ಲಾಕ್ ಡೌನ್ ವೇಳೆ ರಸ್ತೆಗಿಳಿದ ವಾಹನಗಳು ಮುಟ್ಟುಗೋಲು: ಡಿಸಿ ಜಗದೀಶ್

ಉಡುಪಿ: ಮೇ 10ರಿಂದ 24ರವರೆಗೆ ರಾಜ್ಯದಾದ್ಯಂತ ಕಠಿಣ ಲಾಕ್ಡೌನ್ ಜಾರಿಗೆ ಬರಲಿದ್ದು ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಎಚ್ಚರಿಸಿದ್ದಾರೆ.

ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿದ ಜಿಲ್ಲಾಧಿಕಾರಿ, ಕೊರೊನಾ ಸೋಂಕಿನ ನಿಯಂತ್ರಣಕ್ಕೆ ಲಾಕ್ಡೌನ್ ಜಾರಿ ಮಾಡಲಾಗಿದ್ದು, ಮೇ 10ರ ಬೆಳಿಗ್ಗೆ 6ರಿಂದ 24ರ ಬೆಳಿಗ್ಗೆ 6ಗಂಟೆಯವರೆಗೂ ಮಾರ್ಗಸೂಚಿಗಳು ಜಾರಿಯಲ್ಲಿರುತ್ತವೆ. ಈ ಅವಧಿಯಲ್ಲಿ ಸಾರ್ವಜನಿಕರು ವಾಹನಗಳನ್ನು ರಸ್ತೆಗಿಳಿದದರೆ ಮುಟ್ಟುಗೋಲು ಹಾಕಿಕೊಂಡು ಎಪಿಡಮಿಕ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗುವುದು ಎಂದು ತಿಳಿಸಿದರು.

ಜನರ ಸಂಚಾರವನ್ನು ಸಂಪೂರ್ಣ ನಿರ್ಬಂಧಿಸುವ ಉದ್ದೇಶದಿಂದ ದ್ವಿಚಕ್ರ, ಕಾರು ಸೇರಿದಂತೆ ಯಾವುದೇ ವಾಹನಗಳನ್ನು ಬಳಸುವಂತಿಲ್ಲ. ಹೋಟೆಲ್ಗಳಲ್ಲಿ ಪಾರ್ಸೆಲ್ ಕೊಂಡೊಯ್ಯಬೇಕಾದರೂ ನಡೆದುಕೊಂಡೇ ಬರಬೇಕು. ಹೋಟೆಲ್ಗಳು ರಾತ್ರಿ 9ರವರೆಗೆ ತೆರೆದಿರಲಿದ್ದು, ಆನ್ಲೈನ್ ಮೂಲಕ ಮನೆಗೆ ಊಟ ತರಿಸಿಕೊಳ್ಳಬಹುದು ಎಂದರು.

ಮಾರುಕಟ್ಟೆಯಿಂದ ದಿನಸಿ, ಹಾಲು, ಹಣ್ಣು, ತರಕಾರಿ, ಮಾಂಸ ಖರೀದಿಗೂ ವಾಹನ ಬಳಸದೆ ನಡೆದುಕೊಂಡೇ ಹೋಗಬೇಕು. ಬೆಳಿಗ್ಗೆ 6ರಿಂದ 10ರವರೆಗೆ ಅವಕಾಶ ಇದೆ. ಸಾರ್ವಜನಿಕರು ಸಾಧ್ಯವಾದಷ್ಟು ಮನೆಯ ಹತ್ತಿರದ ಅಂಗಡಿಗಳಲ್ಲಿ ದಿನ ಬಳಕೆಯ ವಸ್ತುಗಳನ್ನು ಖರೀದಿಸಬೇಕು. ತಳ್ಳುಗಾಡಿಗಳಲ್ಲಿ ತರಕಾರಿ, ಹಣ್ಣು ಕೊಂಡುಕೊಳ್ಳಬೇಕು ಎಂದರು.

ಸರಕು ಸಾಗಣೆ ವಾಹನಗಳ ಓಡಾಟಕ್ಕೆ ಅಡ್ಡಿ ಇಲ್ಲ. ಮುಂಗಾರು ಪೂರ್ವ ತಯಾರಿಗೆ ಹಾಗೂ ರಸ್ತೆ ನಿರ್ಮಾಣ ಕಾಮಗಾರಿಗೆ ಅನುಮತಿ ಇದೆ ಎಂದು ತಿಳಿಸಿದರು.ಕೈಗಾರಿಕೆಗಳಲ್ಲಿ ಅಗತ್ಯ ವಸ್ತುಗಳ, ಆಹಾರ ಸಾಮಾಗ್ರಿ ಹಾಗೂ ವೈದ್ಯಕೀಯ ಪರಿಕರಗಳ ಉತ್ಪಾದನೆಗೆ ಮಾತ್ರ ಅವಕಾಶವಿದೆ. ಕಟ್ಟಡ ನಿರ್ಮಾಣ ಕಾಮಗಾರಿಗೆ ಕಾರ್ಮಿಕರನ್ನು ಹೊರಗಿನಿಂದ ಕರೆಸುವಂತಿಲ್ಲ. ಕಟ್ಟಡ ನಿರ್ಮಾಣ ವಸ್ತುಗಳ ಮಾರಾಟ ಮಳಿಗೆಗಳನ್ನು ತೆರೆಯುವಂತಿಲ್ಲ. ಭಾನುವಾರದೊಳಗೆ ಖರೀದಿ ಮಾಡಿಟ್ಟುಕೊಂಡು ಕಾಮಗಾರಿ ಮುಂದುವರಿಸಬೇಕು ಎಂದರು.

ಮದುವೆಗೆ 50 ಮಂದಿ ಸೇರಲು ಮಾತ್ರ ಅವಕಾಶವಿದ್ದು, ಪಾಸ್ಗಳನ್ನು ತಹಶೀಲ್ದಾರ್ ವಿತರಿಸಲಿದ್ದಾರೆ. ಉಳಿದಂತೆ ಮೆಹಂದಿ, ಬೀಗರೂಟ ಆಯೋಜನೆಗೆ ಅವಕಾಶವಿಲ್ಲ. ಅಂತ್ಯಕ್ರಿಯೆಗೆ ಕೇವಲ 5 ಜನ ಸೇರಬಹುದು ಎಂದು ಹೇಳಿದರು.

ಅಂತರ್ ಜಿಲ್ಲೆ ಹಾಗೂ ಅಂತರ್ ರಾಜ್ಯ ಪ್ರಯಾಣ ನಿರ್ಬಂಧಿಸಲಾಗಿದೆ. ಆರೋಗ್ಯ ತುರ್ತು ಪರಿಸ್ಥಿತಿಯಲ್ಲಿ ಮಾತ್ರ ರೋಗಿಗಳು ಬರಲು ಅನುಮತಿ ಇದೆ. ಆರೋಗ್ಯ ಇಲಾಖೆ ಸಿಬ್ಬಂದಿ, ನ್ಯಾಯಾಲಯದ ಸಿಬ್ಬಂದಿ ಕಚೇರಿಗೆ ತೆರಳಲು ಐಡಿ ಕಾರ್ಡ್ ಕಡ್ಡಾಯ. ರೈಲು ಹಾಗೂ ವಿಮಾನ ಪ್ರಯಾಣ ಮಾಡುವವರು ಟಿಕೆಟ್ ತೋರಿಸಬೇಕು ಎಂದರು.ಕೆಎಂಎಫ್ ಮಿಲ್ಕ್ ಬೂತ್ ಹಾಗೂ ಹಾಪ್ಕಾಮ್ಸ್ ಮಳಿಗೆಗಳು ಮಾತ್ರ ಬೆಳಿಗ್ಗೆ 6ರಿಂದ ಸಂಜೆ 6ರವರೆಗೆ ತೆರೆದಿರಲಿವೆ. ಬ್ಯಾಂಕ್, ವಿಮಾ ಕಚೇರಿಗಳು, ಎಟಿಎಂಗಳು, ಪಡಿತರ ಕೇಂದ್ರಗಳು ಬೆಳಿಗ್ಗೆ 10ರವರೆಗೆ ತೆರೆದಿರಲಿವೆ ಎಂದು ತಿಳಿಸಿದರು.

ಮೀನುಗಾರಿಕೆಗೆ ಅಡ್ಡಿ ಇಲ್ಲ, ಆದರೆ, ಬಂದರಿನಲ್ಲಿ ಮಾರಾಟ ಮಾಡುವಂತಿಲ್ಲ. ಸಗಟು ಮೀನು ಮಾರಾಟಗಾರರಿಂದ ಖರೀದಿಸಿ ಚಿಲ್ಲರೆಯಾಗಿ ಮನೆಮನೆಗೆ ತೆರಳಿ ಮಾರಾಟ ಮಾಡಲು ಅನುಮತಿ ಇದೆ. ಮಹಿಳೆಯರು ಬುಟ್ಟಿಯಲ್ಲಿಟ್ಟಕೊಂಡು ಮಾರಬಹುದು. ಪುರುಷರು ದ್ವಿಚಕ್ರ ವಾಹನಗಳಲ್ಲಿ ಮಾರಾಟ ಮಾಡಬಹುದು ಎಂದ ಜಿಲ್ಲಾಧಿಕಾರಿ ಹೇಳಿದರುರು.

 
 
 
 
 
 
 
 
 
 
 

Leave a Reply