ಮನೆ ಮುಂದೆ ಕಮಲದ ರಂಗೋಲಿ ಹಾಕಲು ಸಚಿವರಾದ ಶಶಿಕಲಾ ಜೊಲ್ಲೆ ಕರೆ

ಸಿಂಧಗಿ: ಸಿಂಧಗಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಮಹಿಳಾ ಮತದಾರರನ್ನು ಸೆಳೆಯಲು ಮುಜರಾಯಿ ಹಜ್ ಮತ್ತು ವಕ್ಫ್ ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವರಾದ ಶಶಿಕಲಾ ಜೊಲ್ಲೆಯವರು ಮನೆ ಮನೆಗೆ ತೆರಳಿ ಪ್ರಚಾರ ಮಾಡಿದರು. ಸೋಮವಾರ ಸಿಂಧಗಿ ವಿಧಾನಸಭಾ ಕ್ಷೇತ್ರದ ದೇವರನಾವಡಗಿ, ಕಮಸಗಿ, ಕಡ್ಲೆವಾಡ, ಶಂಬೇವಾಡ, ದೇವಣಗಾಂವ, ಬಮ್ಕನಹಳ್ಳಿ ಹಾಗೂ ಗುಂದಗಿ ಗ್ರಾಮಗಳಲ್ಲಿ ಮನೆ. ಮನೆಗೂ ತೆರಳಿ ಮಹಿಳೆಯರನ್ನು ಭೇಟಿ ಮಾಡಿ ಪಕ್ಷದ ಅಭ್ಯರ್ಥಿ ರಮೇಶ ಬೂಸನೂರು ಅವರಿಗೆ ಮತ ಚಲಾಯಿಸುವಂತೆ ಮನವಿ ಮಾಡಿದರು. 
ಅಲ್ಲದೇ ಕ್ಷೇತ್ರದಲ್ಲಿ ಬಿಜೆಪಿ ಪರ ಅಲೆ ಇದ್ದು ಮಹಿಳೆಯರು ಪ್ರತಿ ಮನೆಯ ಮುಂದೆ ಬಿಜೆಪಿ ಪಕ್ಷದ ಚಿನ್ಹೆ ಕಮಲದ ರಂಗೋಲಿ ಬಿಡಿಸುವುದು ಹಾಗೂ ಪ್ರತಿಯೊಬ್ಬ ಮಹಿಳೆಯರ ಕೈ ಮೇಲೆ ಕಮಲದ ಮೆಹಂದಿ ( ಮದರಂಗಿ) ಹಚ್ಚುವಂತೆ ಸಚಿವರಾದ ಜೊಲ್ಲೆಯವರು ಸಲಹೆ ನೀಡಿದರು. ಈ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಸಿಂಧಗಿ ಕ್ಷೇತ್ರದಲ್ಲಿ ಬಿಜೆಪಿ ಪರವಾದ ಅಲೆ ಇದ್ದು, ರಾಜ್ಯ ಹಾಗೂ ಕೇಂದ್ರ ಸರ್ಕಾರದ ಅಭಿವೃದ್ಧಿ ಕಾರ್ಯಗಳು ಜನರ ಮುಂದೆ ಕಾಣಿಸುತ್ತಿದೆ. 

ಯುವಕರು ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಬೆಂಬಲಿಸುತ್ತಿದ್ದಾರೆ.  ಪ್ರತಿಪಕ್ಷದವರಿಗೆ ಆರೋಪ ಮಾಡುವುದು ಬಿಟ್ಟು ಬೇರೇನು ಮಾಡಲು ಸಾಧ್ಯ? ಆದರೆ, ಸಿಂಧಗಿ ಕ್ಷೇತ್ರದಲ್ಲಿ ರಮೇಶ ಬೂಸನೂರು ಅವರು ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ದೇವಸ್ಥಾನಗಳು, ಸಮುದಾಯ ಭವನ, ಅಂಬೇಡ್ಕರ್ ಭವನ, ಶಾದಿ ಮಹಲ್ ಗಳಿಗೆ ಅನುದಾನ ನೀಡಿದ್ದಾರೆ. ಹೀಗಾಗಿ ಈ ಬಾರಿ ರಮೇಶ ಬೂಸೂನೂರು ಅವರ ಗೆಲುವು ಖಚಿತ ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದರು.

ದೇವರನಾವಡಗಿಯಲ್ಲಿ  ಮಾತನಾಡಿದ ಸಚಿವರು, ದೇವರನಾವಡಗಿ ಗ್ರಾಮದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಬಲವಂತ ವಾಸುದೇವ ಫಡ್ಕೆ ಅವರು ನೆಲೆಸಿದ್ದರು. ಅವರನ್ನು ಬ್ರಿಟೀಷರು ಬಂಧಿಸಿದರು. ಅಂತಹ ಪುಣ್ಯಪುರುಷರು ನೆಲೆಸಿದ ಗ್ರಾಮ ಇದು. ಈ ಗ್ರಾಮಕ್ಕೆ ಐತಿಹಾಸಿಕ ಇತಿಹಾಸ ಇದೆ ಎಂದು ಹೇಳಿದರು. ಭಾರತೀಯ ಸಂಸ್ಕೃತಿ ಯನ್ನು ವಿಶ್ವಸಕ್ಕೆ ಪರಿಚಯಿಸಿದ ಸ್ವಾಮೀ ವಿವೇಕಾನಂದರು, ಸಹೋದರತ್ವ ಭಾವನೆ ಮೂಡುವಂತೆ ಮಾಡಿದರು. ಪುಲ್ವಾಮ ದಾಳಿಯಲ್ಲಿ  ಭಾರತೀಯ ಯೋಧರು ಹುತಾತ್ಮರಾದರು. 

ಅವರ ಸಾವಿಗೆ ಪ್ರತೀಕಾರವಾಗಿ  ನಮ್ಮ ಪ್ರಧಾನಿ ನರೇಂದ್ರ ಮೋದಿಯವರು ಸರ್ಜಿಕಲ್‌ಸ್ಟ್ರೈಕ್ ಮಾಡಿ, ತಕ್ಕ ಉತ್ತರ ನೀಡಿದರು. ಕೇಂದ್ರ ಹಾಗೂ ರಾಜ್ಯದಲ್ಲಿ ದೇಶಪ್ರೇಮದ ಬಿಜೆಪಿ ಸರ್ಕಾರ ಇದೆ. ನಮ್ಮ ಸರ್ಕಾರ ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡುತ್ತಿದೆ. ರಮೇಶ್ ಬೂಸನೂರು ಅವರು ಆರಿಸಿ ಬಂದರೆ ಈ ಗ್ರಾಮದ ಜನರ, ಯುವಕರ ಭೇಡಿಕೆಗಳಿಗೆ ಸ್ಪಂದಿಸಿ ಯೋಜನೆಗಳನ್ನು ಜಾರಿಗೊಳಿಸಲಾಗುವುದು ಎಂದು ಹೇಳಿದರು.
 
ತಮ್ಮ ಪ್ರಚಾರ ಕಾರ್ಯವನ್ನು ಮುಂದುವರೆಸಿದ ಸಚಿವರು,  ಕುಮಸಗಿಯಲ್ಲಿ ಪ್ರಚಾರದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಭಾರತದಲ್ಲಿ ಕೊರೊನಾ ಸಂದರ್ಭದಲ್ಲಿ  ಪ್ರಧಾನಿ ನರೇಂದ್ರ ಮೋದಿ ಬದಲು ಬೇರೆ ಯಾರಾದರೂ ಪ್ರಧಾನಿಯಾಗಿದ್ದರೆ, ದೇಶದ ಶೇಕಡಾ 50 ರಷ್ಟು ಜನರು ಪ್ರಾಣ ಕಳೆದು ಕೊಳ್ಳುವಂತಾಗುತ್ತಿತ್ತು. ನಮಗೆ ದೈವೀ ಪುರುಷರು ಪ್ರಧಾನಿಯಾಗಿ ಸಿಕ್ಕಿದ್ದಾರೆ ಎಂದು ಹೇಳಿದರು.
ಕೊರೊನಾ ರೋಗದ ಬಗ್ಗೆ ನಮಗಾರಿಗೂ ಅರಿವಿರಲಿಲ್ಲ. ಚೈನಾ ಮೂಲದಿಂದ ಕೊರೊನಾ ಯಾವಾಗ ಬರಬೇಕು ಎಂದು ನಿರ್ಲಕ್ಷ್ಯ ಮಾಡಿದ್ದರು. ಆದರೆ, ಕೊರೊನಾ ದೇಶದ ಜನರು ಸಾಕಷ್ಟು ತೊಂದರೆಗೆ ಒಳಗಾಗುವಂತೆ ಮಾಡಿತು. ಆದರೆ, ನಮ್ಮ ರಾಜ್ಯದಲ್ಲಿ ಯಡಿಯೂರಪ್ಪ, ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಇದ್ದಿದ್ದರಿಂದ ಎಲ್ಲ ರೀತಿಯ ಮೂಲ ಸೌಕರ್ಯ, ಅಗತ್ಯ ಆರೋಗ್ಯ ಸೇವೆ ಒದಗಿಸುವ ಕೆಲಸ ಮಾಡಿದ್ದಾರೆ. ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವೆಯಾಗಿ ನಾನೂ ಜಿಲ್ಲೆಯ ಎಲ್ಲ ತಾಲೂಕು ಆಸ್ಪತ್ರೆಗಳಲ್ಲಿ ಅಗತ್ಯ ಸೌಲಭ್ಯ, ಆಕ್ಸಿಜನ್ ಘಟಕ ಸ್ಥಾಪನೆ ಮಾಡುವ ಕೆಲಸ ಮಾಡಿದ್ದೇನೆ.
 ಸಿಂಧಗಿ ಕ್ಷೇತ್ರದಲ್ಲಿ ನಿರಂತರ ಪ್ರವಾಹದಿಂದ ಸಂಕಷ್ಟಕ್ಕೆ ಒಳಗಾಗಿರುವ ರೈತರಿಗೆ ಪರಿಹಾರ ಒದಗಿಸುವ ಕೆಲಸ ಮಾಡಿದ್ದೇನೆ. ಭೀಮಾ ಏತ ನೀರಾವರಿ ಯೋಜನೆಯಿಂದ ಸಂಕಷ್ಟಕ್ಕೆ ಒಳಗಾಗಿದ್ದ ತಾರಾಪುರ ಮತ್ತು ಬ್ಯಾಡಗಿ ಹಾಳ ಗ್ರಾಮದ 358 ಕುಟುಂಬಗಳಿಗೆ ಹಕ್ಕು ಪತ್ರ ನೀಡಿ ಪುನರ್ ವಸತಿ ಕಲ್ಪಿಸುವ ಕೆಲಸ ಮಾಡಿದ್ದೇನೆ ಎಂದು ಹೇಳಿದರು. ಅಧಿಕಾರ ಇಲ್ಲದಿದ್ದರೂ ರಮೇಶ ಬೂಸನೂರು ಅವರು, ಕೊರೊನಾ ಸಂದರ್ಭದಲ್ಲಿ  ಸ್ವಂತ ಖರ್ಚಿನಲ್ಲಿ ಸಾಕಷ್ಟು ಜನರಿಗೆ ಸಹಾಯ ಮಾಡಿದ್ದಾರೆ ಎಂದು ಹೇಳಿದರು.
ನಂತರ ಶಂಬೆವಾಡದಲ್ಲಿ ಪ್ರಚಾರ ಮುಂದುವರೆಸಿದ ಸಚಿವರು, ದೇಶದ ಜನಸಂಖ್ಯೆಯ ಶೇ 50 ರಷ್ಟು ಮಹಿಳಾ ಮತದಾರರಿದ್ದೇವೆ. ನಾವು ಮನೆಯಲ್ಲಿ ತಂದೆ ಹೇಳಿದಾಗ ಮದುವೆಯಾದ ಮೇಲೆ ಗಂಡ ಹೇಳಿದ ಅಭ್ಯರ್ಥಿಗೆ ಮತ ಹಾಕಿಕೊಂಡು ಬಂದಿದ್ದೇವೆ. ಆದರೆ, ನಾವು ಏಕೆ ಮತ ಹಾಕುತ್ತಿದ್ದೇವೆ ಎಂದು ಯೋಚನೆ ಮಾಡಬೇಕು.
ಇಷ್ಟು ವರ್ಷದಿಂದ ರಾಜ್ಯ ಹಾಗೂ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದವು. ಅವರು ಜನರ ಅಭಿವೃದ್ಧಿಗೆ ಏನೂ ಮಾಡಲಿಲ್ಲ. ಈಗ ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದೆ. ಈಗ ನಮ್ಮ ಸರ್ಕಾರಗಳು ಹಳ್ಳಿಗಳ ಅಭಿವೃದ್ಧಿ ಕಡೆಗೆ ಗಮನ ಹರಿಸಿದ್ದೇವೆ. ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಾಯಿಯವರು ಸ್ವಾಾತಂತ್ರ್ಯೋತ್ಸವದ 75 ವರ್ಷದ ಹಿನ್ನೆಲೆಯಲ್ಲಿ ಅಮೃತ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ.
 
ತಮ್ಮ ಪ್ರಚಾರವನ್ನು ಸಂಜೆಯೂ ಮುಂದುವರೆಸಿದ ಸಚಿವರು, ಕಡ್ಲೆವಾಡ ಗ್ರಾಾಮದಲ್ಲಿ  ಮಾತನಾಡಿ, ಜನರು ಯಾರನ್ನೂ ಸುಮ್ಮನೆ ನೆನೆಸಿ ಕೊಳ್ಳುವುದಿಲ್ಲ. ಏನಾದರೂ ಒಳ್ಳೆಯದನ್ನು ಮಾಡಿದರೆ ಮಾತ್ರ ನೆನೆಸಿಕೊಳ್ಳುತ್ತಾರೆ. ರಮೇಶ ಬೂಸನೂರು ಅವರು ಶಾಸಕರಾಗಿದ್ದಾಗ, ಸಮುದಾಯ ಭವನ, ಅಂಬೇಡ್ಕರ ಭವನ, ಶಾದಿ ಮಹಲ್, ದೇವಸ್ಥಾನಗಳನ್ನು ನಿರ್ಮಾಣ ಮಾಡಿದ್ದಾರೆ.
 
ರಮೇಶ್ ಬೂಸನೂರು ಅವರು ಶಾಸಕರಾಗಿದ್ದಾಗ ಪೈಲ್ ಹಿಡಿದುಕೊಂಡು ಜನರ ಕೆಲಸ ಮಾಡಲು ವಿಧಾನಸೌಧದಲ್ಲಿ ಅಲೆದಾಡುತ್ತಿದ್ದರು. ಆಗ ರಮೇಶ ಬೂಸನೂರು ಅವರು ಜನರು ಎರಡು ಸಾರಿ ನನಗೆ ಆಶೀರ್ವಾದ ಮಾಡಿದ್ದಾರೆ. ಅವರ ಋಣ ತೀರಿಸಲು ನಾನೇ ಸ್ವತಃ ಕೆಲಸ ಮಾಡಿ ಅವರ ಋಣ ತೀರಿಸಬೇಕು ಎಂದು ಹೇಳಿದ್ದರು. ಅವರು ಜನರ ಪರವಾಗಿ ಅಷ್ಟೊಂದು ಚಿಂತನೆ ಮಾಡುತ್ತಿದ್ದರು. ಈಗ ಮತ್ತೆ ಅವರನ್ನು ಶಾಸಕರನ್ನಾಾಗಿ ಆಯ್ಕೆ ಮಾಡುವ ಅವಕಾಶ ಬಂದಿದೆ. ಬಿಜೆಪಿಗೆ ಮತ ಹಾಕುವ ಮೂಲಕ ಅವರನ್ನು ಮತ್ತೆ ಶಾಸಕರನ್ನಾಗಿ ಮಾಡಿ, ಕೇಂದ್ರ ಹಾಗೂ ರಾಜ್ಯದಲ್ಲಿರುವ ಸರ್ಕಾರಗಳಿಗೆ ಮತ್ತಷ್ಟು ಶಕ್ತಿ ತುಂಬುವ ಕೆಲಸ ಮಾಡಬೇಕು ಎಂದು ಮನವಿ ಮಾಡಿದರು.
ದೇವಣಗಾಂವದಲ್ಲಿ ಪ್ರಚಾರ ಮಾಡಿದ ಸಚಿವರು, ರಮೇಶ ಬೂಸನೂರು ಅವರಿಗೆ ಮಂಡಲ ಪಂಚಾಯಿತಿಯಿಂದ ಅವರನ್ನು ಚುನಾವಣೆಯಲ್ಲಿ ಆಯ್ಕೆ ಮಾಡುತ್ತ ಬಂದಿದ್ದೀರಿ, ಯಾವುದೇ ರಾಜಕೀಯ ಹಿನ್ನೆಲೆ ಇಲ್ಲದ ರಮೇಶ ಬೂಸನೂರು ಅವರನ್ನು ಎರಡು ಬಾರಿ ವಿಧಾನಸಭೆಗೆ ಆಯ್ಕೆಮಾಡುವ ಮೂಲಕ ದೇವಣಗಾಂವ ಗ್ರಾಮ ಕರ್ನಾಟಕದ ಭೂಪುಟದಲ್ಲಿ  ಎದ್ದು ಕಾಣುವಂತೆ ಮಾಡಿದ್ದೀರಿ ಎಂದು ಹೇಳಿದರು.
ರಮೇಶ ಬೂಸನೂರು ಅವರನ್ನು ಮೂರನೇ ಬಾರಿ ಆಯ್ಕೆ ಮಾಡಿದರೆ, ಮುಂದಿನ ದಿನಗಳಲ್ಲಿ ಅವರು ಮಂತ್ರಿಯಾಗಿ ಬಂದು ಕೆಲಸ ಮಾಡುವ ಸಾಧ್ಯತೆ ಇದೆ. ರಮೇಶ ಬೂಸನೂರು ಅವರ ಕೆಲಸಗಳು ಈ ಕ್ಷೇತ್ರದಲ್ಲಿ ಮಾತನಾಡುತ್ತಿವೆ. ಸಮುದಾಯ ಭವನಗಳು, ನೀರಾವರಿ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ, ಕಳೆದ ಮೂರು ವರ್ಷದಲ್ಲಿ ಅವರು ಶಾಸಕರಿಲ್ಲದೇ ಎಷ್ಟು ಕೆಲಸ ಆಗಿದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ ಎಂದು ಹೇಳಿದರು.
 
ಮಹಿಳೆಯರು ಕಮಲ ಚಿಹ್ನೆಗೆ ಮತ  ಹಾಕುವಂತೆ ಎಲ್ಲರೂ ಮನವೊಲಿಸುವ ಪ್ರಯತ್ನ ಮಾಡಬೇಕು. ಮಹಿಳಾ ಕಾರ್ಯಕರ್ತರು ಅಡುಗೆ ಮನೆವರೆಗೂ ತೆರಳಿ ಮಹಿಳಾ ಮತದಾರರ ಮನವೊಲಿಸಿ ಬಿಜೆಪಿಗೆ ಮತ ಹಾಕುವಂತೆ ಮಾಡಬೇಕು ಎಂದು ಸಚಿವರು ಸೂಚಿಸಿದರು. ಸಚಿವರೊಂದಿಗೆ ಪ್ರಚಾರದಲ್ಲಿ ಶಾಸಕರಾದ ಸೋಮನಗೌಡ ಪಾಟೀಲ್, ರಮೇಶ್ ಬೂಸನೂರು ಅವರ ಪತ್ನಿ ಲಲಿತಾ ಬೂಸನೂರು ಹಾಗೂ ಸ್ಥಳೀಯ ಪಕ್ಷದ ಮುಖಂಡರು ಪಾಲ್ಗೊಂಡಿದ್ದರು.
 
 
 
 
 
 
 
 
 
 
 

Leave a Reply