ಗುರುವಾರ ಸಂಜೆ ವಿದುಷಿ ಪವನ ಬಿ.ಆಚಾರ್ ನಿರ್ದೇಶನದಲ್ಲಿ ವೀಣಾ ವಾದಕರು ಏಕಕಾಲದಲ್ಲಿ 151 ವೀಣೆಗಳನ್ನು ನುಡಿಸಿದರು. ಕಲಾವಿದರು ಒಂದು ಗಂಟೆ ಸತತವಾಗಿ ವೀಣೆಗಳನ್ನು ನುಡಿಸುವ ಮೂಲಕ ನೆರೆದಿದ್ದ ಜನರಿಗೆ ಸಂಗೀತದ ರಸದೌತಣ ಉಣ ಬಡಿಸಿದರು. ಏಕಕಾಲದಲ್ಲಿ ಹೊರಹೊಮ್ಮಿದ ವೀಣೆಗಳ ನಾದಸ್ವರ ಸಾಗರದ ಅಲೆಗಳಂತೆ ತೇಲಿಬಂದು ಸಂಗೀತ ಪ್ರಿಯರ ಮೈ ಮನಸ್ಸಿಗೆ ಮುದ ನೀಡಿತು. ಸಾವಿರಾರು ಮಂದಿ ಕಾರ್ಯಕ್ರಮದ ಸವಿ ಸವಿದರು.
ಕಾರ್ಯಕ್ರಮದಲ್ಲಿ ವಿದುಷಿ ಪವನ ಬಿ. ಆಚಾರ್ ಅವರಿಗೆ ವೀಣಾ ವಿಭೂಷಣೆ ಪ್ರಶಸ್ತಿಯನ್ನು ಕ್ಷೇತ್ರದ ಗೌರವ ಸಲಹೆಗಾರ ಜಿ.ಶಂಕರ್ ಹಾಗೂ ಶಾಲಿನಿ ದಂಪತಿ ವಿತರಿಸಿದರು. ಬಳಿಕ ಮಾತನಾಡಿದ ಜಿ.ಶಂಕರ್, ‘ಕಳೆದ ಬಾರಿ 101 ವೀಣೆಗಳ ವಾದನ ನಡೆದಿತ್ತು. ಈ ಬಾರಿ 151 ಹಾಗೂ ಮುಂದಿನ ಬಾರಿ 200 ವೀಣೆಗಳ ವಾದನ ಆಯೋಜಿಸಲಾಗುವುದು’ ಎಂದರು.
ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ.ಕೋಟ್ಯಾನ್, ದೇವಳದ ಅರ್ಚಕ ರಾಘವೇಂದ್ರ ಉಪಾಧ್ಯಾಯ, ವ್ಯವಸ್ಥಾಪಕ ಸತೀಶ್ ಅಮೀನ್ ಇದ್ದರು.