ಶಿರ್ವ ಮಹಿಳಾ ಮಂಡಲದ ವಜ್ರಮಹೋತ್ಸವ ಸಮಾರೋಪ ಸಮಾರಂಭ

ಮಹಿಳೆಯರು ಪರಸ್ಪರ ಏಕ ಮನಸ್ಸಿನಿಂದ,ನಿರ್ಮಲ ಮನಸ್ಸಿನಿಂದ ಹಾಗೂ ಹೊಂದಾಣಿಕೆಯಿಂದ ಬೆರೆತು ಕೆಲಸ ಮಾಡಿದಲ್ಲಿ ಸಂಘಟನೆಗಳು ಎಲ್ಲಾ ರೀತಿಯಲ್ಲೂ ಅಭಿವೃದ್ಧಿಗೊಳ್ಳಲು ಸಾಧ್ಯವಿದೆ.ಎಂಬುದಾಗಿ ಒಡಿಯೂರು ಶ್ರೀ ಗುರುದೇವ ದತ್ತ ಸಂಸ್ಥಾನಂ ಇಲ್ಲಿನ ಸಾಧ್ವಿಯವರಾದ ಶ್ರೀ ಮಾತಾನಂದ ಮಯೀ ಅವರು ಅಭಿಪ್ರಾಯಪಟ್ಟರು.ಅವರು ಶಿರ್ವ ಮಹಿಳಾ ಮಂಡಲ (ರಿ) ಶಿರ್ವ ಇದರ ವಜ್ರಮಹೋತ್ಸವ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.ಇಂದು ಪ್ರೀತಿ ಎಂಬ ಎರಡಕ್ಷರದ ಪದದ ಕೊರತೆಯಿದೆ.ಸದಾ ಧಾವಂತದ ಬದುಕಿನಲ್ಲಿ ನಮಗೆ ಪರಸ್ಪರ ಪ್ರೀತಿಸುವುದಕ್ಕೂ ಸಮಯವಿರುವುದಿಲ್ಲ.ಪ್ರೀತಿ ಇದ್ದೆಡೆ ಸುಖ,ಸಂತಸ, ನೆಮ್ಮದಿ, ಸಂಪತ್ತು ಎಲ್ಲವೂ ಲಭ್ಯ.ಆದ್ದರಿಂದ ನಾವೆಲ್ಲರೂ ಪರಸ್ಪರ ದ್ವೇಷವನ್ನು ಬದಿಗಿರಿಸಿ ಪ್ರೀತಿಯನ್ನು ಹಂಚೋಣ “ಎಂದವರು ಕರೆಯಿತ್ತರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಮಾಜಿ ಸಚಿವ ಶ್ರೀ ವಿನಯಕುಮಾರ್ ಸೊರಕೆ ಅವರು ಮಾತನಾಡಿ ಶಿರ್ವ ಮಹಿಳಾ ಮಂಡಲದ ಸಾಮಾಜಿಕ ಕಳಕಳಿ ಹೊಂದಿರುವ ಕಾರ್ಯಕ್ರಮಗಳ ಕುರಿತು ಸಂತಸ ವಾಯಕ್ತಪಡಿಸಿದರು.ಉಡುಪಿ ಜಿಲ್ಲೆಯ ಮಹಿಳಾ ಮಂಡಲಗಳ ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ಸರಳಾ ಕಾಂಚನ್, ತಾಲೂಕು ಮಟ್ಟದ ಅಧ್ಯಕ್ಷೆ ಶೀಲಾ ಶೆಟ್ಟಿ, ಶಿರ್ವ ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀ ರತನ್ ಶೆಟ್ಟಿ, ಶಿರ್ವ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾದ ಶ್ರೀ ವಿಠ್ಠಲ ಆಂಚನ್, ಮಹಿಳಾ ಮಂಡಲದ ಗೌರವಾಧ್ಯಕ್ಷರಾದ ಶ್ರೀಮತಿ ಬಬಿತಾ ಜಗದೀಶ್ ಅರಸ ವೇದಿಕೆಯ ಮೇಲೆ ಉಪಸ್ಥಿತರಿದ್ದರು.ಸಭೆಯ ಅಧ್ಯಕ್ಷತೆಯನ್ನು ಮಹಿಳಾ ಮಂಡಲದ ಅಧ್ಯಕ್ಷೆ ಶ್ರೀಮತಿ ಗೀತಾ ವಾಗ್ಳೆ ಅವರು ವಹಿಸಿದ್ದರು.ಜನಪ್ರಿಯ ಹಾಸ್ಯ ಭಾಷಣಕಾರರಾದ ಶ್ರೀಮತಿ ಸಂಧ್ಯಾ ಶೆಣೈ ಉಡುಪಿ ಅವರು ದಿಕ್ಸೂಚಿ ಭಾಷಣವನ್ನು ಮಾಡಿದರು.ಆ ದಿನ ಬೆಳಿಗ್ಗೆ ಉಡುಪಿ ಜಿಲ್ಲಾ ಮಹಿಳಾ ಮಂಡಲಗಳ ಸದಸ್ಯೆಯರಿಗಾಗಿ ಆಯೋಜಿಸಿದ್ದ ಪ್ರತಿಭಾ ಸ್ಪರ್ಧೆ ಧೀಮಹೀ-2022 ಕ್ಕೆ ಎಲ್ಲೂರು ಶ್ರೀ ವಿಶ್ವೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ರಾದ ಶ್ರೀ ಜಗದೀಶ್ ಅರಸ ಅವರು ಜ್ಯೋತಿ ಬೆಳಗಿಸಿ ಚಾಲನೆ ನೀಡಿದರು.ಸುಮಾರು 12ತಂಡಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದವು ಕಾಪು ಮಹಿಳಾ ಮಂಡಲ ಪ್ರಥಮ ಸ್ಥಾನವನ್ನು ಪಡೆದರೆ, ದ್ವಿತೀಯ ಸ್ಥಾನವನ್ನು ಕೆಮ್ತೂರು ಸಾಧನಾ ಮಹಿಳಾ ಮಂಡಲದ ಸದಸ್ಯರು ಪಡೆದುಕೊಂಡರು.ತೃತೀಯ ಸ್ಥಾನವನ್ನು ದೊಡ್ಡಣ್ಣ ಗುಡ್ಡೆ ಮಹಿಳಾ ಮಂಡಲವು ಪಡೆದುಕೊಂಡಿತು.ವಿಜೇತರಾದ ಹಾಗೂ ಭಾಗವಹಿಸಿದ ಎಲ್ಲಾ ತಂಡಗಳಿಗೆ ಪ್ರಮಾಣ ಪತ್ರ,ಸ್ಮರಣಿಕೆ ಹಾಗೂ ನಗದು ರೂಪದ ಬಹುಮಾನಗಳನ್ನು ನೀಡಿ ಪ್ರೋತ್ಸಾಹಿಸಲಾಯಿತು.ಭಾಗವಹಿಸಿದ್ದ ಎಲ್ಲಾ ತಂಡಗಳ ಕಲಾಪ್ರದರ್ಶನಗಳೂ ಪ್ರೇಕ್ಷಕರ ಮನಸೂರೆಗೊಂಡವು.ಸ್ಪರ್ಧೆಗಳ ತೀರ್ಪುಗಾರರಾಗಿ ಶ್ರೀ ರಮೆಶ್ ಶಾಸ್ತ್ರಿ , ಶ್ರೀಮತಿ ಗೀತಾ ನಾಯಕ್ ಸುಳ್ಯ, ಹಾಗೂ ಶ್ರೀಮತಿ ಕಾವ್ಯವಾಣಿ ಕೊಡಗು ಸಹಕರಿಸಿದ್ದರು.ಆರಂಭದಲ್ಲಿ ಸದಸ್ಯರಾದ ಶ್ರೀಮತಿ ದೀಪಾ ಶೆಟ್ಟಿ, ಪುಷ್ಪಾ ಆಚಾರ್ಯ, ಮತ್ತು ವಸಂತಿ ಗೋಪಾಲ್ ಅವರು ಪ್ರಾರ್ಥಿಸಿದರು.ಗೌರವಾಧ್ಯಕ್ಷೆ ಶ್ರೀಮತಿ ಬಬಿತಾ ಜಗದೀಶ್ ಅರಸ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಸರ್ವರನ್ನೂ ಸ್ವಾಗತಿಸಿದರು.ಕಾರ್ಯದರ್ಶಿ ಡಾ.ಸ್ಪೂರ್ತಿ .ಪಿ.ಶೆಟ್ಟಿ ವರದಿಯನ್ನು ವಾಚಿಸಿದರು.

ಶ್ರೀಮತಿ ಐರಿನ್ ಲುಸ್ರಾದೋ ಅವರು ದಾನಿಗಳ ಪಟ್ಟಿಯನ್ನು ವಾಚಿಸಿದರು.ಶ್ರೀಮತಿ ಶಾಲಿನಿ ಶೆಟ್ಟಿ ಸ್ಪರ್ಧಾ ವಿಜೇತರ ಪಟ್ಟಿಯನ್ನು ವಾಚಿಸಿದರು. ಕೋಶಾಧಿಕಾರಿ ಶ್ರೀಮತಿ ಜೆಸಿಂತಾ ಮರಿಯಾ ಫುರ್ಟಾಡೋ ಅವರು ಧನ್ಯವಾದವಿತ್ತರು.ಧೀಮಹೀ-2022ರ ಕಾರ್ಯಕ್ರಮವನ್ನು ಶ್ರೀಮತಿ ಸುಪ್ರೀತಾ ಹಾಗೂ ಸಮಾರೋಪ ಸಮಾರಂಭ ಕಾರ್ಯಕ್ರಮವನ್ನು ಶ್ರೀಮತಿ ಸುಮತಿ ಜಯಪ್ರಕಾಶ್ ಸುವರ್ಣ ಅವರು ನಿರ್ವಹಿಸಿದರು.

 
 
 
 
 
 
 
 
 
 
 

Leave a Reply