ಮೈಸೂರು: ಕೋವಿಡ್ ಮೂರನೇ ಅಲೆಯ ಆತಂಕದ ನಡುವೆಯೂ ವಿಶ್ವವಿಖ್ಯಾತ ಮೈಸೂರು ದಸರಾಗೆ ಮಾಜಿ ಮುಖ್ಯಮಂತ್ರಿ ಎಸ್ ಎಮ್ ಕೃಷ್ಣ ಚಾಲನೆ ನೀಡಿದರು.
ವೇದಿಕೆಯ ಮಂಟಪದಲ್ಲಿ ಇರಿಸಲಾಗಿದ್ದ ಬೆಳ್ಳಿ ಮಂಟಪದಲ್ಲಿದ್ದ ಚಾಮುಂಡೇಶ್ವರಿ ಮೂರ್ತಿಗೆ ಬಿಜೆಪಿ ನಾಯಕ ಎಸ್.ಎಂ.ಕೃಷ್ಣ ಬೆಳಿಗ್ಗೆ 8.25ಕ್ಕೆ ಪುಷ್ಪ ನಮನ ಸಲ್ಲಿಸಿ ಉತ್ಸವಕ್ಕೆ ಚಾಲನೆ ನೀಡಿದರು.
ಪ್ರಧಾನ ಅರ್ಚಕ ಶಶಿಶೇಖರ ದೀಕ್ಷಿತರು ನೀಡಿದ ಮಂಗಳಾರತಿ ಹಿಡಿದು ಕೃಷ್ಣ ಚಾಮುಂಡೇಶ್ವರಿಗೆ ಬೆಳಗಿದರು. ನಂತರ ಪುಷ್ಪ ನಮನ ಸಲ್ಲಿಸಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಅವರ ಪತ್ನಿ ಚೆನ್ನಮ್ಮ ಜೊತೆಯಾದರು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಅಧ್ಯಕ್ಷತೆ ವಹಿಸಿದ್ದರು.ಕೋವಿಡ್ ಮೂರನೇ ಅಲೆಯ ಆತಂಕದ ನಡುವೆಯೂ ನವರಾತ್ರಿಯ ಸರಳ, ಸಾಂಪ್ರದಾಯಿಕ ಆಚರಣೆಯ ಆರಂಭದ ಕ್ಷಣಗಳಿಗೆ ಬೆಟ್ಟದಲ್ಲಿ ನೆರೆದಿದ್ದ ನೂರಾರು ಗಣ್ಯರು, ಗ್ರಾಮಸ್ಥರು ಸಾಕ್ಷಿಯಾದರು.
ಸಂಸದ ಪ್ರತಾಪ್ ಸಿಂಹ, ಸಚಿವರಾದ ವಿ.ಸುನೀಲ್ ಕುಮಾರ್, ಶಶಿಕಲಾ ಜೊಲ್ಲೆ, ಆರ್ ಅಶೋಕ, ಶಿವರಾಮ್ ಹೆಬ್ಬಾರ್, ಬೈರತಿ ಬಸವರಾಜ್, ಬಿಸಿ ಪಾಟೀಲ್, ಡಾ ಕೆ ಸುಧಾಕರ, ಟಿ ನಾರಾಯಣ ಗೌಡ, ಶಾಸಕರಾದ ಎಲ್ ನಾಗೇಂದ್ರ, ತನ್ವೀರ್ ಸೇಠ್, ಎಸ್ ಎ ರಾಮದಾಸ್, ಎಚ್ ವಿಶ್ವನಾಥ್, ಕೆ ಮಹದೇವು, ಬಿ ಹರ್ಷವರ್ಧನ, ಕೆಟಿ ಶ್ರೀಕಂಠೇಗೌಡ, ಮುನಿರಾಜೇಗೌಡ, ಅರವಿಂದ ಬೆಲ್ಲದ, ಸಿ ಎಸ್ ಮಂಜುನಾಥ್, ಮೇಯರ್ ಸುನಂದಾ ಫಾಲನೇತ್ರ, ಜಿಲ್ಲಾಧಿಕಾರಿ ಗೌತಮ್ ಬಗಾದಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್ ಚೇತನ್, ನಗರ ಪೊಲೀಸ್ ಆಯುಕ್ತ ಚಂದ್ರಗುಪ್ತ, ಉಪಸ್ಥಿತರಿದ್ದರು.