ಸೃಷ್ಟಿ ಕರ್ತನಾದ ಬ್ರಹ್ಮನ ಸತ್ಯಲೋಕ ಎಲ್ಲಿದೆ ,ಪಾಲನಾ ಕರ್ತನಾದ ನಾರಾಯಣನ ವೈಕುಂಠ ಎಲ್ಲಿದೆ,ಇಂದ್ರನ ಸ್ವರ್ಗ ಎಲ್ಲಿದೆ, ಯಮನ ಶೈಮಿನಿ ಎಲ್ಲಿದೆ . ಇವೆಲ್ಲ ಪುರಾಣದ ವರ್ಣನೆಗಳಿಂದ ಋಷಿ ವಾಕ್ಯಗಳಿಂದ ಕಲ್ಪನೆಯಲ್ಲಿ ಸಂಭವಿ ಸುವ ಅಥವಾ ಅರ್ಥೈಸಿಕೊಳ್ಳಬಹುದಾದ ಲೋಕಗಳು.ಆದರೆ ಲಯಾಧಿಕಾರಿಯಾದ ಮಹಾದೇವನ ವಾಸಸ್ಥಾನ ಎಲ್ಲಿದೆ ಎಂಬ ಪ್ರಶ್ನೆಗೆ ಉತ್ತರ ಸರಳ .ಅದು ಭರತವರ್ಷದ ಉತ್ತರದಲ್ಲಿರುವ ಬೆಳ್ಳಿಬೆಟ್ಟ ,ಗೌರಿಶಂಕರ ಅಥವಾ ಕೈಲಾಸ.ಈ ನೆಲೆಯನ್ನು ಕಲ್ಪಿಸಬೇಕಾಗಿಲ್ಲ , ಭೂಮಿಯಲ್ಲಿ ಬದುಕುವ ಪ್ರತಿಯೊಬ್ಬನೂ ಆಲೋಚಿಸಿ ನಿರ್ಧರಿಸಬಹುದಾದ ನೆಲೆಯಾಗಿದೆ ಮಹಾದೇವನ ವಾಸಸ್ಥಾನ.
ಆದುದರಿಂದಲೇ ಮಹಾರುದ್ರದೇವರು ಸುಲಭ ಗ್ರಾಹ್ಯರು, ಜನಮಾನಸಕ್ಕೆ ಸಮೀಪದ ದೇವರು.
ಜನಪದರ ಆರಾಧ್ಯ ಮೂರ್ತಿ, ಶಿಷ್ಟ ಚಿಂತನೆಯಲ್ಲಿ ‘ಅಧ್ಯಾತ್ಮದ ಒಂದು ಬೆರಗು’. ಜಗತ್ತಿಗೆ ಮಾತೃ – ಪಿತೃ ಸ್ಥಾನದಲ್ಲಿರುವ ಪಾರ್ವತಿ ಸಮೇತನಾದ ಮಹೇಶ್ವರ ; ಇವರ ದಾಂಪತ್ಯ ಆದರ್ಶ ಎಂದೇ ಮನುಕುಲ ಸ್ವೀಕರಿಸಿದೆ.
• ಪಾರ್ವತಿಯ ಶಿವತಪಸ್ಸು , ಶಿವಭಕ್ತ ಮಾರ್ಕಾಂಡೇಯ – ಬೇಡರ ಕಣ್ಣಪ್ಪ – ಶ್ವೇತಕುಮಾರ ಮುಂತಾದ ಪುರಾಣ ಹೇಳುವ ಶಿವಭಕ್ತರ ಕಥೆಗಳು ಜನಜನಿತ . ಸರಳ – ಸಹಜ ಭಕ್ತಿಗೆ ಒಲಿಯುವ ಶಿವ ಕಪಟವರಿಯದ ಮುಗ್ಧನೆಂದೂ ಭಸ್ಮಾಸುರನ ಪ್ರಕರಣವನ್ನು ಉಲ್ಲೇಖಿಸಿ ವಿಮರ್ಶಕರು ವ್ಯಾಖ್ಯಾನಿಸುತ್ತಾರೆ.
• ರಾಕ್ಷಸರಿಗೆ ವರ ಕೊಡುವಲ್ಲಿ ಶಿವನ ಹೃದಯವಂತಿಕೆ ಮಿಡಿಯುವ ಕ್ರಮ ಗಮನಸೆಳೆಯುತ್ತದೆ .ಭವಿಷ್ಯದ ಯೋಚನೆ ಇಲ್ಲದೆ ‘ತಪಸ್ಸು ,ತಾನು ಒಲಿಯಬೇಕು’ ಎಂಬ ಮುಗ್ಧತೆ ಮಾತ್ರ ಪ್ರಧಾನವಾಗುವ ಮಹಾದೇವನ ಚರ್ಯೆ ಬಹುತೇಕ ಮನುಷ್ಯ ಸಹಜವಾಗಿಯೇ ವ್ಯಕ್ತವಾಗುತ್ತದೆ .
|ಶಿವ ಶರಣರು , ದಾಸರು ಶಿವನನ್ನು ಕಂಡ ಬಗೆಯೂ ವಿಶಿಷ್ಟ.|
– ‘ಜಗವು ಶಿವನೊಳಗುಂಟು
ಜಗದೊಳು ಶಿವನಿಲ್ಲ
ಜಗವು ಶಿವನಿಂದ ಬೇರಿಲ್ಲ ಈ ಬೆಡಗ
ಅಘಹರನೇ ಬಲ್ಲ ಸರ್ವಜ್ಞ’
‘ತ್ರಿಪದಿ ಕವಿ ಸರ್ವಜ್ಞನ ನಿರೂಪಣೆಯಂತೆ ಜಗವು ಶಿವನಿಂದ ಬೇರಿಲ್ಲ’. – ‘ರಾತ್ರಿಯೊಳು ಶಿವರಾತ್ರಿ’ ಎಂದೂ ಸರ್ವಜ್ಞ ಉದ್ಗರಿಸಿದ್ದಿದೆ .
– ಶಿವರಾತ್ರಿಯ ಜಾಗರಣೆಯಲ್ಲಿ ತನಗೆ ಶಿವ ದರ್ಶನವಾದುದನ್ನು ದಾಸವರೇಣ್ಯ ಪುರಂದರದಾಸರು ಹಾಡುತ್ತಾರೆ . – ಭಕ್ತಿ ಭಂಡಾರಿ ಬಸವಣ್ಣನವರಿಗೆ ಶಿವ ಎಲ್ಲೆಲ್ಲೂ ಕಾಣುತ್ತಾನೆ ,ವಿಶ್ವವೇ ಶಿವಮಯವಾಗಿ ಭಾಸವಾಗುತ್ತದೆ .ತ್ರಿನಯನನ ಕಣ್ಣಿನ ಕಾಂತಿಯ ಬೆಳಕಿನಿಂದಲೇ ಓಡಾಡುತ್ತಾರೆ ಬಸವಣ್ಣನವರು.
| ನಮ್ಮ ದೈವ – ಬೂತಗಳ ನಡುವಣ ಲೋಕದಲ್ಲಿ ಅಬ್ಬರಿಸುವ ಸತ್ಯಗಳ ಕಥೆಗಳು ರೋಚಕ.| – ಪಂಜುರ್ಲಿ ಪಾಡ್ದನವು ಶಿವನು ಹೇಗೆ ಈ ದೈವೀಶಕ್ತಿ ಪ್ರಕಟಗೊಳ್ಳುವಂತೆ ಮಾಡಿ ಭೂಮಿಗೆ ಕಳುಹಿಸಿದನೆಂಬ ಕಥೆಯನ್ನು ವಿವರಿಸುತ್ತದೆ .
– ಮುಂಡತ್ತಾಯ ದೈವವು ಶಿವ ದೇವರ ಹಣೆಯಿಂದ ಜನಿಸಿತಂತೆ .
– ಜೋಗಿ ಪುರುಷರಿಗೆ ಸಂಬಂಧಿಸಿದ ಕೆಲವು ಪಾಡ್ದನಗಳು ಕದಿರೆಯ ಮಂಜುನಾಥ ದೇವರನ್ನು ಉಲ್ಲೇಖಿಸಿವೆ .
– ಗುಳಿಗ ದೈವವು ಶಿವಾಂಶವೆಂಬ ವರ್ಣನೆ ಇದೆ .
– ಗಣಪತಿಯ ಜನನದ ಕುರಿತಾದ ಜಾನಪದ ಪಾಡ್ದನವೊಂದರಲ್ಲಿ ಶಿವನ ಪ್ರೇಮ ವಿಲಾಸದ ವರ್ಣನೆ ಇದೆ .ಬಾಮಕುಮಾರನೆ ಗಣಪತಿ .
– ಶಿವ – ಪಾರ್ವತಿಯರ ಭೂಲೋಕ ಸಂಚಾರದ ಕತೆಗಳು ಮತ್ತು ಆ ಸಂದರ್ಭಗಳಲ್ಲಿ ಸಂಭವಿಸಿದ ಘಟನೆಗಳಿಂದ ಕೆಲವೊಂದು ಕ್ಷೇತ್ರಗಳು ನಿರ್ಮಾಣವಾಗುವುದನ್ನು ಕೇಳಬಹುದು – ನೋಡಬಹುದು.
ಈ ಮೇಲಿನ ವಿವರಣೆಗಳಿಂದ ಶಿವ ಮನುಷ್ಯನ ಬದುಕಿಗೆ ಸಮೀಪದ ದೇವರಾಗಿ ಒಮ್ಮೆ ನಮ್ಮೊಂದಿಗೆ ನಮ್ಮವನಾಗಿ ನಮ್ಮಂತೆಯೇ ನಮ್ಮ ಕಷ್ಟಸುಖ ವಿಚಾರಿಸುವ; ಮತ್ತೊಮ್ಮೆ ದೇವತ್ವದ ತುತ್ತತುದಿಗೇರುತ್ತಾ ಮಹನೀಯನಾಗುವ ಆ ಮೂಲಕ ಭವ ಬಂಧನದಿಂದ ಮುಕ್ತಿಕೊಡುವ ಮಹಾದೇವನಾಗಿ ಅನಾವರಣಗೊಳ್ಳುತ್ತಾನೆ .
ಈ ದೇಶದಲ್ಲಿ ಶಿವನು ಆದಿಮದಿಂದ ವೈದಿಕ ಸಂಸ್ಕೃತಿಯ ವರೆಗೆ ವಿವಿಧ ರೂಪಗಳಿಂದ , ಅನುಸಂಧಾನ ವಿಧಾನ ಗಳಿಂದ , ಸ್ವೀರಿಸಲ್ಪಟ್ಟ ದೇವರು.ತುಳುನಾಡಿನಲ್ಲಂತೂ ಬಹುಪುರಾತನದಿಂದ ಪೂಜೆಗೊಂಡ ದೇವರು.
|ವಿರಕ್ತಿ – ಅನುರಕ್ತಿ|
ಸದಾ ಧ್ಯಾನಾಸಕ್ತನಾಗಿರುವ ಶಿವನು ಎಷ್ಟು ವಿರಕ್ತನೋ ಅಷ್ಟೇ ಅನುರಕ್ತನು. ಸರ್ವಸಂಗ
ಪರಿತ್ಯಾಗದಂತಹ ನಿವೃತ್ತಿಯು ಎಷ್ಟು ಗಾಢವಾಗಿದೆಯೋ ಅಷ್ಟೆ ತೀವ್ರವಾದ ಪ್ರವೃತ್ತಿಯು ಶಂಕರನಲ್ಲಿ ಕಾಣಬಹುದು .
ಗೊಂದಲಗಳ ಗೂಡಾಗಿ ಕಾಣುವ , ವಿರೋಧಾಭಾಸಗಳ ಕೇಂದ್ರವೇ ಆಗಿರುವ ಶಿವ – ಶಿವ ಪರಿವಾರ ಸ್ವತಃ ದೇವ ದೇವನೇ ಮಾನವಕೋಟಿಗೆ ಒಂದು ಆದರ್ಶದ ಸಂದೇಶವನ್ನು ನೀಡುವಂತಿದೆ .ಕಾಮನನ್ನು ದಹಿಸಿ ಕಾಮಿನಿಯನ್ನು ವರಿಸುವ ಶಿವ ನಮಗೆ ಹತ್ತಿರದವನೇ ಆಗುತ್ತಾನೆ. ಮನುಕುಲ ಸಹಜವಾಗಿ ಸಾಧಿಸಬೇಕಾದುದನ್ನು ಬೋಧಿಸುವಂತಿದೆ ಭಗವಾನ್ ಭರ್ಗನ ಪರಿಕಲ್ಪನೆ, ಅನುಸಂಧಾನ ,ಸ್ತುತಿ ಇತ್ಯಾದಿ.
|ಶಿವರಾತ್ರಿ| ಸ್ವಯಂಭುವಾಗಿ ಲಿಂಗರೂಪದಲ್ಲಿ ಉದ್ಭವಿಸಿದ ದಿನ. ಹಾಲಾಹಲ ವಿಷ ಪ್ರಾಶನ ಮಾಡಿದ ಸುಂದರ್ಭ , ತಾಂಡವವಾಡಿದ ಸುದಿನವೇ ಶಿವರಾತ್ರಿ ಪರ್ವಕಾಲ ; ಹೀಗೆ ಹಲವು ನಿರೂಪಣೆಗಳಿವೆ .
ರುದ್ರ – ಪರ್ಜನ್ಯ
ವೇದವು ವಿದ್ಯೆಗಳಲ್ಲಿ ಶ್ರೇಷ್ಠ ವಾದುದು . ವೇದದಲ್ಲಿ ಹನ್ನೊಂದು ಅನುವಾಕಗಳಿರುವ ‘ರುದ್ರನಮಕ’ವು ಉತ್ಕ್ರಷ್ಟವಾದುದು ಅದರಲ್ಲಿರುವ ಮಂತ್ರಗಳಲ್ಲಿ ‘ನಮಃ ಶಿವಾಯ ಶಿವ ತರಾಯಚ’ ಎಂಬ ವಾಕ್ಯವಿದೆ . ಇದರಿಂದ ಆಯ್ದ ಮಂತ್ರ ಪಂಚಾಕ್ಷರೀ. ಆದುದರಿಂದ ಪಂಚಾಕ್ಷರೀ ವೇದೋಕ್ತ ಮಂತ್ರ ಎಂಬುದು ವಿದ್ವಾಂಸರ ಅಭಿಪ್ರಾಯ .ಶಿವ ಶಬ್ದವು ಶುಭ ಕಲ್ಯಾಣ ,ಮಂಗಳ ಮುಂತಾದ ಅರ್ಥಗಳನ್ನು ಧ್ವನಿಸುತ್ತದೆ .’ಅಚ್’ ಪ್ರತ್ಯಯವು ಸೇರಿ ಕಲ್ಯಾಣ ಗುಣಗಳುಳ್ಳವ ಎಂಬ ಅರ್ಥದಲ್ಲಿ ನಿಷ್ಪನ್ನವಾಗುತ್ತದೆ .
ಅನ್ನಾದ್ಭವಂತಿ ಭೂತಾನಿ ಪರ್ಜನ್ಯಾದನ್ನ ಸಂಭವಃ |
ಯಜ್ಞಾದ್ ಭವತಿ ಪರ್ಜನ್ಯೋ ಯಜ್ಞಃ ಕರ್ಮ
ಸಮುದ್ಭವಃ||
ಅನ್ನ – ಜೀವರಾಶಿ ,ಅನ್ನ- ಮಳೆ , ಮಳೆ – ಯಜ್ಞ ಈ ಸಂಬಂಧವನ್ನು ವಿವರಿಸುವ ಈ ಶ್ಲೋಕವು ಯಜ್ಞದ ಪರಮ ಲಕ್ಷ್ಯವನ್ನು ಹೇಳುತ್ತದೆ . ಸಕಾಲಿಕ ಮಳೆಗೆ ಯಜ್ಞ ಕರ್ಮವೇ ಪೂರಕ ವೈದಿಕ ಪ್ರಕ್ರಿಯೆ ಎಂದು ದೃಢೀಕರಿಸುತ್ತದೆ .
ಶಿವ ,ಸದಾಶಿವ , ಪರಶಿವ , ಇವು ಪರಮಾತ್ಮನ ಮನೋಜ್ಞ ಹೆಸರುಗಳು .ಇವನು ರುದ್ರನೂ ಹೌದು .ಮಳೆ ಸುರಿಸಿ ನೀರುಕೊಡುವವನು ಅಧಿಕ ಶಬ್ದ ಮಾಡುತ್ತಾ ನೀರನ್ನು ಕೊಡುವವನು ಎಂಬುದು ‘ರುದ್ರ’ ಶಬ್ದಕ್ಕೆ ಯಾಸ್ಕಾಚಾರ್ಯರು ನೀಡುವ ಅರ್ಥ .
ಮಳೆ ಸುರಿಸುವ ಶಿವ ,ಮಳೆಗೆ ಪೂರಕವಾದ ಯಜ್ಞ ಕರ್ಮ : ಈ ಎರಡು ಸಿದ್ಧಾಂತಗಳಿಂದ ರುದ್ರ ದೇವರನ್ನು ಅಗ್ನಿ ಮುಖದಿಂದ ಆರಾಧಿಸಿದರೆ ಮಳೆಯಾಗುತ್ತದೆ .ಮಳೆಯಿಂದ ಬೆಳೆ ,ಬೆಳೆಯಿಂದ ಸಮೃದ್ಧಿ ತಾನೆ? ಲೋಕ ಸುಭಿಕ್ಷಗೆ ರುದ್ರದೇವರನ್ನು ಆರಾಧಿಸುವುದು ,ಆಮೂಲಕ ಕ್ಷೋಭೆಗಳಿಲ್ಲದ ,
ನಿರ್ಭಯದಿಂದ ಬದುಕುವ ಪರಿಸರ ನಿರ್ಮಾಣದ ನಿರೀಕ್ಷೆ ಋಜುಮಾರ್ಗದ ಸಂಕಲ್ಪವಲ್ಲವೆ . ಮಂಗಳಕರ ಮಹಾದೇವನನ್ನು ಶಿವರಾತ್ರಿ ಪರ್ವದಿನದಂದು ಸ್ಮರಿಸುತ್ತಾ ಬಿಲ್ವ ದಳವನ್ನು ಅರ್ಪಿಸುತ್ತಾ ಲೋಕಶಾಂತಿಯನ್ನು ಹಾರೈಸೋಣ .