ಹಿರಿಯ ತಪಸ್ವಿ ಅರ್ಚಕ ವೆಂಕಟನರಸಿಂಹ ಉಪಾಧ್ಯಾಯರು ಸ್ವರ್ಗಸ್ಥ

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಹಿರಿಯ ತಪಸ್ವಿ ಅರ್ಚಕರೋರ್ವರಾದ ವೆಂಕಟನರಸಿಂಹ ಉಪಾಧ್ಯಾಯರು ಇಂದು (05.07.2022) ಸ್ವರ್ಗಸ್ಥರಾದರು.ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಾಲಯದಲ್ಲಿ ಅಖಂಡ ಐವತ್ತು ವರ್ಷ ಆಗಮಶಾಸ್ತ್ರಕ್ಕೆ ಅನುಗುಣವಾಗಿ ತಾಯಿಯನ್ನು ಆರಾಧಿಸಿ ಧನ್ಯರಾದರು. ಅದೆಂತಹ ನಿಷ್ಠೆ, ಪ್ರಾಮಾಣಿಕತೆ,ತಾಳ್ಮೆಯ ಪರಮಾವಧಿ, ಸಜ್ಜನಿಕೆ…ಹೀಗೆ ಅನೇಕ ಶ್ರೀಮಂತ ಗುಣಗಳಿಂದ ,ಭಕ್ತಿಯ ಪರಾಕಾಷ್ಠೆ ಯಿಂದ ಲಕ್ಷ್ಮಿಯನ್ನು ಒಲಿಸಿಕೊಂಡ ಧೀಮಂತ ಅರ್ಚಕರು. ಮೊಗವೀರ ಸಮಾಜದ ಕುಲದೇವತೆಯಾದ ಮಹಾಲಕ್ಷ್ಮಿಗೆ ಇಂತಹ ಸಾಧಕ ಅರ್ಚಕರು ಲಭಿಸಿರುವುದು ಮಹಾಪುಣ್ಯದ ಫಲವಾಗಿದೆ. ಮೊಗವೀರರೆಲ್ಲರೂ ಇವರ ಪೂಜಾವೈಖರಿಯನ್ನು,ಆಶೀರ್ವಾದದ ನುಡಿಗಳಿಂದ ಹರಸಿದ ಕ್ಷಣಗಳನ್ನು ಮರೆಯಲು ಸಾಧ್ಯವಿಲ್ಲ. ಅರ್ಧ ಶತಮಾನ ನಿರಂತರ ಇವರ ಪೂಜೆಯಿಂದ ಸಂತುಷ್ಟಗೊಂಡ ಮಹಾಲಕ್ಷ್ಮಿ ಯು ಮೊಗವೀರ ಸಮಾಜವನ್ನು ಸಮೃದ್ದಿಗೊಳಿಸಿ…ಉಚ್ಚಿಲ ಕ್ಷೇತ್ರ ದಲ್ಲಿ ಅಭೂತಪೂರ್ವವಾಗಿ ನಿರ್ಮಾಣಗೊಂಡ ದೇವಾಲಯದಲ್ಲಿ ಪುನರ್ ಪ್ರತಿಷ್ಠೆಯಾಗಿರುವುದು ಈಗ ಇತಿಹಾಸ . ಅರ್ಚಕರ ತಪಸ್ಸಿಗೆ ಗ್ರಾಮ,ಸಮಾಜ, ಸಮುದಾಯ, ದೇವಸ್ಥಾನ ಅಸದೃಶವಾಗಿ ಪುನರುತ್ಥಾನವಾಗಿದೆ. “ಅರ್ಚಕಸ್ಯ ಪ್ರಭಾವೇಣ ಶಿಲಾ ಭವತಿ ಶಂಕರ: ” ಎಂಬ ಮಾತಿಗೆ ಪ್ರಥಮ ಸಾಕ್ಷಿಯಾಗಿ ಇದ್ದ ಮಹಾತ್ಮರು. ತಮ್ಮಗಂಭಿರ , ಉದಾತ್ತ ಜೀವನಕ್ರಮದಿಂದ ಪಾರಮಾರ್ಥಿಕ ಮೌಲ್ಯಗಳನ್ನು ಭೋದಿಸಿ ಹಾಗೂ ಧರ್ಮಕರ್ಮಗಳನ್ನು ಅನನ್ಯ ಶ್ರದ್ಧೆಯಿಂದ ಮಾಡಿ, ಆಸ್ತಿಕರಲ್ಲಿ ಮಾಡಿಸಿ, ಸರ್ವರಿಗೂ ಮಾರ್ಗದರ್ಶಕರಾದ ತಮ್ಮ ಅಗಲಿಕೆ ಶಿಷ್ಯವರ್ಗಕ್ಕೆ ತುಂಬಲಾರದ ನಷ್ಟವಾಗಿದೆ.ಅಗಲಿದ ದಿವ್ಯಾತ್ಮಕ್ಕೆ ಶ್ರದ್ಧಾಂಜಲಿಯನ್ನು ಅರ್ಪಿಸುತ್ತಿದ್ದೇವೆ.
ತತ್ವಜ್ಞಾನ್ ಮುಕ್ತಿಭಾಜಃ ಸುಖಯಸಿ ಹಿ ಗುರೋ.

 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 

Leave a Reply