ಪ್ರತಿಪಕ್ಷಗಳ ಗದ್ದಲದ ನಡುವೆಯೇ ರಾಜ್ಯದಲ್ಲಿ ಗೋಹತ್ಯೆ ನಿಷೇಧ ವಿಧೇಯಕ ಪಾಸ್​

ಬೆಂಗಳೂರು: ರಾಜ್ಯ ವಿಧಾನಸಭೆಯಲ್ಲಿ ಪ್ರತಿಪಕ್ಷಗಳ ಗದ್ದಲ, ಧರಣಿ, ಸಭಾತ್ಯಾಗದ ನಡುವೆಯೇ ರಾಜ್ಯದಲ್ಲಿ ಗೋಹತ್ಯೆ ನಿಷೇಧಕ್ಕೆ ಕಠಿಣ ನಿಯಮಗಳನ್ನು ಒಳಗೊಂಡ ಕರ್ನಾಟಕ ಜಾನುವಾರು ವಧೆ, ಪ್ರತಿಬಂಧಕ ಮತ್ತು ಸಂರಕ್ಷಣಾ ವಿಧೇಯಕಕ್ಕೆ ಅನುಮೋದನೆ ಪಡೆದು ಕೊಳ್ಳುವಲ್ಲಿ ಸರ್ಕಾರ ಬುಧವಾರ ಯಶಸ್ಸು ಸಾಧಿಸಿದೆ.

ಈ ಮುಖೇನ ಉತ್ತರ ಪ್ರದೇಶ ಸರ್ಕಾರದ ನಂತರ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಗೆ ತರುತ್ತಿರುವ ಎರಡನೇ ರಾಜ್ಯ ಎಂಬ ಹೆಗ್ಗಳಿಕೆಗೆ ಕರ್ನಾಟಕ ಪಾತ್ರವಾಗಲು ಮುಂದಾಗಿದೆ.

ಗೋ ಹತ್ಯೆ ಮಾಡಿದರೆ 7 ವರ್ಷಗಳವರೆಗೆ ಜೈಲುವಾಸ, ಮೊದಲ ಬಾರಿ ಜಾನುವಾರು ಹತ್ಯೆಗೆ 50 ಸಾವಿರದಿಂದ 5 ಲಕ್ಷ ರೂ.ವರೆಗೆ ದಂಡ ವಿಧಿಸುವ ಅಂಶಗಳು ಈ ಕಾಯ್ದೆಯಲ್ಲಿವೆ. ವಿಧಾನ ಪರಿಷತ್‌ನಲ್ಲೂ ವಿಧೇಯಕ ಅನುಮೋದನೆ ಪಡೆದುಕೊಂಡ ಬಳಿಕ ರಾಜ್ಯಪಾಲರ ಸಹಿಗೆ ಕಳಿಸಲಾಗುತ್ತದೆ. ಬಳಿಕ ನಿಯಮ ರಚಿಸಿ ಕಾಯ್ದೆ ಜಾರಿಗೆ ಬರಲಿದೆ.

ಇನ್ನು ವಿಧಾನಸಭೆಯಲ್ಲಿ ಬುಧವಾರ ವಿಧೇಯಕ ಮಂಡನೆ ಪ್ರಕ್ರಿಯೆ ತಟ್ಟನೆ ನಡೆಯಿತು. ಪಶು ಸಂಗೋಪನೆ ಸಚಿವ ಪ್ರಭು ಚೌವ್ಹಾಣ್ , ವಿಧೇಯಕ ಮಂಡನೆಗೆ ಮುಂದಾಗುತ್ತಿದ್ದಂತೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಪ್ರತಿಪಕ್ಷಗಳ ಅನೇಕ ಸದಸ್ಯರು ಆಕ್ಷೇಪಿಸಿದರು. ಸ್ಪೀಕರ್ ಪೀಠದ ಮುಂದೆ ಧಾವಿಸಿ ಗದ್ದಲ, ಗಲಾಟೆ ನಡೆಸಿದರು. ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರು ಪರ ವಿರೋಧ ಘೋಷಣೆ ಕೂಗಿದರು.

ಈ ಬಿಲ್ ಮಂಡನೆಯಾಗುತ್ತಿದ್ದಂತೆಯೇ ಜೆಡಿಎಸ್‌ನ ಎಚ್.ಕೆ. ಕುಮಾರಸ್ವಾಮಿ, ಈ ವಿಧೇಯಕ ಮಂಡನೆಯ ವಿಷಯ ಕಲಾಪ ಸಲಹಾ ಸಮಿತಿ ಸಭೆಯಲ್ಲಿ ನಿರ್ಧಾರವಾಗಿಲ್ಲ ಹಾಗಾಗಿ ಮಂಡನೆಗೆ ಅವಕಾಶ ನೀಡಬೇಡಿ ಎಂದು ಸ್ಪೀಕರ್‌ಗೆ ಮನವಿ ಮಾಡಿದರು. ಇದಕ್ಕೆ ಸಾಥ್ ನೀಡಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕೂಡ ಸ್ಪೀಕರ್ ನಡೆಯನ್ನು ಖಂಡಿಸಿದ್ದು, ಇದಕ್ಕೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಪ್ರಮುಖ ವಿಧೇಯಕ ಮಂಡಿಸುವ ಬಗ್ಗೆ ನಿರ್ಧರಿಸಲಾಗಿತ್ತು. ಆ ಪ್ರಕಾರ ಅವಕಾಶ ನೀಡಲಾಗಿದೆ ಎಂದು ಸಮರ್ಥಿಸಿಕೊಂಡು, ಹಾಗೆ ಮಂಡನೆಗೆ ಒಪ್ಪಿಗೆ ಸೂಚಿಸಿದರು.

ಬಿಜೆಪಿ ಸದಸ್ಯರು ಕೇಸರಿ ಶಾಲು ಹೊದ್ದು ಸಂಭ್ರಮಿಸಿದರಲ್ಲದೆ, ವಿಧಾನಸಭೆ ಹೊರ ಆವರಣದಲ್ಲಿ ಗೋವು ತಂದು ಪೂಜೆ ಸಲ್ಲಿಸಿದರು.

ಈ ನಡುವೆ ನಮಗೆ ಈ ವಿಧೇಯಕದ ಅಗತ್ಯವಿದೆ, ತಾಕತ್ತಿದ್ದರೆ ಚರ್ಚೆ ಮಾಡಿ ಎಂದು ಬಿಜೆಪಿಯ ಸುನೀಲ್ ಕುಮಾರ್ ಪ್ರತಿಪಕ್ಷಗಳಿಗೆ ಸವಾಲೆಸೆದರೆ, ಕಾಂಗ್ರೆಸ್‌ನವರು ದನ ಕಡಿಯುವವರ ಪರ ಎಂದು ಸಿ.ಟಿ.ರವಿ ಘೋಷಣೆ ಹಾಕಿದರು. ಪ್ರತಿಯಾಗಿ, ವಿಧಾನಸಭೆಯನ್ನು ಬಿಜೆಪಿ ಕಚೇರಿ ಮಾಡಬೇಡಿ ಎಂದು ಕಾಂಗ್ರೆಸ್‌ನ ಎಚ್.ಕೆ.ಪಾಟೀಲ್ ಕಿಡಿಕಾರಿದರು. ಈ ನಡುವೆ ಸರ್ಕಾರ ಹಠಕ್ಕೆ ಬಿದ್ದು ವಿಧೇಯಕ ಮಂಡನೆ, ಚರ್ಚೆ, ಅನುಮೋದನೆ ಪ್ರಕ್ರಿಯೆ ಮುಗಿಸಿತು.

ಇನ್ನು ವಿಧೇಯಕ ಮಂಡನೆಗೂ ಮುನ್ನ ಮತ್ತು ಬಳಿಕ ಬಿಜೆಪಿ ನಾಯಕರು ವಿಧಾನಸೌಧ ಆವರಣದಲ್ಲಿ ಗೋ ಪೂಜೆ ನೆರವೇರಿಸಿದರು. ಗೋವುಗಳನ್ನು ವಿಧಾನಸೌಧಕ್ಕೆ ತರಿಸಿಕೊಂಡಿದ್ದ ಪಕ್ಷದ ನಾಯಕರು, ವಿಶೇಷ ಪೂಜೆ ನೆರವೇರಿಸಿ ಘೋಷಣೆ ಕೂಗಿ ಸಂಭ್ರಮ ವ್ಯಕ್ತಪಡಿಸಿದರು. ಜತೆಗೆ ಕೇಸರಿ ಶಾಲು ಹಾಕಿಕೊಂಡು ಸಂಭ್ರಮಿಸಿ ಕಲಾಪದಲ್ಲಿ ಪಾಲ್ಗೊಂಡರು.

 
 
 
 
 
 
 
 
 
 
 

Leave a Reply