ಅಂಚೆ ಇಲಾಖೆಯ ಸೇವೆಗಳನ್ನು ಮನೆಯಲ್ಲಿಯೇ ಕುಳಿತು ಅಂಚೆ ಮಿತ್ರ ಯೋಜನೆ ಸದುಪಯೋಗಪಡಿಸಿಕೊಳ್ಳಿ~ ನವೀನ್ ಚಂದರ್, ಅಂಚೆ ಅಧೀಕ್ಷಕ   

ಭಾರತೀಯ ಅಂಚೆ ಇಲಾಖೆ ಕೋವಿಡ್-19 ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಮನೆಯೊಳಗೆ ಕುಳಿತು ಅಂಚೆ ಇಲಾಖೆಯ ವ್ಯವಹಾರಗಳನ್ನು ನಡೆಸುವಲ್ಲಿ ಜನಸಾಮನ್ಯರಿಗೆ ಅನುಕೂಲವಾಗುವಂತೆ ‘ಅಂಚೆ ಮಿತ್ರ’ ಎಂಬ ಹೊಸ ಯೋಜನೆಯನ್ನು ಜಾರಿಗೆ ತಂದಿದೆ. ಅದರ ಮುಖಾಂತರ ಮನೆಯಲ್ಲೇ ಕುಳಿತು ವೈದ್ಯಕೀಯ ಪಾರ್ಸೆಲ್ ಪಿಕ್ ಅಪ್ ಇತ್ಯಾದಿ ತುರ್ತು ಅಗತ್ಯಗಳಿಗೆ ಮನವಿ ಕಳುಹಿಸಬಹುದು.

ಭಾರತೀಯ ಅಂಚೆ ಇಲಾಖೆಯ ಅಂಚೆ ಜೀವ ವಿಮೆ, ಗ್ರಾಮೀಣ ಅಂಚೆ ಜೀವ ವಿಮೆಗಳ ಆನ್ ಲೈನ್ ಪಾವತಿಗೆ ಮನವಿ ಸಲ್ಲಿಸಬಹುದಾಗಿದೆ. ಮನಿಯಾರ್ಡರ್ ಪಡೆಯಲು ಪಿಂಚಣಿದಾರರು ತಮ್ಮ ವಿಳಾಸದಲ್ಲಿ ಸದ್ಯ ಇಲ್ಲದೇ ಇದ್ದಲ್ಲಿ ಆ ಹಣವನ್ನು ಉಳಿತಾಯ ಖಾತೆಗೆ ಜಮಾ ಮಾಡುವಂತೆ ಮನವಿ ಮಾಡಬಹುದು.

ಅಂಚೆ ಮಿತ್ರ ಬಳಸಲು http://karnatakapost.gov.in/anchemitra ಲಾಗಿನ್ ಆದಾಗ ಅದರಲ್ಲಿ ಹಾಗೂ ತಮ್ಮ ತುರ್ತು ಅವಶ್ಯಕತೆಗಳಿಗಾಗಿ ಸೇವಾ ವಿನಂತಿಯನ್ನು ಕಳುಹಿಸಿ ಸೇವೆ ಪಡೆಯಬಹುದಾಗಿದೆ. ಈ ತಂತ್ರಾಂಶದ ಮೂಲಕ ತ್ವರಿತ ಅಂಚೆ, ನೋಂದಾಯಿತ ಅಂಚೆ, ಮನಿ ಆರ್ಡರ್, ಸಂಧ್ಯಾ ಸುರಕ್ಷಾ ಹಣವನ್ನು ಖಾತೆಗೆ ರವಾನೆ. 

 ಉಳಿತಾಯ ಖಾತೆಯಿಂದ ಹಣ ವರ್ಗಾವಣೆ, ಅಂಚೆ ಜೀವ ವಿಮೆ, ಗ್ರಾಮೀಣ ಅಂಚೆ ಜೀವ ವಿಮೆ ಪಾವತಿ ಬಗ್ಗೆ ವಿಚಾರಣೆ, ಐಪಿಪಿಬಿ ಖಾತೆ ತೆರೆಯುವ ಬಗ್ಗೆ ವಿವರಣೆ ಹೀಗೆ ಇಲಾಖೆಯ ವಿವಿಧ ಸೇವೆಗಳನ್ನು ಪಡೆಯಲು ವಿನಂತಿ ಕಳುಹಿಸಿದಾಗ ಆಯಾಯ ಪ್ರದೇಶಗಳ ಅಂಚೆ ವಿಭಾಗದ ಅಂಚೆ ಅಧೀಕ್ಷಕರ ಕಚೇರಿಯಲ್ಲಿ ಇದನ್ನು ಪರೀಶೀಲಿಸಿ ಮನವಿಯನ್ನು ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗುವುದು.  ನಂತರ ಗ್ರಾಹಕರು ಅಪೇಕ್ಷಿಸಿದ್ದಲ್ಲಿ ಅದರ ವಿವಿಧ ಮಜಲುಗಳ ಬಗ್ಗೆ ಮಾಹಿತಿ ನೀಡಲಾಗುವುದು. ಇದಕ್ಕೆ ಯಾವುದೇ ಹೆಚ್ಚುವರಿ ಶುಲ್ಕ ಇರುವುದಿಲ್ಲ.

ಇಂತಹ ಬಹು ಉಪಯುಕ್ತ ಅಂಚೆ ಮಿತ್ರ ತಂತ್ರಾಂಶವು ಕೋವಿಡ್-19 ನ ಈ ಸಂದರ್ಭದಲ್ಲಿ ಆದಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಉಪಯೋಗಿಸಬಹುದು ಎಂದು ಉಡುಪಿ ಅಂಚೆ ವಿಭಾಗದ ಅಂಚೆ ಅಧೀಕ್ಷಕ ನವೀನ್ ಚಂದರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

 
 
 
 
 
 
 
 
 
 
 

Leave a Reply