ಉಡುಪಿ: ಜಿಲ್ಲಾ ಯುವ ಬ್ರಾಹ್ಮಣ ಪರಿಷತ್ ವತಿಯಿಂದ ಗುಂಡಿಬೈಲು ಬ್ರಾಹ್ಮೀ ಸಭಾಭವನದಲ್ಲಿ ಆಯೋಜಿಸಲಾದ ವೈದ್ಯರ ದಿನಾಚರಣೆ, ಪತ್ರಿಕಾ ದಿನಾಚರಣೆ ಹಾಗೂ ಲೆಕ್ಕಪರಿಶೋಧಕರ ದಿನಾಚರಣೆಯಲ್ಲಿ ಅಲೋಪತಿ ಮತ್ತು ಆಯುರ್ವೇದ ಪದ್ಧತಿಗಳ ವಿಶೇಷ ಸಾಧಕ ಡಾ. ಆರ್. ಶ್ರೀಪತಿ, ಹಿರಿಯ ಪತ್ರಕರ್ತ ಕಿರಣ್ ಮಂಜನಬೈಲು ಮತ್ತು ಲೆಕ್ಕಪರಿಶೋಧಕ ಯು. ಬಿ. ಅಜಿತ್ ಕುಮಾರ್ ಅವರನ್ನು ಗೌರವಿಸಲಾಯಿತು.
ಇದೇ ಸಂದರ್ಭದಲ್ಲಿ ಭರತ ನಾಟ್ಯ ಗುರು ವಿದುಷಿ ಪ್ರತಿಭಾ ಸಾಮಗ ಅವರಿಗೆ ಗುರು ವಂದನೆ ಸಲ್ಲಿಸಲಾಯಿತು.
ಅಶಕ್ತರಿಗೆ ವೈದ್ಯಕೀಯ ವೆಚ್ಚಕ್ಕಾಗಿ 25 ಸಾವಿರ ರೂ. ಧನಸಹಾಯ ನೀಡಲಾಯಿತು.
ಜಿಲ್ಲಾ ಆರೋಗ್ಯಾಧಿಕಾರಿ ಡಾ| ಎಚ್. ನಾಗಭೂಷಣ ಉಡುಪ, ಮಣಿಪಾಲ ಯುಪಿಎಂಸಿ ಪ್ರಾಂಶುಪಾಲ ಡಾ| ಮಧುಸೂದನ ಭಟ್ ಅಭ್ಯಾಗತರಾಗಿದ್ದರು.
ಪರಿಷತ್ ಅಧ್ಯಕ್ಷ ಚೈತನ್ಯ ಎಂ. ಜಿ. ಅಧ್ಯಕ್ಷತೆ ವಹಿಸಿದ್ದರು.
ರವೀಂದ್ರ ಆಚಾರ್ಯ, ಗಾಯತ್ರಿ ಜಿ. ಭಟ್, ಎನ್. ಸರಸ್ವತಿ, ಹರಿಪ್ರಸಾದ್ ಕೆ. ಮತ್ತು ಸುರೇಶ್ ಕಾರಂತ ಪರಿಚಯಿಸಿದರು. ಜೊತೆ ಕಾರ್ಯದರ್ಶಿ ಗುರುಪ್ರಸಾದ್ ಎ. ನೂತನ ಸದಸ್ಯರ ಪಟ್ಟಿ ವಾಚಿಸಿದರು. ಪ್ರಧಾನ ಕಾರ್ಯದರ್ಶಿ ವಿವೇಕಾನಂದ ಎನ್. ಸ್ವಾಗತಿಸಿ, ನಿರೂಪಿಸಿದರು. ಕೋಶಾಧಿಕಾರಿ ರಾಜೇಶ್ ಭಟ್ ಪಣಿಯಾಡಿ ವಂದಿಸಿದರು.
ಈ ಸಂದರ್ಭದಲ್ಲಿ ಡಾ. ಶ್ರೀಧರ ಬಾಯಿರಿ ಪ್ರಾಯೋಜಿಸಿದ ಔಷಧೀಯ ಸಸಿಗಳನ್ನು ವಿತರಿಸಲಾಯಿತು.