ಶಾಸಕರ ಪ್ರದೇಶಾಭಿವೃಧ್ದಿ ಯೋಜನೆ ಯಡಿಯಲ್ಲಿ ನೀಡಲಾಗುವ ಅನುದಾನವನ್ನು ನಿಗಧಿತ ಅವಧಿಯೊಳಗೆ ವೆಚ್ಚ ಮಾಡದೇ ಇದ್ದಲ್ಲಿ , ಆರ್ಥಿಕ ಇಲಾಖೆಯಿಂದ ಹೊಸ ಅನುದಾನ ಪಡೆಯಲು ಸಾಧ್ಯವಾಗುವುದಿಲ್ಲ~ಸಚಿವ ಡಾ. ನಾರಾಯಣ ಗೌಡ

ಉಡುಪಿ: ಜಿಲ್ಲೆಯಲ್ಲಿ ಶಾಸಕರ ಪ್ರದೇಶಾಭಿವೃಧ್ದಿ ಯೋಜನೆಯಡಿಯಲ್ಲಿ ನೀಡಲಾಗುವ ಅನುದಾನವನ್ನು ಸಂಪೂರ್ಣವಾಗಿ ವೆಚ್ಚ ಮಾಡಿ, ನಿಗಧಿತ ಅವಧಿಯೊಳಗೆ ಅಗತ್ಯ ಕಾಮಗಾರಿಗಳನ್ನು ಮುಕ್ತಾಯಗೊಳಿಸಿ ಎಂದು ಯುವ ಸಬಲೀಕರಣ ಮತ್ತು ಕ್ರೀಡೆ ಹಾಗೂ ಯೋಜನೆ ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಸಚಿವ ಡಾ. ನಾರಾಯಣ ಗೌಡ ತಿಳಿಸಿದರು.
ಅವರು ಶುಕ್ರವಾರ ಜಿಲ್ಲಾದಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶಾಸಕರ ಪ್ರದೇಶಾಭಿವೃಧ್ದಿ ಯೋಜನೆ ಯಡಿಯಲ್ಲಿ ನೀಡಲಾಗುವ ಅನುದಾನವನ್ನು ನಿಗಧಿತ ಅವಧಿಯೊಳಗೆ ವೆಚ್ಚ ಮಾಡದೇ ಇದ್ದಲ್ಲಿ , ಆರ್ಥಿಕ ಇಲಾಖೆಯಿಂದ ಹೊಸ ಅನುದಾನ ಪಡೆಯಲು ಸಾಧ್ಯವಾಗುವುದಿಲ್ಲ ಆದ್ದರಿಂದ ಜಿಲ್ಲೆಯ ಎಲ್ಲಾ ಶಾಸಕರಿಂದ ಕ್ರಿಯಾ ಯೋಜನೆಯನ್ನು ಪಡೆದು, ಕಾಲಮಿತಿಯಲ್ಲಿ ಯೋಜನೆ ಮುಕ್ತಾಯ ಗೊಳಿಸಿ , ಅನುದಾನವನ್ನು ವೆಚ್ಚ ಮಾಡಿ , ಅನುದಾನವನ್ನು ಪಿಡಿ ಖಾತೆಯಲ್ಲಿ ಇಡಬೇಡಿ ಎಂದರು.
ರಾಜ್ಯದ ಹಲವು ಜಿಲ್ಲೆಗಳಲ್ಲಿ ಶಾಸಕರ ಪ್ರದೇಶಾಭಿವೃಧ್ದಿ ಯೋಜನೆಯ ಅನುದಾನವನ್ನು ಪೂರ್ಣ ಪ್ರಮಾಣದಲ್ಲಿ ಬಳಸದೇ ಇರುವುದರಿಂದ ಹೆಚ್ಚುವರಿ ಅನುದಾನ ಬಿಡುಗಡೆಗೆ ಅಡಚಣೆಯಾಗಿದ್ದು, ಉಡುಪಿ ಜಿಲ್ಲೆಯು ಅನುದಾನ ಬಳಕೆಯಲ್ಲಿ ರಾಜ್ಯದಲ್ಲಿ 2 ನೇ ಸ್ಥಾನದಲ್ಲಿದ್ದು, ಪ್ರಸ್ತುತ ಸಾಲಿನಲ್ಲಿ ಬಾಕಿ ಇರುವ ಕಾಮಗಾರಿಗಳನ್ನು ಸಂಬಂದಪಟ್ಟ ಇಲಾಖೆಗಳ ಮೂಲಕ ಶೀಘ್ರದಲ್ಲಿ ಮುಕ್ತಾಯ ಗೊಳಿಸುವ ಕುರಿತಂತೆ ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಜಿ.ಜಗದೀಶ್ ಅವರಿಗೆ ಸಚಿವರು ತಿಳಿಸಿದರು.
ಜಿಲ್ಲೆಯ ಕ್ರೀಡಾ ಇಲಾಖೆಯ ಪ್ರಗತಿ ಪರಿಶೀಲಿಸಿದ ಸಚಿವರು, ಉಡುಪಿಯಲ್ಲಿನ ಕ್ರೀಡಾ ಸೌಲಭ್ಯ ಗಳ ಬಗ್ಗೆ ಪರಿಶೀಲಿಸಿ ,ಇಡೀ ರಾಜ್ಯಕ್ಕೆ ಮಾದರಿ ಯಾಗುವಂತಹ ಸೌಲಭ್ಯಗಳು ಇಲ್ಲಿದ್ದು, ಇವುಗಳ ಸದ್ಬಳಕೆ ಮತ್ತು ಸಮರ್ಪಕ ನಿರ್ವಹಣೆ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ಜಿಲ್ಲೆಯಲ್ಲಿನ ಎಲ್ಲಾ ತಾಲೂಕು ಕ್ರೀಡಾಂಗಣಗಳ ಅಭಿವೃದ್ದಿ ಕುರಿತಂತೆ ಸಂಬಂದಪಟ್ಟ ಶಾಸಕರಿಂದ ಪ್ರಸ್ತಾವನೆ ಸಲ್ಲಿಸಿ, ಕುಂದಾಪುರದಲ್ಲಿ ತಾಲೂಕಿನಲ್ಲಿ ಸುಸಜ್ಜಿತ ಜಿಮ್ ಮತ್ತು ಈಜುಕೊಳ ಆರಂಭಿಸುವ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು,
ಉಡುಪಿ ಬ್ಯಾಡ್ಮಂಟನ್ ಕೋರ್ಟ್ ವಿಸ್ತರಣೆ ಹಾಗೂ ಕ್ರೀಡಾ ವಸತಿ ನಿಲಯದಲ್ಲಿ ಪದವಿ ವರೆಗೆ ಕ್ರೀಡಾಪಟುಗಳಿಗೆ ಅಗತ್ಯ ವ್ಯವಸ್ಥೆ ಕಲ್ಪಿಸಲಾಗುವುದು , ಕ್ರೀಡಾಂಗಣಗಳ ನಿರ್ಮಾಣ ಮತ್ತು ವಿಸ್ತರಣೆ ಸಂದರ್ಭದಲ್ಲಿ ಕ್ರೀಡಾಪಟುಗಳಿಗೆ ಸುಸಜ್ಜಿತ ಶೌಚಾಲಯ ಮತ್ತು ಸ್ನಾನಗೃಹ ನಿರ್ಮಾಣ ಆದ್ಯತೆ ನೀಡುವಂತೆ ಸೂಚಿಸಿದರು.

ಸಭೆಯಲ್ಲಿ ಶಾಸಕ ರಘುಪತಿ ಭಟ್, ಹಾಲಾಡಿ ಶ್ರೀನಿವಾಸ ಶೆಟ್ಟಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರ ದ ಅಧ್ಯಕ್ಷ ಮಟ್ಟಾರು ರತ್ನಾಕರ ಹಗ್ಡೆ, ಜಿ.ಪಂ. ಅಧ್ಯಕ್ಷ ದಿನಕರ ಬಾಬು, ಉಪಾಧ್ಯಕ್ಷೆ ಶೀಲಾ ಕೆ ಶೆಟ್ಟಿ, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಘವೇಂದ್ರ ಕಿಣಿ, ಯೋಜನಾ ಇಲಾಖೆ ನಿರ್ದೇಶಕ ಚಂದ್ರಶೇಖರ್, ಜಿಲ್ಲಾಧಿಕಾರಿ ಜಿ.ಜಗದೀಶ್, ಜಿ.ಪಂ. ಸಿಇಓ ಡಾ. ನವೀನ್ ಭಟ್, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ರೋಷನ್ ಕುಮಾರ್ ಶೆಟ್ಟಿ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply