ವಿದ್ಯಾರ್ಥಿಗಳ ಮನೋಸ್ಥೈರ್ಯ ಹೆಚ್ಚಿಸಿದ  ಜಿಲ್ಲಾಧಿಕಾರಿ ಎಂ.ಕೂರ್ಮ ರಾವ್ 

ಉಡುಪಿ: ವಿದ್ಯಾರ್ಥಿಗಳು ಶಾಲೆಯಲ್ಲಿ ಕಲಿಕೆಯ ಜೊತೆಗೆ ಕೋವಿಡ್ ಸೋಂಕು ಹೋಗಲಾಡಿಸುವ ಕಾರ್ಯದಲ್ಲಿ ಕೈ-ಜೋಡಿಸಬೇಕು ಎಂದು ಜಿಲ್ಲಾಧಿಕಾರಿ ಎಂ.ಕೂರ್ಮ ರಾವ್  ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಅವರು ಬುಧವಾರ ಜಿಲ್ಲೆಯಲ್ಲಿ 9 ಮತ್ತು 10 ನೇ ತರಗತಿ ಹಾಗೂ ಪದವಿಪೂರ್ವ ಕಾಲೇಜುಗಳು ಆರಂಭಗೊಂಡ ಹಿನ್ನೆಲೆಯಲ್ಲಿ ನಗರದ ಬಾಲಕಿಯರ ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜಿಗೆ ಭೇಟಿ ನೀಡಿ, ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸುವ ಬಗ್ಗೆ ಪರಿಶೀಲನೆ ನಡೆಸಿ ವಿದ್ಯಾರ್ಥಿಗಳೊಂದಿಗೆ ಮಾತನಾಡಿದರು. ಶಾಲೆಗಳಿಗೆ ವಿದ್ಯಾರ್ಥಿಗಳನ್ನು ಪೋಷಕರು ಶಿಕ್ಷಕರ ಮೇಲೆ ನಂಬಿಕೆಯನ್ನಿಟ್ಟು ಒಪ್ಪಿಗೆ ಪತ್ರವನ್ನು ನೀಡುವುದ ರೊಂದಿಗೆ ಕಳುಹಿಸುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ಪಠ್ಯದ ಚಟುವಟಿಕೆಗಳನ್ನು ಕಲಿಸುವುದರ ಜೊತೆಗೆ, ಕೋವಿಡ್ ಸೋಂಕು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಅರಿವು ಮೂಡಿಸಿ ಅವರುಗಳು ತಮ್ಮ ಪಾಲಕರು ಸೇರಿದಂತೆ ಕುಟುಂಬ ವರ್ಗದವರಿಗೆ ಮನವರಿಕೆ ಮಾಡಿ ಮುಂಜಾಗ್ರತೆ ವಹಿಸುವಂತೆ ಶಿಕ್ಷಕರು ನೋಡಿಕೊಳ್ಳಬೇಕು. ವಿದ್ಯಾರ್ಥಿಗಳೂ ಸಹ ಈ ಕಾರ್ಯಕ್ಕೆ ಮುಂದಾಗಬೇಕು ಎಂದರು.ವಿದ್ಯಾರ್ಥಿಗಳು ಕಳೆದ ಒಂದೂವರೆ ವರ್ಷದಿಂದ ಕೊರೋನ ಸೋಂಕು ಮಹಾಮಾರಿ ವ್ಯಾಪಕ ಹರಡುವಿಕೆ ಹಿನ್ನೆಲೆಯಲ್ಲಿ ಶಾಲಾ ಕಾಲೇಜುಗಳಿಗೆ ಹಾಜರಾಗದೆ, ಆನ್‌ಲೈನ್ ಶಿಕ್ಷಣ ಪಡೆಯುತ್ತಿದ್ದರು. ಇಂದಿನಿಂದ ಭೌತಿಕ ತರಗತಿಗಳು ಪ್ರಾರಂಭವಾದ ಹಿನ್ನೆಲೆ ವಿದ್ಯಾರ್ಥಿಗಳು ಶಿಕ್ಷಕರಿಂದ ನೇರವಾಗಿ ಪಾಠಗಳನ್ನು ಕೇಳುವುದರೊಂದಿಗೆ ತಮ್ಮ ಸ್ನೇಹಿತರ ಜೊತೆಗೆ ಬೆರೆಯಲು ಅವಕಾಶ ದೊರೆತಿದೆ ಎಂದರು.ಜಿಲ್ಲೆಯಲ್ಲಿ ಸರಕಾರಿ ಶಾಲೆಯ ಶಿಕ್ಷಕರು ಶೇ. 100 ರಷ್ಟು ಹಾಗೂ ಅನುದಾನಿತ ಶಾಲೆಯ ಶಿಕ್ಷಕರು ಶೇ. 90 ರಷ್ಟುಕೊರೋನ ಸೋಂಕು ನಿರೋಧಕ ಚುಚ್ಚುಮದ್ದು ಪಡೆದಿರುವುದು ಒಳ್ಳೆಯದು ಎಂದ ಅವರು, ಬಾಕಿ ಉಳಿದ ಶಿಕ್ಷಕರು ಶೀಘ್ರದಲ್ಲಿಯೇ ಚುಚ್ಚುಮದ್ದನ್ನು ಪಡೆಯಬೇಕು ಎಂದು ತಿಳಿಸಿದರು.

ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಸ್ವಚ್ಛತೆಗೆ ಆದ್ಯತೆ ನೀಡುವುದು ಸೇರಿದಂತೆ ಕೋವಿಡ್ ಮಾರ್ಗಸೂಚಿಗಳನ್ನು ಸಮರ್ಪಕವಾಗಿ ಅನುಸರಿಸಿ ಸುರಕ್ಷತೆಯೊಂದಿಗೆ ಶಾಲೆಯ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳು ನಡೆಯಬೇಕು ಎಂದರು.ಈ ಪ್ರೌಢಶಾಲೆಯಲ್ಲಿ 236 ವಿದ್ಯಾರ್ಥಿಗಳಲ್ಲಿ 205 ವಿದ್ಯಾರ್ಥಿಗಳು, ಪದವಿಪೂರ್ವ ಕಾಲೇಜಿನಲ್ಲಿ 259 ವಿದ್ಯಾರ್ಥಿಗಳಲ್ಲಿ 200 ವಿದ್ಯಾರ್ಥಿಗಳು ಶಾಲೆಯ ಆರಂಭದ ಪ್ರಥಮ ದಿನದಲ್ಲೇ ಹಾಜರಾಗಿರುವುದು ಹರ್ಷ ತಂದಿದೆ ಎಂದರು. 

ವಿದ್ಯಾರ್ಥಿಗಳು ಬೋಧನೆಯ ವಿಷಯಕ್ಕೆ ಹಾಗೂ ಕೊರೋನಾದ ಬಗ್ಗೆ ಯಾವುದೇ ರೀತಿಯ ಆತಂಕಗಳಿದ್ದಲ್ಲಿ ಶಾಲೆಯ ಶಿಕ್ಷಕರು, ಪ್ರಾಚಾರ್ಯರು ಅಥವಾ ತಮ್ಮೊಂದಿಗೆ ಮುಕ್ತವಾಗಿ ಹಂಚಿಕೊಂಡು ತಮ್ಮಲ್ಲಿರುವ ಗೊಂದಲಗಳನ್ನು ನಿವಾರಿಸಿಕೊಳ್ಳಬೇಕು ಎಂದರು.

ಜಿಲ್ಲೆಯ ಅಭಿವೃದ್ಧಿ ಸೇರಿದಂತೆ ಕೊರೋನ ನಿಯಂತ್ರಣಕ್ಕೆ ಕೈಗೊಳ್ಳುವ ಕಾರ್ಯಗಳ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಮಾತನಾಡಿ, ಜನರ ಭಾವನೆಗಳನ್ನು ಅರ್ಥ ಮಾಡಿಕೊಂಡು ಕೆಲಸ ಮಾಡುವುದಾಗಿ ಮತ್ತು ಜಿಲ್ಲೆಯಲ್ಲಿ ಹೆಚ್ಚು ಪ್ರವಾಸ ಮಾಡವುದರೊಂದಿಗೆ ಕೆಳ ಹಂತದಲ್ಲಿ ಜನರ ಸಮಸ್ಯೆಗಳನ್ನು ಆಲಿಸಿ ಅವರುಗಳ ಅವಶ್ಯಕತೆಗಳನ್ನು ಅರಿತು ಅವುಗಳಿಗೆ ಸ್ಪಂದಿಸುವುದಾಗಿ ತಿಳಿಸಿದರು.

6 ರಿಂದ 8 ನೇ ತರಗತಿಗಳು ಇತರೆ ಜಿಲ್ಲೆಗಳಲ್ಲಿ ಆರಂಭವಾಗುವ ಸಮಯದಲ್ಲಿ ಉಡುಪಿ ಜಿಲ್ಲೆಯಲ್ಲಿಯೂ ಆರಂಭವಾಗಲಿದೆಯೇ ಎಂಬ ಪ್ರಶ್ನೆಗೆ, ಕೋವಿಡ್ ಪಾಸಿಟಿವ್ ರೇಟ್ ಆಧಾರದ ಮೇಲೆ ಹಾಗೂ ಸರಕಾರದ ನಿರ್ಧಾರವನ್ನು ಪರಿಗಣಿಸಿ ತೀರ್ಮಾನಿಸಲಾಗುವುದು ಎಂದರು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಸಾಂಕೇತಿಕವಾಗಿ ಪಠ್ಯ ಪುಸ್ತಕಗಳನ್ನು ವಿತರಣೆ ಮಾಡಿದರು.

ಪದವಿಪೂರ್ವ ಶಿಕ್ಷಣದ ಇಲಾಖೆಯ ಉಪನಿರ್ದೇಶಕ ಮಾರುತಿ ರಾವ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎನ್.ಹೆಚ್. ನಾಗೂರ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply