ಬಡಗಬೆಟ್ಟು ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿ- ಶೇ 15 ಡಿವಿಡೆಂಡ್

ಉಡುಪಿ: ಸಹಕಾರ ತತ್ವದ ಮೂಲ ಆಶಯದೊಂದಿಗೆ ಸದಾ ಹೊಸತನಕ್ಕೆ ಹೆಚ್ಚು ಆದ್ಯತೆಯನ್ನು ನೀಡಿ ಶತಮಾನೋತ್ಸವವನ್ನು ಯಶಸ್ವಿಯಾಗಿ ಪೂರೈಸಿ ಮುನ್ನಡೆಯುತ್ತಿರುವ ಉಡುಪಿಯ ಬಡಗಬೆಟ್ಟು ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿಯು ತನ್ನ ಸಾಮಾಜಿಕ ಕಾಳಜಿಯುಳ್ಳ ವಿವಿಧ ಸೇವಾ ಕಾರ್ಯಕ್ರಮಗಳ ಮೂಲಕ ಜಿಲ್ಲೆಯಲ್ಲಿ ವಿಭಿನ್ನ ಛಾಪು ಮೂಡಿಸಿ ರಾಜ್ಯದಲ್ಲಿಯೇ ಸಹಕಾರಿ ರಂಗದ ಮಾದರಿ ಸಹಕಾರ ಸಂಘಗಳಲ್ಲೊಂದಾಗಿದೆ.

1918 ರಲ್ಲಿ ಸ್ಥಾಪನೆಗೊಂಡು 1980ರತನಕ ಹಲವು ಏಳು ಬೀಳುಗಳನ್ನು ಕಂಡು 1985ರ ನಂತರದಲ್ಲಿ ಹೊಸ ಆಡಳಿತ ಮಂಡಳಿ ರಚನೆಗೊಂಡು, ಪ್ರಧಾನ ವ್ಯವಸ್ಥಾಪಕ ಜಯಕರ ಶೆಟ್ಟಿ ಇಂದ್ರಾಳಿಯವರು ಮತ್ತು ಸಿಬ್ಬಂದಿ ವರ್ಗದವರ ಸಹಕಾರದೊಂದಿಗೆ ಪ್ರಸ್ತುತ ಸಂಘದ ಸಾಧನೆಗೆ ಮುಕುಟಪ್ರಾಯವಾಗಿ ರಾಷ್ಟ್ರದಲ್ಲಿಯೇ ಸತತವಾಗಿ 2 ಬಾರಿ ಕೇಂದ್ರ ಸರಕಾರದ ಎನ್ ಸಿ ಡಿ ಸಿ ಪ್ರಶಸ್ತಿ, 6 ಬಾರಿ ಕರ್ನಾಟಕ ರಾಜ್ಯದ ಸಹಕಾರ ಪ್ರಶಸ್ತಿ, 14 ಬಾರಿ ಅವಿಭಜಿತ ದ.ಕ ಜಿಲ್ಲಾ ಪ್ರಶಸ್ತಿಗಳನ್ನು ಪಡೆದ ರಾಜ್ಯದ ಏಕೈಕ ಕ್ರೆಡಿಟ್ ಸೊಸೈಟಿಯಾಗಿ ಗುರುತಿಸಿಕೊಂಡಿದೆ.

ಸಂಘದ ವಾರ್ಷಿಕ ಮಹಾಸಭೆಯು ನವೆಂಬರ್ 28 ರಂದು ವರ್ಚುಯಲ್/ಆನ್‌ಲೈನ್ ಮೂಲಕ ಜರಗಿದ್ದು, ಸಂಘದ ಅಧ್ಯಕ್ಷರಾದ ಸಂಜೀವ ಕಾಂಚನ್‌ರವರು ಅಧ್ಯಕ್ಷತೆ ವಹಿಸಿ ಸ್ವಾಗತಿಸಿದರು. ಸಂಘದ ಪ್ರಧಾನ ವ್ಯವಸ್ಥಾಪಕರಾದ ಜಯಕರ ಶೆಟ್ಟಿ ಇಂದ್ರಾಳಿಯವರು ವಾರ್ಷಿಕ ವರದಿಯನ್ನು ಮತ್ತು ಪರಿಶೋಧಿತ ಲೆಕ್ಕಪತ್ರಗಳನ್ನು ಮಂಡಿಸಿದರು.

ವರದಿ ಸಾಲಿನ ಅಂತ್ಯಕ್ಕೆ ಸಂಘವು ಒಟ್ಟು 17,501 ಸದಸ್ಯರಿಂದ ರೂ. 4.35 ಕೋಟಿ ಪಾಲು ಬಂಡವಾಳ ಹಾಗೂ ರೂ. 350.33 ಕೋಟಿ ಠೇವಣಿ ಸಂಗ್ರಹಿಸಿದ್ದು, ರೂ. 255.46 ಕೋಟಿ ಹೊರಬಾಕಿ ಸಾಲ ಇರುತ್ತದೆ. ವರದಿ ಸಾಲಿನಲ್ಲಿ ಸಂಘವು ರೂ.9.12 ಕೋಟಿ ನಿವ್ವಳ ಲಾಭ ಗಳಿಸಿದ್ದು, ಸಂಘದ ಸದಸ್ಯರಿಗೆ ಶೇ.15 ಡಿವಿಡೆಂಡ್ ಘೋಷಿಸಲಾಯಿತು.

ಸಂಘವು ಕೇವಲ ಬ್ಯಾಂಕಿಂಗ್ ವ್ಯವಹಾರ ಮಾಡಿ ಲಾಭಗಳಿಸುವ ದೃಷ್ಟಿಯನ್ನು ಇಟ್ಟುಕೊಳ್ಳದೇ ಸಹಕಾರ ಸಂಘಗಳ ಪೈಕಿ ವಿಶಿಷ್ಟ ಮತ್ತು ಸಾಧ್ಯವಿರುವ ಎಲ್ಲಾ ರೀತಿಯಲ್ಲೂ ಸದಸ್ಯರಿಗೆ, ಗ್ರಾಹಕರಿಗೆ ನೆರವಾಗುವ ಪರಂಪರೆಯನ್ನು ಸ್ಥಾಪನೆಯಾದಂದಿನಿಂದ ನಿರಂತರವಾಗಿ ಮಾಡುತ್ತಾ ಬಂದಿದ್ದು, ಕೊರೋನಾ ಸಂಕಷ್ಟದ ಸಮಯದಲ್ಲಿಯೂ ನಿರಂತರವಾಗಿ ಸದಸ್ಯ ಗ್ರಾಹಕರಿಗೆ ಬ್ಯಾಂಕಿಂಗ್ ವ್ಯವಹಾರವನ್ನು ಕಲ್ಪಿಸಲಾಗಿರುತ್ತದೆ.

ಸಂಘದ ಎಲ್ಲಾ ಶಾಖೆಗಳಲ್ಲಿ ಗ್ರಾಹಕರಿಗೆ ವಿವಿಧ ರೀತಿಯ ಸೇವೆ ನೀಡುವ ಸಲುವಾಗಿ ಈಗಾಗಲೇ ಸೇಫ್ ಲಾಕರ್ ಸೌಲಭ್ಯ, ಇ-ಸ್ಟಾಂಪಿಂಗ್ ಸೌಲಭ್ಯ, ಪಾನ್ ಕಾರ್ಡ್ ಸೌಲಭ್ಯ, ನೆಫ್ಟ್, ಆರ್.ಟಿ.ಜಿ.ಎಸ್ ಸೇವಾ ಸೌಲಭ್ಯ, ವೆಸ್ಟರ್ನ್ ಯೂನಿಯನ್ ಮನಿ ಟ್ರಾನ್ಸ್ಫರ್ ಸೌಲಭ್ಯ, ರಿಯಾ ಮನಿ ಟ್ರಾನ್ಸ್ಫರ್ ಸೌಲಭ್ಯ, ಐ.ಎಂ.ಪಿ.ಎಸ್ ಸಿಸ್ಟಮ್ ಮುಖಾಂತರ ತ್ವರಿತವಾಗಿ ದೇಶವ್ಯಾಪಿ ಹಣ ರವಾನೆ ಮಾಡುವ ವ್ಯವಸ್ಥೆ, ವರ್ಚುಯಲ್ ಪೇಮೆಂಟ್ ಸೌಲಭ್ಯ, ಲಂಬಾರ್ಡ್ ಆರೋಗ್ಯ ಕಾರ್ಡ್, ಮಣಿಪಾಲ ಆರೋಗ್ಯ ಕಾರ್ಡ್, ಎಸ್‌ಎಮ್‌ಎಸ್ ಮುಖಾಂತರ ಸಂದೇಶ ರವಾನಿಸುವ ಯೋಜನೆಯನ್ನು ಕಲ್ಪಿಸಲಾಗಿದೆ. 

ಭಾರತೀಯ ಜೀವ ವಿಮಾ ನಿಗಮದ ಭಾಗ್ಯಲಕ್ಷ್ಮೀ ಮೈಕ್ರೋ ಇನ್ಶೂರೆನ್ಸ್ ಜೀವವಿಮಾ ಪಾಲಿಸಿ ಹಾಗೂ ಸ್ಟಾರ್ ಹೆಲ್ತ್ ಜೀವ ವಿಮೆ ಪಾಲಿಸಿಗಳನ್ನು ವಿತರಿಸಲಾಗುತ್ತಿದ್ದು, ಸದಸ್ಯರಿಗೆ ಉಳಿತಾಯ ಖಾತೆಯ ಬ್ಯಾಲೆನ್ಸ್ ತಿಳಿಯಲು ಮಿಸ್ಡ್ಕಾಲ್ ಸರ್ವಿಸ್, ಎಸ್.ಎಂ.ಎಸ್ ಸೌಲಭ್ಯ ಅಳವಡಿಸಿದ್ದು, ಪ್ರಸ್ತುತ ತನ್ನ ಕಾರ್ಯವ್ಯಾಪ್ತಿಯಲ್ಲಿ 10 ಶಾಖೆಗಳನ್ನು ಹೊಂದಿ ವ್ಯವಹರಿಸುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಬನ್ನಂಜೆ ಬಾಬು ಅಮೀನ್, ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಗೋಪಾಲ ಸಿ ಬಂಗೇರ, ಸೌತ್ ಕೆನರಾ ಫೋಟೋಗ್ರಾಪರ್ಸ್ ಸಂಘಟನೆಯ ಅಧ್ಯಕ್ಷ  ಜನಾರ್ದನ್  ಕೊಡವೂರು ಹಾಗು ಅವರ ತಂಡಕ್ಕೆ, ಸಂಘದಲ್ಲಿ 19ವರ್ಷಗಳ ಕಾಲ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ ಹಿರಿಯ ಗುಮಾಸ್ತರಾಗಿ ವಯೋ ನಿವೃತ್ತಿಯಾದ ಆನಂದ ಬಿ.ರನ್ನು ಸಂಘದ ವತಿಯಿಂದ ಅಭಿನಂದಿಸಿ ಗೌರವಿಸಲಾಯಿತು.

ಸಂಘದ ಆಡಳಿತ ಮಂಡಳಿ ಸದಸ್ಯರಾದ ಪುರುಷೋತ್ತಮ ಪಿ. ಶೆಟ್ಟಿ. ಹಾಜಿ ಸಯ್ಯದ್ ಅಬ್ದುಲ್ ರಜಾಕ್, ವಸಂತ ಕೆ. ಕಾಮತ್, ವಿನಯ ಕುಮಾರ್ ಟಿ.ಎ., ಜಯಾನಂದ ಸಿ ಮೈಂದನ್, ಪದ್ಮನಾಭ ಕೆ ನಾಯಕ್, ರಘುರಾಮ ಎಸ್.ಶೆಟ್ಟಿ, ಜಾರ್ಜ್ ಸಾಮ್ಯುವೆಲ್, ಸದಾಶಿವ ನಾಯ್ಕ್, ಜಯ ಶೆಟ್ಟಿ ಹಾಗೂ ಗಾಯತ್ರ‍್ರಿ ಎಸ್ ಭಟ್, ಸಹಾಯಕ ಪ್ರಧಾನ ವ್ಯವಸ್ಥಾಪಕರಾದ ರಾಜೇಶ್ ವಿ ಎಸ್‌ರವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.  ಸಂಘದ ಉಪಾಧ್ಯಕ್ಷರಾದ ಎಲ್. ಉಮಾನಾಥ್‌ ವಂದಿಸಿದರು.

 
 
 
 
 
 
 
 
 
 
 

Leave a Reply