ಅಂಚೆ ಇಲಾಖೆಯ ಇತಿಹಾಸದೊಂದಿಗೆ ನಮ್ಮ ದೇಶದ ಇತಿಹಾಸ, ಆಗುಹೋಗು ಹಾಗು ಮಹತ್ತ್ವವನ್ನು ಸಾರುವ ಅಂಚೆ ಚೀಟಿ ಸಂಗ್ರಹಣಾ ಹವ್ಯಾಸವು ರಾಜರುಗಳ ಹವ್ಯಾಸವೆಂದೇ ಹೆಸರಾಗಿದ್ದು ಈ ಹವ್ಯಾಸವನ್ನು ಮೈಗೂಡಿಸಿ ಕೊಂಡವರೆಲ್ಲರೂ ಅಭಿನಂದನಾರ್ಹರು ಎಂದು ಉಡುಪಿ ಅಂಚೆ ವಿಭಾಗದ ಅಂಚೆ ಅಧೀಕ್ಷಕರಾದ ನವೀನ ಚಂದರ್ ರವರು ಅಭಿಪ್ರಾಯ ಪಟ್ಟರು.
ಅವರು ಭಾರತೀಯ ಅಂಚೆ ಇಲಾಖೆ ಮತ್ತು ಉಡುಪ ರತ್ನ ಪ್ರತಿಷ್ಠಾನದ ಸಹಯೋಗದಲ್ಲಿ ಕೊಡವೂರಿನಲ್ಲಿ ಉಡುಪಿ ಅಂಚೆ ಇಲಾಖೆಯ ಉದ್ಯೋಗಿ ಶ್ರೀಮತಿ ಪೂರ್ಣಿಮಾ ಜನಾರ್ದನ್ ರವರ ” ಭಾಮಾ ಫಿಲಾಟೆಲಿ ಗ್ಯಾಲರಿ”ಯನ್ನು ವಿದ್ಯುಕ್ತವಾಗಿ ಉದ್ಘಾಟಿಸಿ ಮಾತನಾಡುತ್ತಾ ಅಂಚೆ ಸಪ್ತಾಹದ ಸಂದರ್ಭದಲ್ಲಿ ಫಿಲಾಟೆಲಿ ದಿನವಾದ ಇಂದು ಈ ಗ್ಯಾಲರಿ ಲೋಕಾರ್ಪಣೆಗೊಳ್ಳುತ್ತಿರುವುದು ನಮ್ಮ ಅಂಚೆ ಇಲಾಖೆಗೆ ಹೆಮ್ಮೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಉಡುಪಿಯ ಪ್ರತಿಷ್ಠಿತ ಗಾಂಧಿ ಆಸ್ಪತ್ರೆಯ ಆಡಳಿತ ನಿರ್ದೇಶಕರಾದ ಎಂ ಹರಿಶ್ಚಂದ್ರರವರು ಮಾತನಾಡುತ್ತಾ ಮಕ್ಕಳಿಗೆ ಅಥವಾ ಆಸಕ್ತರಿಗೆ ಅಂಚೆ ಚೀಟಿಯ ವಿಶೇಷತೆ ಅರ್ಥ ಮಾಡಿ ಕೊಳ್ಳಲು ಅಪರೂಪದಲ್ಲಿ ಅಪರೂಪ ಎನ್ನಬಹುದಾದ ಈ ಫಿಲಾಟೆಲಿ ಗ್ಯಾಲರಿ ತುಂಬಾ ಉಪಯುಕ್ತವಾಗಿದೆ ಎಂದರು.
ಪ್ರಸಿದ್ಧ ಅಂಚೆಚೀಟಿ ಸಂಗ್ರಾಹಕ ಸಂದೀಪ್ ಕುಮಾರ್ ರವರನ್ನು ಫಿಲಾಟಲಿ ದಿನದ ಪ್ರಯುಕ್ತ ಅಭಿನಂದಿಸಲಾ ಯಿತು. ಅಂಚೆ ಉಪ ಅಧೀಕ್ಷಕ ಧನಂಜಯ ಆಚಾರ್, ಉಡುಪಿ ಕಾರ್ಪೊರೇಷನ್ ಬ್ಯಾಂಕ್ ಹಾಜಿ ಅಬ್ದುಲಾ ಮೆಮೋರಿಯಲ್ ಮ್ಯೂಸಿಯಂ ನ ಮೇಲ್ವಿಚಾರಕರಾದ ಜಯಪ್ರಕಾಶ್ ರಾವ್, ಶಂಕರನಾರಾಯಣ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪ್ರಕಾಶ್ ಜಿ.
ಬ್ರಾಹ್ಮಣ ಮಹಾಸಭಾ ಕೊಡವೂರು ವಲಯದ ಅಧ್ಯಕ್ಶ ಕೆ. ನಾರಾಯಣ ಬಲ್ಲಾಳ್, ಕಟ್ಟಡ ನಿರ್ಮಾಣ ಅಭಿಯಂತರ ವಿಶ್ವನಾಥ್ ಭಟ್, ರಾಮಾಂಜಿ ಉಪಸ್ಥಿತರಿದ್ದರು. ಪೂರ್ಣಿಮಾ ಜನಾರ್ಧನ್ ಸ್ವಾಗತಿಸಿ ಪ್ರಸ್ತಾಪಿಸಿದರು, ನರಸಿಂಹ ನಾಯಕ್ ವಂದಿಸಿದರು. ಉಡುಪ ರತ್ನ ಪ್ರತಿಷ್ಟಾನದ ಸಂಚಾಲಕ ಜನಾರ್ದನ್ ಕೊಡವೂರು ನಿರೂಪಿಸಿದರು. ಪಾಡಿಗಾರು ಲಕ್ಷ್ಮೀನಾರಾಯಣ ಉಪಾಧ್ಯ ಪ್ರಾರ್ಥಿಸಿದರು.