ಕುಂದಾಪುರದಲ್ಲಿ ‘ಸುರಗಂಗೆ’ ಪುಸ್ತಕ ಬಿಡುಗಡೆ.

ಪಂಚಭಾಷಾ ಲೇಖಕಿ ಪಾರ್ವತಿ ಜಿ ಐತಾಳ್ ವಿಶೇಷವಾಗಿ ಕನ್ನಡ ಸಾಹಿತ್ಯಕ್ಕೆ ಸಲ್ಲಿಸಿರುವ ಸೇವೆ ಅನುಪಮವಾದದ್ದು. ಅವರ ಸಾಧನೆ ಸದಾ ಕಾಲ ಪ್ರೇರಣೆ ನೀಡುವಂತದ್ದು. ಅವರಿಗೆ ಸಾಹಿತ್ಯ ಕ್ಷೇತ್ರದಲ್ಲಿ ಮತ್ತಷ್ಟು ಎತ್ತರದ ಮನ್ನಣೆ ಸಿಗಲೇ ಬೇಕಿದೆ ಎಂದು ಖ್ಯಾತ ಕಲಾವಿದೆ ಸಾಹಿತಿ ಪೂರ್ಣಿಮಾ ಸುರೇಶ್ ಅಭಿಪ್ರಾಯಪಟ್ಟರು.

ಅವರು ಕುಂದಾಪುರದ ಜನಪ್ರತಿನಿಧಿ ಪ್ರಕಾಶನ ಹೊರತಂದಿರುವ ನರೇಂದ್ರ ಎಸ್ ಗಂಗೊಳ್ಳಿ ಸಂಪಾದಕತ್ವದ ಡಾ. ಪಾರ್ವತಿ ಜಿ ಐತಾಳ್ ಅವರ ಸಮಗ್ರ ಕೃತಿಗಳ ಪರಿಚಯವುಳ್ಳ ‘ಸುರಗಂಗೆ’ ಪುಸ್ತಕವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.

ಅನುವಾದ ಕ್ಷೇತ್ರದಲ್ಲೂ ಕೂಡ ತಮ್ಮ ಸ್ವಂತಿಕೆಯಿಂದ ಕೃತಿಗಳಿಗೆ ಜೀವ ತುಂಬುವ ಪಾರ್ವತಿ ಐತಾಳ್ ಸಾಹಿತ್ಯ ತಪಸ್ವಿನಿ. ಹೊಸ ಚಿಗುರುಗಳನ್ನು ಬೆಳೆಸುವಲ್ಲಿ ಅವರ ಕಾರ್ಯವೈಖರಿ ಅಭಿನಂದನೀಯ ಎಂದು ಅವರು ಹೇಳಿದರು.

ಆರ್ ಎನ್ ಶೆಟ್ಟಿ ಪದವಿಪೂರ್ವ ಕಾಲೇಜಿನ ಇಂಗ್ಲೀಷ್ ಉಪನ್ಯಾಸಕಿ ಮತ್ತು ಲೇಖಕಿ ಸುಮತಿ ಶೆಣೈ ಶುಭಾಶಂಸನೆಗೈಯುತ್ತ ಮಾತನಾಡಿ ಇಂಥ ಪುಸ್ತಕಗಳು ಉದಯೋನ್ಮುಖ ಬರಹಗಾರರಿಗೆ ಬಹುದೊಡ್ಡ ಪ್ರೇರಣೆಯನ್ನು ನೀಡುವಂತಹವು. ಇದು ಹೆಚ್ಚೆಚ್ಚು ಜನರನ್ನು ತಲುಪುವಂತಾಗಬೇಕು ಎಂದು ಹೇಳಿದರು.

ಪುಸ್ತಕದ ಸಹ ಸಂಪಾದಕ ನಾಗರಾಜ್ ವಂಡ್ಸೆ, ಲೇಖಕಿ ಪಾರ್ವತಿ ಜಿ ಐತಾಳ್, ಗಂಗಾಧರ ಐತಾಳ್ ಮೊದಲಾದವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಜನಪ್ರತಿನಿಧಿ ಪ್ರಕಾಶನದ ವತಿಯಿಂದ ಪೂರ್ಣಿಮ ಸುರೇಶ್, ಸುಮತಿ ಶೆಣೈ ಮತ್ತು ನರೇಂದ್ರ ಎಸ್ ಗಂಗೊಳ್ಳಿ ಇವರನ್ನು ಸನ್ಮಾನಿಸಲಾಯಿತು.

ಪುಸ್ತಕದ ಪ್ರಕಾಶಕರಾದ ಸುಬ್ರಹ್ಮಣ್ಯ ಪಡುಕೋಣೆ ಸ್ವಾಗತಿಸಿದರು. ‘ಸುರಗಂಗೆ’ಯ ಪ್ರಧಾನ ಸಂಪಾದಕ ನರೇಂದ್ರ ಎಸ್ ಗಂಗೊಳ್ಳಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ವಿನಯ ಕೌಂಜೂರು ಕಾರ್ಯಕ್ರಮ ನಿರೂಪಿಸಿದರು. ಸಹ ಸಂಪಾದಕ ಶ್ರೀರಾಜ್ ಆಚಾರ್ಯ ಧನ್ಯವಾದಗೈದರು. 

 
 
 
 
 
 
 
 
 
 
 

Leave a Reply