ನೇತ್ರಾವತಿ ಸೇತುವೆ ಮೇಲೆ ಕಾರು ನಿಲ್ಲಿಸಿ ನದಿಗೆ ಹಾರಿ ಉದ್ಯಮಿ ಆತ್ಮಹತ್ಯೆ!

ನೇತ್ರಾವತಿ ಸೇತುವೆ ಮೇಲಿನಿಂದ ವ್ಯಕ್ತಿಯೊಬ್ಬರು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಅ. 30 ರಂದು ಮಧ್ಯಾಹ್ನ ಸಂಭವಿಸಿದೆ. ಚಿಕ್ಕಮಗಳೂರು ಮೂಲದ ಪ್ರಸನ್ನ (37) ಎಂಬವರು ನದಿಗೆ ಹಾರಿದ್ದು, ನಾಪತ್ತೆಯಾಗಿದ್ದಾರೆ. ಮಧ್ಯಾಹ್ನ ವೇಳೆ ತೊಕ್ಕೊಟ್ಟು

ಕಡೆಯಿಂದ ಬಂದು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಾರು ನಿಲ್ಲಿಸಿ ತಡೆಬೇಲಿಯ ಬದಿಯಿಂದ ನದಿಗೆ ಹಾರಿದ್ದಾರೆ. ಘಟನೆಯನ್ನು ಪ್ರತ್ಯಕ್ಷ ಕಂಡವರು ತಕ್ಷಣ ರಕ್ಷಣೆಗೆ ಓಡಿದರೂ ಅದಾಗಲೇ ಪ್ರಸನ್ನ ಅವರು ನೀರುಪಾಲಾಗಿದ್ದರು. ಘಟನಾ ಸ್ಥಳದಲ್ಲಿ ಕುತೂಹಲಿಗರು ಜಮಾಯಿಸಿದ್ದರಿಂದ ರಸ್ತೆ ಸಂಚಾರದಲ್ಲಿ ಕೆಲಕಾಲ ಅಡಚಣೆಯುಂಟಾಯಿತು.

ಬೈರಾಪುರ ಗ್ರಾಮದ ಶಂಕರೇಗೌಡ ಎಂಬುವವರ ಪುತ್ರ ಪ್ರಸನ್ನಕುಮಾರ್ ತರಕಾರಿ, ಕೊತ್ತಂಬರಿ ಸೊಪ್ಪು ವ್ಯಾಪಾರ ಮಾಡಿಕೊಂಡಿದ್ದರು. ಚಿಕ್ಕಮಗಳೂರು ಕಡೆಯಿಂದ ಮಂಗಳೂರು ಭಾಗಕ್ಕೆ ಕೊತ್ತಂಬರಿ ಸೊಪ್ಪು ಸರಬರಾಜು ಮಾಡುತ್ತಿದ್ದರು. ಬೆಳಗ್ಗೆ ವ್ಯಾಪಾರದ ಹಣ ಬರಲು ಇದೆ, ವಸೂಲಿ ಮಾಡಿಕೊಂಡು ಬರುವುದಾಗಿ ಮನೆಯಲ್ಲಿ ಹೇಳಿ ಮಂಗಳೂರಿಗೆ ತೆರಳಿದ್ದರು ಎನ್ನಲಾಗಿದೆ.

ಪ್ರಸನ್ನ ಕುಮಾರ್ ವಿವಾಹಿತರಾಗಿದ್ದು, ಇಬ್ಬರು ಚಿಕ್ಕ ಹೆಣ್ಣುಮಕ್ಕಳು ಇದ್ದಾರೆ. ಅವರ ಪತ್ನಿ ಮೂಡಿಗೆರೆ ತಾಲೂಕಿನ ಜೇನುಬೈಲು ಗ್ರಾಮದವರು ಎಂದು ತಿಳಿದುಬಂದಿದೆ. ಅವರು ನದಿಗೆ ಹಾರಿರುವುದಕ್ಕೆ ಕಾರಣ ತಿಳಿದುಬಂದಿಲ್ಲ. ಘಟನೆ ಅನುಮಾನಾಸ್ಪದವಾಗಿದೆ. ಮೃತದೇಹಕ್ಕಾಗಿ ಹುಡುಕಾಟ ನಡೆಸಲಾಗುತ್ತಿದೆ.

ಕೆಫೆ ಡೇ ಮಾಲೀಕ ಸಿದ್ಧಾರ್ಥ್ ಆತ್ಮಹತ್ಯೆ ನಂತರ ಸರಣಿ ಆತ್ಮಹತ್ಯೆಗಳೇ ನೇತ್ರಾವತಿ ಸೇತುವೆಯಲ್ಲಿ ನಡೆದಿತ್ತು. ಆತ್ಮಹತ್ಯೆ ತಡೆಗಾಗಿ ಮುಡಾ ಅನುದಾನದ ಮೂಲಕ 2020 ರಲ್ಲಿ ತಡೆಬೇಲಿ ಅಳವಡಿಸಲಾಯಿತು. ಬಳಿಕ ನೇತ್ರಾವತಿ ಸೇತುವೆಯಲ್ಲಿ ಆತ್ಮಹತ್ಯೆಗಳು ನಿಂತಿತ್ತು.

 
 
 
 
 
 
 
 
 
 
 

Leave a Reply