ಉಡುಪಿ: ಮಿಷನ್ ಕಂಪೌಂಡ್ ಬಳಿಯಲ್ಲಿನ ವಿಧವೆಯರ ಕೊಠಡಿಯಲ್ಲಿ ಆ್ಯಂಡ್ರಿ ಜೋಸೆಫ್ (62) ಏಕಾಂಗಿಯಾಗಿ ವಾಸಿಸುತ್ತಿದ್ದರು.ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರ ಮೃತದೇಹ ಕೊಠಡಿಯಲ್ಲಿ ಭಾನುವಾರ ಕಂಡುಬಂದಿದೆ.
ಜೋಸೆಫ್ ವಿಶೇಷಚೇತನರಾಗಿದ್ದು, ಮಿಷನ್ ಆಸ್ಪತ್ರೆ ಬಳಿ ಸ್ಥಿರ ದೂರವಾಣಿ ಅಂಗಡಿ ಇಟ್ಟುಕೊಂಡು ಜೀವನ ನಡೆಸುತ್ತಿದ್ದರು. ಆ ಪರಿಸರದಲ್ಲಿ ಪರೋಪಕಾರಿ ಎಂದೇ ಖ್ಯಾತರಾಗಿದ್ದರು.ಯು.ಬಿ.ಎಂ.ಸಿ. ಚರ್ಚಿನ ಧರ್ಮಗುರು ಫಾ.ಸಂತೋಷ್ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನ ಮೂಲಕ ದಫನಭೂಮಿಯಲ್ಲಿ ಅವರ ಅಂತ್ಯಸಂಸ್ಕಾರ ನಡೆಸಲಾಯಿತು.
ಅವರ ಸಾವಿಗೆ ಇನ್ನು ನಿಖರ ಕಾರಣ ತಿಳಿದುಬಂದಿಲ್ಲ. ಕೊರೊನಾ ಮುನ್ನೆಚ್ಚರಿಕಾ ಸುರಕ್ಷಿತ ಕ್ರಮದಂತೆ ಯು.ಬಿ.ಎಂ.ಸಿ. ಚರ್ಚಿನ ಸದಸ್ಯರು ಪಿಪಿಇ ಕಿಟ್ ಧರಿಸಿ ಅಂತ್ಯಸಂಸ್ಕಾರ ನಡೆಸಿದರು.ತಜ್ಞರ ಮೂಲಕ ಮೃತರ ಗಂಟಲು ದ್ರವವನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ರವಾನಿಸಲಾಗಿದ್ದು, ವರದಿ ಇನ್ನಷ್ಟೇ ಬರಬೇಕಿದೆ. ಸಮಾಜ ಸೇವಕ ನಿತ್ಯಾನಂದ ಒಳಕಾಡು ಅವರು ಉಚಿತ ಆ್ಯಂಬುಲೆನ್ಸ್ ಒದಗಿಸಿ, ಅಂತ್ಯಸಂಸ್ಕಾರ ಸಂದರ್ಭದಲ್ಲಿ ಸಹಕರಿಸಿದರು.