ಉಡುಪಿ ಜಿಲಾಧಿಕಾರಿ ಜಿ. ಜಗದೀಶ್ ಬೆಂಗಳೂರು ಮುಖ್ಯಮಂತ್ರಿ ಕಚೇರಿಗೆ ​ವರ್ಗ ​

ನೂತನ ಜಿಲ್ಲಾಧಿಕಾರಿಯಾಗಿ ಎಂ.ಕೂರ್ಮ ರಾವ್ ಉಡುಪಿಗೆ

ಉಡುಪಿಗೆ ನೂತನ ಜಿಲ್ಲಾಧಿಕಾರಿಯಾಗಿ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಕಲಬುರ್ಗಿ ಇದರ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಕೂರ್ಮ ರಾವ್‌ ಅವರನ್ನು ನೇಮಕ ಮಾಡಲಾಗಿದ್ದು, ಜಿ ಜಗದೀಶ್‌ ಅವರನ್ನು ಮುಖ್ಯಮಂತ್ರಿಗಳ ಜಂಟಿ ಕಾರ್ಯದರ್ಶಿಯಾಗಿ ವರ್ಗಾವಣೆಗೊಳಿಸಲಾಗಿದೆ.

ಕೊರೋನಾ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಮಾಡಿ  ” ನಾನು ನಿಮ್ಮ ಡಿಸಿ” ಹೇಳುವ ಮೂಲಕ ಜಿ ಜಗದೀಶ್‌ ನಿರಂತರ ಜನರ ಸಂಪರ್ಕದಲ್ಲಿದ್ದರು. ಮಹಾಮಾರಿ ಕೊರೋನಾ ಸಮಯದಲ್ಲಿ ಉಡುಪಿ ಜಿಲ್ಲೆಯಲ್ಲಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿದ ಜಿಲ್ಲಾಧಿಕಾರಿ ಯಾವುದೇ ರೀತಿಯಲ್ಲಿ ಸಮಸ್ಯೆಯಾಗದಂತೆ ನೋಡಿಕೊಂಡರು.

ಕೊರೋನಾ ಸಮಯದಲ್ಲಿ ಇಡೀ ರಾಜ್ಯ ಬೆಡ್‌, ಆಕ್ಸಿಜನ್‌, ವೆಂಟಿಲೇಟರ್‌ ಸಮಸ್ಯೆಯಿಂದ ಬಳಲುತ್ತಿದ್ದಾಗ ಜಿಲ್ಲೆಯಲ್ಲಿ ಖಾಸಗಿ ಆಸ್ಪತ್ರೆಗಳನ್ನು ಬಳಸಿಕೊಂಡು ಜಿಲ್ಲೆಯಲ್ಲಿ ಕೊರತೆಯಾಗದಂತೆ ನಿರ್ವಹಣೆ ಮಾಡಿದರು.

ಜಿಲ್ಲೆಯಲ್ಲಿ ಖಾಸಗಿಯವರ ಸಹಭಾಗಿತ್ವವನ್ನು ಬಳಸಿಕೊಂಡು ಕೋವಿಡ್‌ ಕಿಟ್‌ ಗಳನ್ನು ಒದಗಿಸಿದ್ದಲ್ಲದೆ, ಸರಕಾರಿ ಆಸ್ಪತ್ರೆಗೆಳಿಗೆ ಅಂಬುಲೆನ್ಸ್‌ ಗಳನ್ನು ದಾನವಾಗಿ ನೀಡುವಂತೆ ಸಾರ್ವಜನಿಕರನ್ನು ಉತ್ತೇಜಿಸಿದರು.

ಲಾಕ್‌ ಡೌನ್‌ ಸಮಯದಲ್ಲಿ ಸರಕಾರಕ್ಕೆ ಯಾವುದೇ ರೀತಿಯಲ್ಲಿ ಹೊರೆಯಾಗದಂತೆ ನೇರವಾಗಿ ಅಲ್ಲದೆ ಹೋದರೂ ದಾನಿಗಳಿಂದ ಊಟದ ವ್ಯವಸ್ಥೆ, ಕಿಟ್‌ ವ್ಯವಸ್ಥೆ ಮಾಡುವುದರ ಮೂಲಕ ರಾಜ್ಯಕ್ಕೆ ಮಾದರಿ ಜಿಲ್ಲೆಯಾಗಿ ರೂಪಿಸಿದರು.

ಕೊರೊನಾ ತಡೆಗಟ್ಟುವಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸಿದ ಜಗದೀಶ್‌ ಅವರು ಒಂದು ಹಂತದಲ್ಲಿ ವೀಪರೀತ ಹಂತಕ್ಕೆ ತಲುಪಿದ್ದ ವೇಳೆ ಅದನ್ನು ನಿಯಂತ್ರಣಕ್ಕೆ ತರುವಲ್ಲಿ ತೋರಿಸಿದ ಕಾಳಜಿ ವಿಶೇಷವಾಗಿತ್ತು . ಜಿಲ್ಲೆಯಲ್ಲಿ ಪ್ರತಿನಿತ್ಯ ಅತೀ ಹೆಚ್ಚು ಪರೀಕ್ಷೆಗಳನ್ನು ನಡೆಸುವುದರೊಂದಿಗೆ ಜನರಲ್ಲಿ ಜಾಗೃತಿ ಮೂಡಿಸಿದರು. ಈ ಮೂಲಕ ಜಿಲ್ಲೆಯನ್ನು ಕೊರೋನಾ ಮುಕ್ತ ಮಾಡುವತ್ತ ತುಂಬಾ ಕಾಳಜಿವಹಿಸಿದ್ದರು.  

ಜಿಲ್ಲಾಧಿಕಾರಿಯಾಗಿ ಕೇವಲ ಕಚೇರಿಗೆ ಸೀಮಿತವಾಗದೆ ಇಡೀ ಜಿಲ್ಲೆಯ ಪ್ರವಾಸ ಮಾಡಿದ್ದಲ್ಲದೆ ಸಮಸ್ಯೆಗಳು ಬಂದಾಗ ವ್ಯವಸ್ಥಿತವಾಗಿ ಅವುಗಳನ್ನು ಪರಿಹಾರ ಮಾಡುವ ಕೆಲಸ ಮಾಡಿದ್ದಾರೆ. ಜಿಲ್ಲೆಯ ಆಗುಹೋಗುಗಳನ್ನು ಜನರಿಗೆ ನೇರವಾಗಿ ಸಾಮಾಜಿಕ ಜಾಲತಾಣಗಳ ಮೂಲಕ ತಿಳಿಸುವ ಕೆಲಸ ಪ್ರತಿನಿತ್ಯ ನಡೆಸುತ್ತಿದ್ದರು.

ಸ್ವತಃ ಕೃಷಿಕರಾಗಿ ಮನೆಯಲ್ಲಿ ಕೃಷಿ ಮಾಡುವುದರೊಂದಿಗೆ ಹಡಿಲು ಭೂಮಿಯಲ್ಲಿ ಕೃಷಿಯನ್ನು ಮಾಡುವುದರ ಮೂಲಕ ಜನರಿಗೆ ಕೃಷಿಯನ್ನು ಉತ್ತೇಜಿಸುವ ಕೆಲಸ ಮಾಡಿದರು. 

ಕಳೆದ ವರ್ಷ ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಗೆ ಉಡುಪಿ ನಗರದಲ್ಲಿ ಏಕಾಏಕಿ ನೆರೆ ಏರಿ ನಷ್ಟಗಳು ಸಂಭವಿಸಿದಾಗ ವ್ಯವಸ್ಥಿತವಾಗಿ ನಿರ್ವಹಣೆ ಮಾಡಿ ಜನರ ಶ್ಲಾಘನೆಗೆ ಪಾತ್ರವಾಗಿದ್ದರು.

ಅವರ ಅವಧಿಯಲ್ಲಿ ಗ್ರಾಮ ಪಂಚಾಯತ್‌ ಚುನಾವಣೆಯನ್ನು ಯಶಸ್ವಿಯಾಗಿ ನಿರ್ವಹಿಸಿದರು. ಜಿಲ್ಲೆಯಲ್ಲಿ ಸಕಾಲ ಯೋಜನೆಯಲ್ಲಿ ಪ್ರಥಮ ಸ್ಥಾನ, ಕೋವಿಡ್‌ ಲಸಿಕೆ ವಿತರಣೆಯಲ್ಲಿ ರಾಜ್ಯದಲ್ಲಿ ಎರಡನೇ ಸ್ಥಾನ ಪಡೆಯಲು ಕಾರಣವಾಗಿದೆ. ಟೀಕೆಗಳನ್ನು ಕೂಡಾ ಅಷ್ಟೇ ಸಮರ್ಥವಾಗಿ ನಿಭಾಯಿಸುತ್ತಿದ್ದರು.  

 
 
 
 
 
 
 
 
 
 
 

Leave a Reply