿನಿಯರ್ ಗಳ ಜೊತೆ ಶಾಸಕ ರಘುಪತಿ ಭಟ್ ಸಭೆ ನಡೆಸಿ ಚರ್ಚಿಸಿದರು.

ಈ ತೀರ್ಥಹಳ್ಳಿ – ಮಲ್ಪೆ ರಾಷ್ಟ್ರೀಯ ಹೆದ್ದಾರಿ – 169A ಹಾದು ಹೋಗುವ ಪರ್ಕಳ ಪೇಟೆಯಿಂದ ಮಣಿಪಾಲ, ಉಡುಪಿ ನಗರದವರೆಗೆ ನಗರ ಪ್ರದೇಶವಾಗಿದ್ದು, ಉಡುಪಿ ಕೃಷ್ಣಮಠವನ್ನು, ಮಲ್ಪೆಯನ್ನು ಹಾಗೂ ಬೆಂಗಳೂರು – ಮಂಗಳೂರು – ಮುಂಬಾಯಿ ಸಂಪರ್ಕಿಸುವ ಪ್ರಮುಖ ರಾಷ್ಟ್ರೀಯ ಹೆದ್ದಾರಿಯನ್ನು ಸಂಪರ್ಕಿಸುವ ವಾಹನಗಳು ಈ ರಸ್ತೆಯಲ್ಲಿ ಹಾದು ಹೋಗುತ್ತಿರುತ್ತದೆ. ವಿಶ್ವವಿಖ್ಯಾತ ಶ್ರೀಕೃಷ್ಣಮಠಕ್ಕೆ ಬರುವ ಯಾತ್ರಿಕರ ವಾಹನಗಳು ಈ ಕಲ್ಸಂಕ ಜಂಕ್ಷನ್ ನಲ್ಲಿ ತಿರುವನ್ನು ಪಡೆಯುತ್ತಿದೆ.

ಈ ಉಡುಪಿ ಕಲ್ಸಂಕ ಜಂಕ್ಷನ್ ನಲ್ಲಿ ಅತಿಯಾದ ವಾಹನ ದಟ್ಟಣೆ ಉಂಟಾಗುವುದನ್ನು ತಪ್ಪಿಸುವ ನಿಟ್ಟಿನಲ್ಲಿ ವಾಹನಗಳು ತಡೆಯಿಲ್ಲದೆ ಸಂಚರಿಸುವಂತಾಗಲು ಶಾಸಕ ರಘುಪತಿ ಭಟ್ ಅವರು ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳಿಗೆ ಸರ್ಕಲ್ ರಚಿಸುವ ಬಗ್ಗೆ ತಿಳಿಸಿರುವಂತೆ ಈ ಯೋಜನೆಯ ಅಂದಾಜು ವೆಚ್ಚಗಳ ಸಹಿತ ಪ್ರಾಯೋಗಿಕ ನೀಲನಕ್ಷೆಯನ್ನು ತಯಾರಿಸಿ ರಾಷ್ಟ್ರೀಯ ಹೆದ್ದಾರಿಯ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ನಾಗರಾಜ್ ನಾಯ್ಕ್ ಹಾಗೂ ಸಹಾಯಕ ಅಭಿಯಂತರರಾದ ಮಂಜುನಾಥ್ ನಾಯಕ್ ಅವರು ವಿವರಗಳನ್ನು ನೀಡಿ ಚರ್ಚಿಸಿದರು.

ಈ ನೀಲನಕ್ಷೆಯಲ್ಲಿ ಕೆಲವೊಂದು ಬದಲಾವಣೆಗಳನ್ನು ಸೂಚಿಸಿ ಸಾರ್ವಜನಿಕವಾಗಿ ಯಾವುದೇ ಸಮಸ್ಯೆಗಳು ಉಂಟಾಗದೆ ಎಲ್ಲಾ ದಿಕ್ಕುಗಳಿಂದ ಬರುವ ವಾಹನಗಳು ಈ ಕಲ್ಸಂಕ ಜಂಕ್ಷನ್ ನಲ್ಲಿ ಯಾವುದೇ ತಡೆಯಿಲ್ಲದೆ ಸಂಚರಿಸುವಂತಾಗಲು ರೂ. 30.00 ಕೋಟಿ ವೆಚ್ಚದ ಸಮರ್ಪಕವಾದ ಸರ್ಕಲ್ ನಿರ್ಮಾಣಕ್ಕೆ ಸೂಕ್ತ ಪ್ರಸ್ತಾವನೆ ತಯಾರಿಸುವ ಬಗ್ಗೆ ಅಧಿಕಾರಿಗಳಿಗೆ ತಿಳಿಸಿದರು.

 
 
 
 
 
 
 
 
 
 
 

Leave a Reply