ಶ್ರೀ ಧರ್ಮಸ್ಥಳ ಮಂಜನಾಥೇಶ್ವರ ಆಯುರ್ವೇದ ಮಹಾವಿದ್ಯಾಲಯದಲ್ಲಿ ವಿಶ್ವ ಪರಿಸರ ದಿನಾಚರಣೆಯು ವಿದ್ಯಾಲಯದ ದ್ರವ್ಯಗುಣ ವಿಭಾಗ, ಮೂಲಿಕೋದ್ಯಾನ ಸಮಿತಿ, ರಾಷ್ಟ್ರೀಯ ಸೇವಾ ಯೋಜನೆ, ರೆಡ್ಕ್ರಾಸ್ ಘಟಕಗಳ ಸಹಯೋಗದೊಂದಿಗೆ ಜರುಗಿತು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್.ಡಿ.ಎಮ್. ಆಯುರ್ವೇದ ಆಸ್ಪತ್ರೆ, ಉಡುಪಿ ಇದರ ವೈದ್ಯಕೀಯ ಅಧೀಕ್ಷಕರಾದ ಡಾ. ನಾಗರಾಜ್ ಎಸ್. ವಹಿಸಿ ಪರಿಸರ ಹಾಗೂ ಮಾನವನ ನಡುವಿನ ಸಾಮತ್ಯೆಗಳನ್ನು ಗುರುತಿಸಿ ಜೀವನ ನಡೆಸಬೇಕೆಂದು ಆಶಿಸಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ, ಜಲಾನುಸಂಧಾನದ ಪ್ರಮುಖ ರೂವಾರಿ, ಉಡುಪಿ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರತ್ನಶ್ರೀ ಜೋಸೆಫ್ ಜಿ.ಎಮ್. ರೆಬೆಲ್ಲೊ ಅವರು ಜಲ ಸಂರಕ್ಷಣೆ ಜಲ ಮರು ಪೂರಣಗಳ ಕುರಿತು ಸಂಪೂರ್ಣ ಮಾಹಿತಿ ನೀಡಿದರು.
ಡಾ. ಲಿಖಿತಾ ಅವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಎನ್ನೆಸ್ಸೆಸ್ ಯೋಜನಾಧಿಕಾರಿ ಡಾ. ವಿದ್ಯಾಲಕ್ಷ್ಮೀ ಕೆ. ಸ್ವಾಗತ ಭಾಷಣ ನೆರವೇರಿಸಿದರು. ಕಾರ್ಯಕ್ರಮದ ಉದ್ದೇಶವನ್ನು ಮೂಲಿಕೋದ್ಯಾನ ಸಮಿತಿಯ ಅಧ್ಯಕ್ಷೆ ಡಾ.ಸುಮಾ ಮಲ್ಯ ವಿವರಿಸಿದರು.
ಕಾರ್ಯಕ್ರಮದ ಅಂಗವಾಗಿ ಆಯುರ್ವೇದ ಪದವಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿದ್ದ ಪ್ರಬಂಧ ಸ್ಪರ್ಧೆಯ ವಿಜೇತರ ಪಟ್ಟಿಯನ್ನು ದ್ರವ್ಯಗುಣ ವಿಭಾಗಾಧ್ಯಕ್ಷರಾದ ಡಾ. ಶ್ರೀಕಾಂತ್ ಪಿ. ಅವರು ಓದಿದರು. ಸ್ಪರ್ಧೆಯ ತೀರ್ಪುಗಾರರಾದ ಡಾ. ಲಿಖಿತಾ ಡಿ.ಎನ್. ಹಾಗೂ ಡಾ. ಯೋಗೀಶ್ ಆಚಾರ್ಯ ಅವರನ್ನು
ಈ ಸಂದರ್ಭದಲ್ಲಿ ಗೌರವಿಸಲಾಯಿತು.
ರೆಡ್ಕ್ರಾಸ್ ಸಂಸ್ಥೆಯ ಕಾಲೇಜಿನ ಮುಖ್ಯಸ್ಥರಾದ ಡಾ. ಮೊಹಮ್ಮದ್ ಫೈಸಲ್ರವರು ವಂದನಾರ್ಪಣೆ ನೆರವೇರಿಸಿದರು. ಡಾ. ಸುಶ್ಮಿತಾ ವಿ.ಎಸ್. ಕಾರ್ಯಕ್ರಮವನ್ನು ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಮೂಲಿಕೋದ್ಯಾನದ ಸ್ವಚ್ಛತಾ ಕಾರ್ಯವನ್ನು ನೆರವೇರಿಸಲಾಯಿತು. ಕಾರ್ಯಕ್ರಮದಲ್ಲಿ ಕಾಲೇಜು, ಆಸ್ಪತ್ರೆಯ
ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು.