ವಾಲಿಬಾಲ್ ಆಟವಾಡುತ್ತಲೇ ಕುಸಿದು ಮೃತಪಟ್ಟ ಆಟಗಾರ

ಉಡುಪಿ:ರಾಜ್ಯ ಮಟ್ಟದ ವಾಲಿಬಾಲ್ ಆಟಗಾರನೋರ್ವ ಪಂದ್ಯದಲ್ಲಿ ಆಟವಾಡುತ್ತಲೇ ಮೃತಪಟ್ಟ ಘಟನೆ ಶನಿವಾರ ರಾತ್ರಿ ಉಡುಪಿಯ‌ ಕಾಪುವಿನ ಇನ್ನಂಜೆಯಲ್ಲಿ‌ ನಡೆದಿದೆ.ಮೂಲತಃ ಕುರ್ಕಾಲು ಸುಭಾಸ್ ನಗರ ನಿವಾಸಿ ಪಕ್ಕಿ ದೇವು ಯಾನೆ ದೇವರಾಜ್ (33) ಮೃತ ವಾಲಿವಾಲ್ ಆಟಗಾರ.

ಶನಿವಾರ ರಾತ್ರಿ ಇನ್ನಂಜೆಯಲ್ಲಿ‌ ನಡೆಯುತ್ತಿದ್ದ ಇನ್ನಂಜೆ ಪ್ರೀಮಿಯರ್ ಲೀಗ್ ಪಂದ್ಯಾವಳಿಯಲ್ಲಿ ಇನ್ನಂಜೆ ಚಾಲೆಂಜರ್ಸ್ ತಂಡದ ಪರವಾಗಿ ಆಟವಾಡುತ್ತಿದ್ದ ದೇವರಾಜ್ ಆಟವಾಡುತ್ತಿದ್ದಾಗಲೇ ಹೃದಯಾಘಾತಕ್ಕೊಳಗಾಗಿ ಕುಸಿದು ಬಿದ್ದರು. ಕೂಡಲೇ ಅವರನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ಕರೆದೊಯಲಾಗಿದ್ದು, ಆಗಲೇ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದರು.

ರಾಜ್ಯ ಮಟ್ಟದ ಹಲವಾರು ಪಂದ್ಯಾವಳಿಗಳಲ್ಲಿ ಭಾಗವಹಿಸಿದ್ದ ದೇವು, ಆರಂಭದಲ್ಲಿ ಕುರ್ಕಾಲು ಸುಭಾಸ್ ನಗರ ತಂಡದ ಆಟಗಾರನಾಗಿ, ಬಳಿಕ ರಾಜ್ಯ ಮಟ್ಟದ ವಿವಿಧ ತಂಡಗಳಲ್ಲಿ ಆಟಗಾರನಾಗಿ ವಾಲಿಬಾಲ್ ಆಟದಲ್ಲಿ ಸಕ್ರಿಯರಾಗಿದ್ದರು. ಉತ್ತರ ಕನ್ನಡದ ವಿವಿಧ ತಂಡಗಳ ಪರವಾಗಿಯೂ ಆಟವಾಡಿದ್ದ ಅವರು ಪಕ್ಕಿ ದೇವು ಎಂದೇ ಚಿರಪರಿಚಿತ.

ಅವಿವಾಹಿತರಾಗಿದ್ದ ಅವರು ತಾಯಿ ಮತ್ತು ಐದು ಮಂದಿ ಸಹೋದರಿಯರನ್ನು ಅಗಲಿದ್ದಾರೆ. ಈ ಅಕಾಲಿಕ ಮರಣ ವಾಲಿಬಾಲ್ ಆಟಗಾರರು ಮತ್ತು ದೇವು ಅವರ ಅಪಾರ‌ ಅಭಿಮಾನಿಗಳನ್ನು ಶೋಕಕ್ಕೆ ದೂಡಿದೆ.ಅವರು ಮೃತಪಟ್ಟ ಸುದ್ಧಿ ತಿಳಿಯುತ್ತಲೇ ಇನ್ನಂಜೆ ಪ್ರೀಮಿಯರ್ ಲೀಗ್ ವಾಲಿಬಾಲ್ ಪಂದ್ಯಾವಳಿಯನ್ನು ಅರ್ಧಕ್ಕೆ ಸ್ಥಗಿತಗೊಳಿದೆ. ಹಲವೆಡೆ ಶೋಕ ಸಭೆಯನ್ನು ಆಚರಿಸಲಾಯಿತು.

 
 
 
 
 
 
 
 
 
 
 

Leave a Reply