ಬ್ರಹ್ಮಾವರ: ಜಯಂಟ್ಸ್ ಗ್ರೂಪ್ ಬ್ರಹ್ಮಾವರ, ಭಾರತೀಯ ಜನೌಷಧಿ ಕೇಂದ್ರ ಹಾಗೂ ಸುವಣ೯ ಎಂಟರ್ ಪ್ರೈಸ್ ಬ್ರಹ್ಮಾವರ ಇದರ ಆಶ್ರಯದಲ್ಲಿ ಉಡುಪಿ ಜಿಲ್ಲೆಯ ಸುಮಾರು 60 ದೇವಾಲಯಗಳಿಗೆ ಕೊಡಮಾಡುವ ಪಂಚಪವಿತ್ರ ಗಿಡಗಳ ವಿತರಣೆ ಅಭಿಯಾನಕ್ಕೆ ಜನೌಷಧಿ ಕೇಂದ್ರ ವಠಾರದಲ್ಲಿ ಬುಧವಾರ ಚಾಲನೆ ದೊರೆಯಿತು.
ಗಿಡಗಳನ್ನು ವಿತರಿಸಿ ಚಾಲನೆ ನೀಡಿದ ಮುಜುರಾಯಿ ಮತ್ತು ಹಿಂದುಳಿದ ವರ್ಗಗಳ ಅಭಿವೃದ್ಧಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ ಈ ರೀತಿಯ ಮಾದರಿ ಕಾರ್ಯ ಅಭಿನಂದನೀಯ ಎಂದರು.
ರಾಜ್ಯದ 34500 ಮುಜುರಾಯಿ ದೇವಾಲಯಗಳಲ್ಲಿ ಕನಿಷ್ಟ 10 ಗಿಡಗಳನ್ನು ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳುವ ಬಗ್ಗೆ ಗಂಭೀರ ಚಿಂತನೆ ನಡೆಸಲಾಗುವುದು, ಕೋವಿಡ್ ಸಮಯದಲ್ಲಿ ಆಮ್ಲಜನಕದ ಮಹತ್ವ ಎಲ್ಲರಿಗೂ ತಿಳಿದಿದೆ ಎಲ್ಲರೂ ಗಿಡಗಳನ್ನು ನೆಟ್ಟು ಪೋಷಿಸುವ ಸಂಕಲ್ಪ ಮಾಡಬೇಕಾಗಿದೆ ಎಂದರು.
ಅಧ್ಯಕ್ಷತೆಯನ್ನು ಜಯಂಟ್ಸ್ ಅಧ್ಯಕ್ಷ ಸುಂದರ ಪೂಜಾರಿ ಮೂಡುಕುಕುಡೆ ವಹಿಸಿದ್ದರು. ಜಯಂಟ್ಸ್ ಫೆಡರೇಶನ್ ಮಾಜಿ ಅಧ್ಯಕ್ಷ ಮಧುಸೂಧನ್ ಹೇರೂರು, ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಮಹೇಶ್ ಐತಾಳ, ಗಿಡಗಳ ಪ್ರಾಯೋಜಕರಾದ ಸುವರ್ಣ ಎಂಟರ್ ಪ್ರೈಸ್ ನ ಮುಖ್ಯಸ್ಥೆ ಸುನೀತಾ ಮಧುಸೂಧನ್, ವೈದ್ಯಕೀಯ ಪ್ರತಿನಿಧಿ ಸಂಘದ ಕಾರ್ಯದರ್ಶಿ ಪ್ರಸನ್ನ ಕಾರಂತ್, ಶ್ರೀನಾಥ್ ಕೋಟ,ಮಿಲ್ಟನ್ ಒಲಿವರ್, ವಿವೇಕಾನಂದ ಕಾಮತ್ ಮುಂತಾದವರಿದ್ದರು.ಮಧುಸೂಧನ್ ಹೇರೂರು ಪ್ರಸ್ತಾವನೆಗೈದು,ರಾಘವೇಂದ್ರ ಪ್ರಭು,ಕರ್ವಾಲು ನಿರೂಪಿಸಿದರು.ವಿವಿಧ ದೇವಾಲಯಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.