ಮಲ್ಪೆ: ಇಡೀ ಜಗತ್ತು ಒಂದು ಮನೆ ಇದ್ದಂತೆ, ಆ ಮನೆಯ ನಂದಾ ದೀಪವಾಗಿ ನಮ್ಮ ಭಾರತ ಬೆಳಗುತ್ತಿದೆ. ಇಲ್ಲಿನ ಆಚಾರ ವಿಚಾರ, ಸಂಪ್ರದಾಯ, ಸನ್ನಡತೆ ಎಲ್ಲವೂ ವಿಶ್ವಕ್ಕೇ ಮಾದರಿ. ಇಂತಹ ಹಿಂದೂಸ್ಥಾನದಲ್ಲಿ ಹುಟ್ಟಿದ ನಾವೇ ಭಾಗ್ಯಶಾಲಿಗಳು ಎಂದು ಖ್ಯಾತ ಯುವ ವಾಗ್ಮಿ, ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿ ಸುಬ್ರಹ್ಮಣ್ಯ ನಾವಡ ಅಭಿಪ್ರಾಯ ವ್ಯಕ್ತಪಡಿಸಿದರು.
ಕೊಡವೂರು ಬ್ರಾಹ್ಮಣ ಮಹಾ ಸಭಾ ತನ್ನ ರಜತ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಗುರುವಂದನೆ ಹಾಗು ಪ್ರತಿಭಾಭಿವಂದನೆ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣದಲ್ಲಿ ಮಾತ ನಾಡುತ್ತಾ ಇಡೀ ಜಗತ್ತನ್ನೇ ವಸುಧೈವ ಕುಟುಂಬವೆಂದು ಭಾವಿಸಿ ತ್ಯಾಗ ಹಾಗು ಸೇವೆಯ ಧ್ಯೇಯ ಹೊಂದಿದ ವಿಪ್ರ ಸಮುದಾಯ ಸರ್ವರಿಗೂ ಆದರ್ಶಪ್ರಾಯ ಎಂದು ಬಣ್ಣಿಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಉಡುಪಿ ನಗರ ಸಭಾ ಸದಸ್ಯ ಹಾಗು ಉಡುಪಿ ವಾಣಿಜ್ಯ ಮಂಡಳಿಯ ಅಧ್ಯಕ್ಷ ಶ್ರೀ ಕೃಷ್ಣರಾವ್ ಕೊಡಂಚರವರು ಮಾತನಾಡುತ್ತಾ ಪ್ರತಿಭೆ, ಶ್ರದ್ಧೆ, ಛಲ ಇರುವ ವಿಪ್ರ ಸಮುದಾಯ ಆದಷ್ಟು ಸ್ವ ಉದ್ಯೋಗದಲ್ಲಿ ತೊಡಗಿಸಿಕೊಂಡು ತಮ್ಮ ತಮ್ಮ ಊರಲ್ಲಿ ನೆಲೆಸಿ ಯಶಸ್ವೀ ಉದ್ಯಮಿಗಳಾಗಿ ಇತರರಿಗೆ ಮಾದರಿಯಾಗಬೇಕೆಂದು ಕರೆ ನೀಡಿದರು.
ಗುರುವಂದನೆಯ ಅಂಗವಾಗಿ ಬೋರ್ಡ್ ಹೈಸ್ಕೂಲ್ ಉಡುಪಿಯ ಮುಖ್ಯೋಪಾಧ್ಯಾಯರಾದ ಸುರೇಶ್ ಭಟ್ ಹಾಗು ಅವರ ಸಹಧರ್ಮಿಣಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸರಳೆಬೆಟ್ಟು ಇದರ ಶಿಕ್ಷಕಿ ಸುಮನಾ ಭಟ್ ಮತ್ತು ಸೈಂಟ್ ಸಿಸಿಲಿ ಹಿರಿಯ ಪ್ರಾಥಮಿಕ ಶಾಲೆ ಉಡುಪಿಯ ಸಹ ಶಿಕ್ಷಕ ಎಮ್ ಉಮೇಶ್ ರಾವ್ ಇವರನ್ನು ಅಭಿನಂದಿಸಲಾಯಿತು.
ಅಲ್ಲದೆ ಹಲವಾರು ದಾನಿಗಳಿಂದ ಪ್ರಾಯೋಜಿತ ಶಿಷ್ಯ ವೇತನವನ್ನು ಅರ್ಹ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿತರಿಸಲಾಯಿತು. ಎಸ್ ಎಸ್ ಎಲ್ ಸಿ ಯಲ್ಲಿ 625 ಪೂರ್ಣ ಅಂಕ ಪಡೆದ ಕೊಡವೂರಿನ ಸಾತ್ವಿಕ್ ಭಟ್ ಹಾಗು ಅಭಿಷೇಕ್ ಜಯಂತ್ ಹೊಳ್ಳ ಇವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ ವಲಯದ ಶಿಕ್ಷಕರನ್ನು ಗುರುತಿಸಲಾಯಿತು. ಅಂತೆಯೇ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಹಮ್ಮಿಕೊಂಡಿದ್ದ ಕೃಷ್ಣ ವೇಷ ಫೋಟೋ ಸ್ಪರ್ಧೆಯ ವಿಜೇತರಿಗೆ ಬಹುಮಾನ ಸಮಾರಂಭ ನಡೆಯಿತು.
0 – 2 ವರ್ಷದೊಳಗಿನ ಪುಟಾಣಿಗಳ ವಿಭಾಗದಲ್ಲಿ ಪ್ರಥಮ ಬಹುಮಾನ ವಿಧಾತ್ರಿ ಉಪಾಧ್ಯ, ಪಡು ಅಲೆವೂರು ದ್ವಿತೀಯ ಬಹುಮಾನ ಶ್ರಾವಣಿ ಆರ್ ಭಟ್, ಮರ್ಣೆ, ಮೂಡುಬೆಳ್ಳೆ ಹಾಗು ತೃತೀಯ ಬಹುಮಾನ ಸುಧನ್ವ ಆರ್ ರಾವ್ ಕೊಡವೂರು.
3 – 5 ವರ್ಷದೊಳಗಿನ ಪುಟಾಣಿಗಳ ವಿಭಾಗದಲ್ಲಿ ಪ್ರಥಮ ಬಹುಮಾನ ಹಿರಣ್ಮಯೀ ಭಟ್ ಕುಂಜಿಬೆಟ್ಟು, ದ್ವಿತೀಯ ಬಹುಮಾನ ಸುಘೋಶ ಸಪ್ರೆ ಕಾಂತಾವರ ಹಾಗೂ ತೃತೀಯ ಬಹುಮಾನ ಆರ್ಯ ಕಲ್ಕೂರ್, ಕುಂಜಿಬೆಟ್ಟು ಇವರುಗಳಿಗೆ ವಿತರಿಸಲಾಯಿತು.
ಈ ಸ್ಪರ್ಧೆಯ ತೀರ್ಪುಗಾರರಾಗಿ ಸಹಕರಿಸಿದ ಖ್ಯಾತ ಛಾಯಾಗ್ರಾಹಕ ಪ್ರಸನ್ನ ಪೆರ್ಡೂರು ಇವರಿಗೆ ಗೌರವ ಸಲ್ಲಿಸಲಾಯಿತು. ಬ್ರಾಹ್ಮಣ ಮಹಾ ಸಭಾದ ಅಧ್ಯಕ್ಷ ನಾರಾಯಣ ಬಲ್ಲಾಳ್ ಸ್ವಾಗತಿಸಿ ರಜತ ಮಹೋತ್ಸವ ಕಾರ್ಯಾಧ್ಯಕ್ಷ ಮಂಜುನಾಥ ಭಟ್ ಪ್ರಸ್ತಾವನೆಯ ಮಾತುಗಳನ್ನಾಡಿದರು.
ಶ್ರೀಧರ ಶರ್ಮ ಶಿಷ್ಯ ವೇತನ ಪ್ರಾಯೋಜಿಸಿದವರ ಪಟ್ಟಿ ವಾಚಿಸಿದರು. ಸಿಂಧೂರ ಶ್ರೀಹರ್ಷ, ಅನುಪಮಾ ಅಡಿಗ, ಅಂಬಿಕಾ ಉಪಾಧ್ಯ ಸನ್ಮಾನಿತರ ಸನ್ಮಾನಪತ್ರ ವಾಚಿಸಿದರು. ಅಂಬಿಕಾ ಉಪಾಧ್ಯ ಮತ್ತು ಅಂಜಲಿ ಉಪಾಧ್ಯ ಪ್ರಾರ್ಥಿಸಿ, ದೀಪಾ ರಾಮಕೃಷ್ಣ ರಾವ್ ನಿರೂಪಿಸಿದರು. ಭಾರತಿ ಸುಬ್ರಹ್ಮಣ್ಯ ವಂದಿಸಿದರು. ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ರಾವ್ ಉಪಸ್ಥಿತರಿದ್ದರು.