ಸಬಲ್ಗಢ್ ಕೋಟೆ~ ರವಿಂದ್ರ ಕುಶ್ವಹ್

ಮಧ್ಯಪ್ರದೇಶದ ಮೊರೆನಾ ಜಿಲ್ಲೆಯಿಂದ ಸುಮಾರು 65 ಕಿ.ಮೀ ದೂರದಲ್ಲಿರುವ ಪ್ರದೇಶವೇ ಸಬಲ್ಗಢ್. ಈ‌ ಪ್ರದೇಶದಲ್ಲಿನ ಬೆಟ್ಟದ ಮೇಲೆ ನಿರ್ಮಾಣ ಮಾಡಿರುವ ಕೋಟೆಯನ್ನು ಸಬಲ್ಗಢ್ ಕೋಟೆ ಎಂದು‌ ಕರೆಯುತ್ತಾರೆ.

ದಂತಕಥೆ‌ಯ ಪ್ರಕಾರ ಹಿಂದೊಮ್ಮೆ ದೀಪಾವಳಿ ಸಮಯದಲ್ಲಿ ಗ್ವಾಲಿಯರ ರಾಜನ ಪತ್ನಿಯರು ಸಬಲ್ಗಢ್ ಕೋಟೆಯ‌ ಸ್ಥಳಕ್ಕೆ ಬೇಟೆಗೆ ಬಂದಾಗ ಈ ಪ್ರದೇಶದಲ್ಲಿ ಬೆಳೆದಿದ್ದ ಸಾಸಿವೆಯ ಗದ್ದೆಯನ್ನು ನೋಡಿ ಅಲ್ಲಿನ ಜನರಲ್ಲಿ ಈ ಗದ್ದೆಯಲ್ಲಿ ಏನು ಬೆಳೆದಿದ್ದೀರಿ? ಎಂದು ಪ್ರಶ್ನಿಸುತ್ತಾರೆ. ಅದಕ್ಕೆ ಅವರು ಇದು ಹಳದಿ ಚಿನ್ನ ಎಂದು ಹೇಳುತ್ತಾರೆ. ಇವರ ಈ ಮಾತುಗಳನ್ನು ಕೇಳಿ ಆಶ್ಚರ್ಯ ಗೊಂಡ ರಾಣಿಯರು, ರಾಜನ‌ ಬಳಿ ಬಂದು ಸಬಲ್ಗಢದಲ್ಲಿ ಚಿನ್ನ ಬೆಳೆಯುತ್ತಿದ್ದಾರೆ ಎಂದು ಹೇಳುತ್ತಾರೆ.

ಈ ಮಾತನ್ನು ಕೇಳಿದ ರಾಜನು ಸಬಲ್ಗಢ್ ಕೋಟೆಯ ಮೇಲೆ ಆಕ್ರಮಣ ಮಾಡುತ್ತಾನೆ. ಈ ಯುದ್ಧದಲ್ಲಿ ಸಬಲ್ಗಢ್ ರಾಜ ಕುಮಾರನ ತಲೆಯು ಕೋಟೆಯ ಗೋಡೆಯ ಕಲ್ಲಿಗೆ ಬಡಿದು ಮರಣ ಹೊಂದುತ್ತಾನೆ. ಯುದ್ಧ ಮುಗಿದ ನಂತರದಲ್ಲಿ ಆ ಕಲ್ಲಿನಿಂದ ರಕ್ತ ಬರಲು ಪ್ರಾರಂಭವಾಯ್ತು‌. ಈ‌ ರಕ್ತವು ವರ್ಷದಲ್ಲಿ ಒಂದು ದಿನ ಈ ಕಲ್ಲಿನಿಂದ ಬರುತ್ತದೆ ಎಂದು ಜನರು ಈಗಲೂ ನಂಬುತ್ತಾರೆ. ಮತ್ತು ಈ ಕೋಟೆಗೆ ಸಂಜೆ 5 ಗಂಟೆಯ ನಂತರ ಯಾರಿಗೂ ಪ್ರವೇಶ ಇರುವುದಿಲ್ಲ.

ಕೋಟೆಯ ವಾಸ್ತುಶೈಲಿ
ಈ‌ ಕೋಟೆಯು 18 ನೇ ಶತಮಾನದಲ್ಲಿ ನಿರ್ಮಾಣವಾಗಿರುವ ವಾಸ್ತುಶೈಲಿಗೆ ಉತ್ತಮ‌ ಉದಾಹರಣೆಯಾಗಿದ್ದು, ಮಹಾರಾಜ ಗೋಪಾಲ್ ಸಿಂಗ್ (ರಾಜಸ್ಥಾನದ ಕರೌಲಿಯ ದೊರೆ) ಮತ್ತು ನವಲ್ ಸಿಂಗ್ ಖಂಡೇರಾವ್ (ಸಿಂಧಿಯಾ ಆಡಳಿತಗಾರರು ನೇಮಿಸಿದ ಸಬಲ್ಗಢದ ರಾಜ್ಯಪಾಲ) ಈ‌ ಕೋಟೆಯಲ್ಲಿ ಆಡಳಿತ ನಡೆಸಿದ್ದರು.

ಕೋಟೆಯ ಉತ್ತರ ಭಾಗದಲ್ಲಿ 1800 ಮೀ. ಉದ್ದದ ನಿರಂತರ ಕೋಟೆಯ ಗೋಡೆಯನ್ನು ಕಾಣಬಹುದು. ಪೂರ್ವ ಭಾಗದಲ್ಲಿ ಸಣ್ಣ ಕೋಟೆಯ ರಚನೆಗಳು, ಪಶ್ಚಿಮ ಭಾಗದಲ್ಲಿ ದಟ್ಟವಾದ ಅರಣ್ಯ ಮತ್ತು ದಕ್ಷಿಣದಲ್ಲಿ ಕಂದಕದ ಅವಶೇಷಗಳನ್ನು ನೋಡಬಹುದು.

ಈ‌ ಕೋಟೆಯು ಐದು ಮುಖ್ಯದ್ವಾರಗಳನ್ನು ಹೊಂದಿದ್ದು, ಉತ್ತರದಲ್ಲಿರುವ ಮುಖ್ಯದ್ವಾರವು ಕೋಟೆಯ ಹೊರ ಮತ್ತು ಒಳಭಾಗಕ್ಕೆ ಸಂಪರ್ಕವನ್ನು ಹೊಂದಿರುವುದರಿಂದ ಇದು ಪ್ರಮುಖ ದ್ವಾರದಂತೆ ತೋರುತ್ತದೆ. ಒಳಗಿನ‌ ಕೋಟೆ ಗೋಡೆಯು 12 ಬುರುಜುಗಳನ್ನು ಒಳಗೊಂಡಿದೆ.

ಕೋಟೆಯ ಒಳಭಾಗದಲ್ಲಿ ಅರಮನೆಗಳು, ಜನರಲ್ ಮತ್ತು ಗಣ್ಯರ ನಿವಾಸಗಳು, ಅಶ್ವ ಶಾಲೆಗಳು, ಕಛೇರಿ (ನ್ಯಾಯಾಲಯ), ದೇವಾಲಯಗಳು, ಬಾವಿಗಳು ಮತ್ತು‌ ಇತರ ಅವಶೇಷಗಳನ್ನು ನೋಡಬಹುದು.

ಸಬಲ್ಗಢ್ ಕೋಟೆಯು ಐತಿಹಾಸಿಕ ಸಾಂಸ್ಕ್ರತಿಕ ಮತ್ತು ವಾಸ್ತುಶಿಲ್ಪದ ಮಹತ್ವವನ್ನು ಹೊಂದಿದ್ದರೂ ಪ್ರಸ್ತುತ ಈ ಕೋಟೆಯ ಹೆಚ್ಚಿನ ಭಾಗಗಳು ಬಿರುಕುಗೊಂಡಿದ್ದು, ಅಪಾಯವನ್ನು ಎದುರಿಸುತ್ತಿದೆ.

ಸಂಗ್ರಹ: ರವಿಂದ್ರ ಕುಶ್ವಹ್, ದ್ವಿತೀಯ ಬಿ.ಎ. ವಿದ್ಯಾರ್ಥಿ, ಎಂ.ಎಸ್.ಆರ್.ಎಸ್. ಕಾಲೇಜು-ಶಿರ್ವ

 
 
 
 
 
 
 
 
 
 
 

Leave a Reply