ಎಪಿಎಂಸಿ ಆದಿ ಉಡುಪಿಯ ಮಾರುಕಟ್ಟೆಯ ವ್ಯಾಪಾರಸ್ಥರ ಹಿತ ದೃಷ್ಠಿಯಿಂದ ಮತ್ತು ಅಲ್ಲಿ ನಡೆಯುವ ಎಲ್ಲಾ ಅವ್ಯವಹಾರಗಳನ್ನು ಮೆಟ್ಟಿ ನಿಲ್ಲಲು ಇಂದಿನಿಂದ ಕೃಷಿ ಉತ್ಪನ್ನ ಮಾರಾಟಗಾರರ ಒಕ್ಕೂಟ ಎನ್ನುವ ನೂತನ ಸಂಘವನ್ನು ಉದ್ಘಾಟಿಸಿ ಎಪಿಎಂಸಿ ಕಾರ್ಯದರ್ಶಿಗಳಿಗೆ ಸಂಘದ ಮಾಹಿತಿ ಪತ್ರ ನೀಡುವ ಮೂಲಕ ಆಡಳಿತ ಮಂಡಳಿಯ ಸಹಕಾರ ಕೋರಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸುಭಾಷಿತ ಕುಮಾರ್ ಮಾತನಾಡಿ ರೈತರು ಬೆಳೆದ ಉತ್ಪನ್ನಗಳನ್ನು ಮುಕ್ತವಾಗಿ ಮಾರಾಟ ಮಾಡುವ ವ್ಯವಸ್ಥೆಗೆ ದಕ್ಕೆ ಮತ್ತು ಅಡಚಣೆ ಉಂಟಾದಾಗ ಮಾರಾಟಗಾರರ ಒಕ್ಕೂಟ ಸುಮ್ಮನೆ ಇರುವುದಿಲ್ಲ, ವ್ಯಾಪಾರಸ್ಥರಿಗೆ ಯಾವುದೇ ರೀತಿಯ ಅನ್ಯಾಯ ದೌರ್ಜನ್ಯವಾದಲ್ಲಿ ಒಕ್ಕೂಟವು ಅಂತಹ ಷಡ್ಯಂತ್ರಗಳ ವಿರುದ್ಧ ಹೋರಾಡಲು ಸದಾ ಸಿದ್ದ ಎಂದು ಎಚ್ಚರಿಕೆ ನೀಡಿದರು.
ತದನಂತರ ಎಪಿಎಂಸಿ ಕಾರ್ಯದರ್ಶಿ ಶ್ರೀಮತಿ ಗಾಯತ್ರಿ ಅವರಿಗೆ ಸಂಘದ ವತಿಯಿಂದ ಸರ್ವರ ಸಮ್ಮುಖದಲ್ಲಿ ಮಾಹಿತಿ ಪತ್ರ ನೀಡಿ ಆಡಳಿತ ಮಂಡಳಿಯ ಸಂಪೂರ್ಣ ಬೆಂಬಲ ನೀಡುವಂತೆ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಸಂಘದ ಗೌರವ ಮಾರ್ಗದರ್ಶಕರಾದ ರಾಧಾಕೃಷ್ಣ ಮೆಂಡನ್, ಉಪಾದ್ಯಕ್ಷರಾದ ರಮಾಕಾಂತ್ ಕಾಮತ್, ರಾಘವೇಂದ್ರ ಉಪ್ಪೂರು, ಸಂತೋಷ್ ಶೆಟ್ಟಿ, ದೇವೇಂದ್ರಪ್ಪಗೌಡ ಪಾಟೀಲ್, ಖಜಾಂಚಿ ಲಕ್ಷ್ಮಣ್ ಕೊಲ್ಕಾರ್, ಸಂಘಟನಾ ಕಾರ್ಯದರ್ಶಿ ಜೀವಂದರ್ ಶೆಟ್ಟಿ ಜೊತೆ ಕಾರ್ಯದರ್ಶಿ ವಿಶ್ವನಾಥ್ ರೆಡ್ಡಿ, ಸುಶಾಂತ್ ಬ್ರಹ್ಮಾವರ, ಪ್ರಭುಗೌಡ ಪಾಟೀಲ, ಪಂಪೇಶ್ ಮತ್ತು ಸಂಘದ ಸರ್ವ ಸದಸ್ಯರು ಉಪಸ್ಥಿತರಿದ್ದರು.
ಸಂಘದ ಪ್ರಧಾನ ಕಾರ್ಯದರ್ಶಿ ಸಿದ್ದಬಸಯ್ಯ ಸ್ವಾಮಿ ಚಿಕ್ಕಮಠ ಅವರು ಸಂಘದ ಸಂಪೂರ್ಣ ಮಾಹಿತಿ ತಿಳಿಸಿ, ಸ್ವಾಗತಿಸಿ ವಂದಿಸಿದರು.