ಮೀನು ಮಾರಾಟ ಮಾಡಿ ಸ್ವಾವಲಂಬಿ ಬದುಕು ನಡೆಸಿ ಕುಟುಂಬವನ್ನು ಸಲಹುವ ಮಹಿಳಾ ಮೀನುಗಾರರ ಜೀವನ ಸರ್ವರಿಗೂ ಮಾದರಿಯಾಗಿದ್ದು, ಮಹಿಳಾ ಮೀನುಗಾರರ ಜೊತೆ ಜೊತೆಗೆ ಸಮಾಜದಲ್ಲಿ ಸ್ವಾವಲಂಬಿ ಜೀವನ ನಡೆಸುವ ಮಹಿಳೆಯರ ಸಮಸ್ಯೆಗಳಿಗೆ ಮುಂದಿನ ದಿನಗಳಲ್ಲಿ ಧ್ವನಿಯಾಗಿ ಕೆಲಸ ನಿರ್ವಹಿಸಲು ಅವಕಾಶ ನೀಡುವಂತೆ ಬಿಜೆಪಿ ಅಭ್ಯರ್ಥಿ ಯಶ್ ಪಾಲ್ ಸುವರ್ಣ ಹೇಳಿದರು. ಉಡುಪಿ ನಗರದ ಮೀನು ಮಾರುಕಟ್ಟೆಗೆ ಭೇಟಿ ನೀಡಿ ಮತ ಯಾಚನೆ ಮಾಡಿ ಮಾತನಾಡಿದರು.
2009 ರಲ್ಲಿ ಜಿಲ್ಲೆಯ ಮೀನು ಮಾರಾಟ ಮಹಿಳೆಯರನ್ನು ಸಂಘಟಿಸುವ ನಿಟ್ಟಿನಲ್ಲಿ ಮಹಿಳಾ ಹಸಿ ಮೀನು ಮಾರಾಟ ಸಂಘವನ್ನು ಸ್ಥಾಪಿಸುವಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರವ ಸಂತೃಪ್ತಿ ಇದ್ದು, ಫೆಡರೇಶನ್ ಅಧ್ಯಕ್ಷನಾಗಿ ಮಹಿಳಾ ಮೀನುಗಾರರಿಗೆ ರಾಜ್ಯ ಸರ್ಕಾರದ ಶೂನ್ಯ ಬಡ್ಡಿದರದ ಸಾಲ ಯೋಜನೆ, ಸಾಲ ಮನ್ನಾ, ಜಿಲ್ಲೆಯ ವಿವಿಧ ಭಾಗಗಳಲ್ಲಿ ಹೈಟೆಕ್ ಮೀನು ಮಾರುಕಟ್ಟೆ ನಿರ್ಮಾಣ ಮೊದಲಾದ ಹಲವು ಯೋಜನೆಗಳನ್ನು ಮಹಿಳಾ ಮೀನು ಮಾರಾಟಗಾರರಿಗೆ ತಲುಪಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದು ಮುಂದಿನ ಚುನಾವಣೆಯಲ್ಲಿ ನನ್ನನ್ನು ಗೆಲ್ಲಿಸುವ ಮೂಲಕ ಶಾಸಕನಾಗಿ ಸೇವೆ ಸಲ್ಲಿಸಲು ಅವಕಾಶ ನೀಡುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಉಡುಪಿ ತಾಲೂಕು ಮಹಿಳಾ ಹಸಿ ಮೀನು ಮಾರಾಟ ಸಂಘದ ಅಧ್ಯಕ್ಷರಾದ ಬೇಬಿ ಸಾಲ್ಯಾನ್ ಮಾತನಾಡಿ ಯಶ್ ಪಾಲ್ ಸುವರ್ಣ ರವರು ನಮ್ಮ ಸಂಘಟನೆಯ ಆರಂಭದ ದಿನದಿಂದಲೂ ಗೌರವ ಸಲಹೆಗಾರರಾಗಿ ಮಾರ್ಗದರ್ಶನ ನೀಡುವ ಮೂಲಕ ಶಕ್ತಿ ತುಂಬಿದ್ದಾರೆ. ವಿವಿಧ ಸಂದರ್ಭದಲ್ಲಿ ನಮ್ಮ ಸಮಸ್ಯೆಗಳಿಗೆ ರಾಜ್ಯ ಹಾಗೂ ಕೇಂದ್ರ ಸರಕಾರದ ಮೂಲಕ ಪರಿಹಾರ ಒದಗಿಸುವಲ್ಲಿ ಮುಂಚೂಣಿಯಲ್ಲಿ ನಿಂತ ಯಶ್ ಪಾಲ್ ಸುವರ್ಣ ಮುಂದಿನ ದಿನದಲ್ಲಿ ಓರ್ವ ಶಾಸಕರಾಗಿ ಇನ್ನೂ ಹೆಚ್ಚಿನ ಸೇವೆ ಸಲ್ಲಿಸುವಂತಾಗಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಲಕ್ಷ್ಮೀ ಆನಂದ, ಜೊತೆ ಕಾರ್ಯದರ್ಶಿ ಜಯಂತಿ ಗುರುದಾಸ್, ಪ್ರಮುಖರಾದ ಸುಮಿತ್ರಾ, ಭಾರತಿ ಸಾಲ್ಯಾನ್, ರತ್ನಾ ಕಾಂಚನ್ ಹಾಗೂ ಮಹಿಳಾ ಮೀನು ಮಾರಾಟಗಾರರು ಉಪಸ್ಥಿತರಿದ್ದರು.