ಉಡುಪಿ, ಸೆಪ್ಟೆಂಬರ್ 1, ಉಡುಪಿಯ ಎಂ.ಜಿ.ಎಂ ಕಾಲೇಜಿನ ಆಡಳಿತ ಮಂಡಳಿಯು ಸ್ವಾತಂತ್ರ್ಯದ ಅಮೃತ ಮಹೋತ್ಸವದ ಕೊಡುಗೆಯಾಗಿ ನೂತನವಾಗಿ ಆರಂಭಿಸಿರುವ ಎಂ.ಜಿ.ಎಂ ಸಂಧ್ಯಾ ಕಾಲೇಜಿನ ಕಚೇರಿ ಹಾಗೂ ಪ್ರಾಂಶುಪಾಲರ ಕೊಠಡಿಯನ್ನು ಎಂ.ಜಿ.ಎಂ ಕಾಲೇಜಿನ ಆಡಳಿತ ಮಂಡಳಿಯ ಹಿರಿಯ ವಿಶ್ವಸ್ಥರು ಹಾಗೂ ನೂತನ ಕಾಲೇಜಿನ ಸ್ಥಾಪನೆಗೆ ಕಾರಣಕರ್ತರಾದ ಶ್ರೀ ಟಿ. ಸತೀಶ್ ಯು ಪೈ ಅವರು ಉದ್ಘಾಟಿಸಿದರು. ಎಂ.ಜಿ.ಎಂ ಸಂಧ್ಯಾ ಕಾಲೇಜು ಉತ್ಕೃಷ್ಟವಾದ ಶೈಕ್ಷಣಿಕ ಗುಣಮಟ್ಟವನ್ನು ಸಾಧಿಸಿ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ವಿದ್ಯಾರ್ಥಿಗಳನ್ನು ಆಕರ್ಷಿಸಲಿ ಎಂದು ಹಾರೈಸಿದರು. ಮುಖ್ಯ ಅತಿಥಿಗಳಾದ ಮಣಿಪಾಲದ ಅಕಾಡೆಮಿ ಆಫ್ ಜನರಲ್ ಎಜ್ಯುಕೇಶನ್ ನ ಕಾರ್ಯದರ್ಶಿ ಶ್ರೀ ವರದರಾಯ ಪೈ ಅವರು ಶುಭಹಾರೈಸಿದರು.
ಇದೇ ಸಂದರ್ಭದಲ್ಲಿ ನೂತನ ಕಾಲೇಜಿನ ಪ್ರಥಮ ಪ್ರಾಂಶುಪಾಲರಾಗಿ ಡಾ. ದೇವಿದಾಸ್ ಎಸ್. ನಾಯ್ಕ ಅವರು ಅಧಿಕಾರವನ್ನು ವಹಿಸಿಕೊಂಡರು. ಎಂ.ಜಿ.ಎಂ ಡಿಗ್ರಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಲಕ್ಷ್ಮೀನಾರಾಯಣ ಕಾರಂತ್, ಬಿಸಿಎ ಸಂಯೋಜಕರಾದ ಡಾ. ವಿಶ್ವನಾಥ ಪೈ ಎಂ, ಕಾಮರ್ಸ್ ಸಂಯೋಜಕರಾದ ಡಾ. ಮಲ್ಲಿಕಾ ಶೆಟ್ಟಿ, ಕಾಲೇಜಿನ ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.