ಉಡುಪಿ​ ​ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ

ಉಡುಪಿ ಜಿಲ್ಲೆ 25 ವರ್ಷ ಪೂರೈಸಿದ ಹಿನ್ನೆಲೆ ಆಗಸ್ಟ್ 25 ರಂದು ರಜತ ಮಹೋತ್ಸವ ಕಾರ್ಯಕ್ರಮಕ್ಕೆ ರಾಜ್ಯದ ಗೌರವಾನ್ವಿತ ರಾಜ್ಯಪಾಲರ ಆಗಮನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ನಗರದಲ್ಲಿ ಸಾರ್ವಜನಿಕರ ಸುಗಮ ಸಂಚಾರದ ವ್ಯವಸ್ಥೆಯಲ್ಲಿ ಈ ಕೆಳಕಂಡಂತೆ ಬದಲಾವಣೆ ಮಾಡಲಾಗಿದೆ.

ಅಜ್ಜರಕಾಡು ಮೈದಾನದ ಮುಂಭಾಗಕ್ಕೆ ಜಿಲ್ಲಾಡಳಿತದಿಂದ ನೀಡಲಾದ ಪಾಸ್ ಇರುವ ವಿಐಪಿ ವಾಹನಗಳಿಗೆ ಪುರಭವನದ ಪಕ್ಕದ ರಸ್ತೆಯಲ್ಲಿ, ಕಾರ್ಯಕ್ರಮಕ್ಕೆ ಆಗಮಿಸುವ ಕುಂದಾಪುರ, ಮಲ್ಪೆ, ಕಾಪು ಹಾಗೂ ಪಡುಬಿದ್ರೆ ಕಡೆಯಿಂದ ಆಗಮಿಸುವ ಸಾರ್ವಜನಿಕರ ವಾಹನಗಳಿಗೆ ಸೈಂಟ್ ಸಿಸಿಲಿ ಶಾಲೆಯ ಮೈದಾನದಲ್ಲಿ, ಅಲೆವೂರು, ಮೂಡುಬೆಳ್ಳೆ, ಮಣಿಪಾಲ ಹಾಗೂ ಕಾರ್ಕಳ ಕಡೆಯಿಂದ ಬರುವ ವಾಹನಗಳಿಗೆ ಮಿಷನ್ ಕಂಪೌಂಡ್ ಬಳಿಯ ಕ್ರಿಶ್ಚಿಯನ್ ಶಾಲಾ ಮೈದಾನ ಹಾಗೂ ಕ್ರಿಶ್ಚಿಯನ್ ಪಿ.ಯು ಕಾಲೇಜಿನ ಮೈದಾನದಲ್ಲಿ ಪಾರ್ಕಿಂಗ್‌ಗೆ ವ್ಯವಸ್ಥೆ ಮಾಡಲಾಗಿದೆ.

ಬೋರ್ಡ್ ಹೈಸ್ಕೂಲ್‌ನಿಂದ ಹುತಾತ್ಮರ ಸ್ಮಾರಕದವರೆಗೆ ಶಾಲಾ ಮಕ್ಕಳ ಮೆರವಣಿಗೆ ನಡೆಯಲಿರುವ ಹಿನ್ನೆಲೆ, ಮೆರವಣಿಗೆ ಪ್ರಾರಂಭವಾಗಿ ಮುಕ್ತಾಯವಾಗುವರೆಗೆ ಸದ್ರಿ ಮಾರ್ಗದಲ್ಲಿ ಬಸ್ ಮಾರ್ಗವನ್ನು ಬದಲಾವಣೆ ಮಾಡಲಾಗಿದೆ. ಜಿಲ್ಲೆಯ ಗ್ರಾಮ ಪಂಚಾಯತ್‌ಗಳಿಂದ ಬರುವಂತಹ ವಾಹನಗಳು ಸದಸ್ಯರನ್ನು ಪುರಭವನ ಹಾಗೂ ಜೋಡುಕಟ್ಟೆ ಬಳಿ ಇಳಿಸಿ, ತಮ್ಮ ವಾಹನಗಳನ್ನು ಜೋಡುಕಟ್ಟೆಯಿಂದ ಕಿನ್ನಿಮೂಲ್ಕಿಯವರೆಗೆ ರಸ್ತೆಯ ಎಡ ಹಾಗೂ ಬಲ ಭಾಗದಲ್ಲಿ ಪಾರ್ಕಿಂಗ್ ಮಾಡಬೇಕು.
ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಆಗಮಿಸುವ ಸಾರ್ವಜನಿಕರಿಗೆ ಸೈಂಟ್ ಸಿಸಿಲಿ ಹಾಗೂ ಮಿಷನ್ ಕಂಪೌಂಡ್ ಬಳಿ ಇರುವ ಕ್ರಿಶ್ಚಿಯನ್ ಹೈಸ್ಕೂಲ್ ಮೈದಾನದಲ್ಲಿ ಪಾರ್ಕಿಂಗ್ ವ್ಯವಸ್ಥೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿ ಪ್ರಕಟಣೆ ತಿಳಿಸಿದೆ.
 
 
 
 
 
 
 
 
 
 
 

Leave a Reply