ಆರೋಗ್ಯ ಸೇವೆಗಳಿಗೆ ಸಂಬಂಧಿಸಿದ ಕೆಲಸಗಳನ್ನು ನಿರ್ವಹಿಸಲು ನಿರಾಕರಿಸುವಂತಿಲ್ಲ

ಬೆಂಗಳೂರು: ಕೊರೋನಾದ ಸಂದರ್ಭದಲ್ಲಿ ಸಾರ್ವಜನಿಕ ವಲಯದ ಅಧಿಕಾರಿ, ಸಿಬ್ಬಂದಿ, ಆರೋಗ್ಯ ಸಿಬ್ಬಂದಿ, ಖಾಯಂ, ಗುತ್ತಿಗೆ ಹಾಗೂ ಹೊರಗುತ್ತಿಗೆ ಆಧಾರದಲ್ಲಿ ಆರೋಗ್ಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಯಾವುದೇ ನೌಕರರು ಜನರ ಸ್ವಾಸ್ಥ್ಯದ ಹಿತದೃಷ್ಠಿಯಿಂದ ಮುಷ್ಕರ, ಧರಣಿ ಅಥವಾ ಆರೋಗ್ಯ ಸೇವೆಗಳಿಗೆ ಸಂಬಂಧಿಸಿದ ಕೆಲಸಗಳನ್ನು ನಿರ್ವಹಿಸಲು ನಿರಾಕರಿಸುವಂತಿಲ್ಲ. ಮೇಲಾಧಿಕಾರಿಗಳ ಆದೇಶಗಳನ್ನು ಪಾಲಿಸದಿರುವುದನ್ನು ನಿಷೇಧಿಸಲಾಗಿದೆ ಎಂಬುದಾಗಿ ರಾಜ್ಯ ಸರ್ಕಾರ ಆದೇಶಿಸಿದೆ.

ಈ ಬಗ್ಗೆ ಆದೇಶ ಹೊರಡಿಸಿರುವ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿಎಂ ವಿಜಯ್ ಭಾಸ್ಕರ್, ಸಾಮಾನ್ಯವಾಗಿ ಎಲ್ಲಾ ಸಾರ್ವಜನಿಕ ವಲಯದ ಅಧಿಕಾರಿ, ಸಿಬ್ಬಂದಿ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಗಳು, ಖಾಯಂ, ಗುತ್ತಿಗೆ ಆಧಾರದ ಸಿಬ್ಬಂದಿ, ಹೊರಗುತ್ತಿಗೆ ಆಧಾರದ ಸಿಬ್ಬಂದಿ ಅಥವಾ ಸಾಮಾಜಿಕ ಆರೋಗ್ಯ ಕಾರ್ಯಕರ್ತರುಗಳಿಗೆ ರಾಜ್ಯದಲ್ಲಿ ಕೋವಿಡ್-19 ಸೋಂಕಿನ ಹರಡುವಿಕೆಯನ್ನು ತಡೆಗಟ್ಟುವ, ನಿರ್ಬಂಧಿಸುವ ಪ್ರಾಥಮಿಕ ಗುರಿಯನ್ನು ಸಾಧಿಸುವ ಜವಾಬ್ದಾರಿಯನ್ನು ನೀಡಲಾಗಿದೆ.

ಆದ್ದರಿಂದ ಭಾಗ 20ರಲ್ಲಿ ನೀಡಲಾದ ಅಧಿಕಾರಗಳ ಅನ್ವಯ ಹಾಗೂ ವಿಪತ್ತು ನಿರ್ವಹಣಾ ಕಾಯ್ದೆ, 2005 (2005ರ ಕೇಂದ್ರೀಯ ಕಾಯ್ದೆ ಸಂಖ್ಯೆ 53)ರ ನಿಬಂಧನೆಗಳ ಅಹ್ವಾನದಂತೆ ಕರ್ನಾಟಕ ಸಾಂಕ್ರಾಮಿಕ ರೋಗಗಳ ಸುಗ್ರೀವಾಜ್ಞೆ 2020( 2020ರ ಕರ್ನಾಟಕ ಸುಗ್ರೀವಾಜ್ಞೆ ಸಂಖ್ಯೆ 7)ರ ಓದಲಾದ ಭಾಗ 4, 5 ಹಾಗೂ 8ರ ಅನ್ವಯ, ರಾಜ್ಯ ಕಾರ್ಯನಿರ್ವಾಹಕ ಸಮಿತಿಯ ಅಧ್ಯಕ್ಷರಾಗಿರುವ ನಾನು, ತಮ್ಮ ಸಾಮರ್ಥ್ಯದಲ್ಲಿ ಯಾವುದೇ ನೌಕರರು ಸಾರ್ವಜನಿಕ ವಲಯದ ಅಧಿಕಾರಿ, ಸಿಬ್ಬಿಂದಿ, ಆರೋಗ್ಯ ಸಿಬ್ಬಂದಿ, ಖಾಯಂ, ಗುತ್ತಿಗೆ ಹಾಗೂ ಹೊರಗುತ್ತಿಗೆ ಆಧಾರದಲ್ಲಿ ಆರೋಗ್ಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವವರು, ಸಾರ್ವಜನಿಕ ಆರೋಗ್ಯದ ಹಿತದೃಷ್ಠಿಯಿಂದ ಈ ಮೂಲಕ ಮುಷ್ಕರಗಳು, ಅಸಹಕಾರ, ಅವಿಧೇಯತೆ ಅಥವಾ ಆರೋಗ್ಯ ಸೇವೆಗಳಿಗೆ ಸಂಬಂಧಿಸಿದಂತ ಕೆಲಸಗಳನ್ನು ನಿರ್ವಹಿಸಲು ನಿರಾಕರಿಸುವಂತಿಲ್ಲ.

ವರದಿಗಳನ್ನು ಸಲ್ಲಿಸದಿರುವುದು, ಮೇಲಾಧಿಕಾರಿಗಳ ಆದೇಶಗಳನ್ನು ಅನುಪಾಲನೆ ಮಾಡದಿರುವುದನ್ನು ನಿಷೇಧಿಸಲಾಗಿದೆ ಎಂಬುದಾಗಿ ರಾಜ್ಯ ಸರ್ಕಾರ ಆದೇಶಿಸಿದೆ.

 
 
 
 
 
 
 
 
 
 
 

Leave a Reply