ರ್ಯಾಗಿಂಗ್ನಿಂದ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ್ದ ಸ್ನಾತಕೋತ್ತರ ವೈದ್ಯಕೀಯ ದಲಿತ ವಿದ್ಯಾರ್ಥಿನಿ ಭಾನುವಾರ ತೆಲಂಗಾಣದ ವಾರಂಗಲ್ನಲ್ಲಿ ಕೊನೆಯುಸಿರೆಳೆದಿದ್ದಾರೆ.
ಪರಿಶಿಷ್ಟ ಪಂಗಡದ ಸಮುದಾಯಕ್ಕೆ ಸೇರಿದ ಧಾರಾವತ್ ಪ್ರೀತಿ ಅವರು ಫೆಬ್ರವರಿ 22 ರಂದು ಕರ್ತವ್ಯದಲ್ಲಿದ್ದಾಗ ವಾರಂಗಲ್ನ ಮಹಾತ್ಮ ಗಾಂಧಿ ಸ್ಮಾರಕ ಆಸ್ಪತ್ರೆಯ ಸಿಬ್ಬಂದಿ ಕೊಠಡಿಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದರು ಎಂದು ‘ದಿ ಇಂಡಿಯನ್ ಎಕ್ಸ್ಪ್ರೆಸ್’ ವರದಿ ಮಾಡಿದೆ.
ಪ್ರೀತಿಯವರು ಕಾಕತೀಯ ವೈದ್ಯಕೀಯ ಕಾಲೇಜಿನಲ್ಲಿ ಎರಡನೇ ವರ್ಷದ ಎಂಡಿ ಅರಿವಳಿಕೆ ವಿದ್ಯಾರ್ಥಿಯಾಗಿದ್ದು, ಆಕೆಯ ಸೀನಿಯರ್ ಮೊಹಮ್ಮದ್ ಸೈಫ್ ಕಿರುಕುಳ ನೀಡುತ್ತಿದ್ದರು ಎಂದು ವರದಿಯಾಗಿದೆ. ಫೆಬ್ರವರಿ 24ರಂದು ಸೈಫ್ನನ್ನು ಬಂಧಿಸಲಾಗಿದೆ.
ತೆಲಂಗಾಣ ಆರೋಗ್ಯ ಸಚಿವ ಟಿ ಹರೀಶ್ ರಾವ್ ಅವರು ಪ್ರೀತಿಯವರ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.
“ನಿಮ್ಸ್ನ ವೈದ್ಯಕೀಯ ತಂಡವು ಪ್ರೀತಿಯವರನ್ನು ಉಳಿಸಲು ದಣಿವರಿಯದೆ ಕೆಲಸ ಮಾಡಿದೆ. ಡಾ.ಪ್ರೀತಿ ಸಂಪೂರ್ಣವಾಗಿ ಗುಣಮುಖರಾಗಿ ಹಿಂತಿರುಗುತ್ತಾರೆಂದು ನಾವು ಭಾವಿಸಿದ್ದೆವು. ಆದರೆ ಅವರು ಹಿಂತಿರುಗದ ಲೋಕಕ್ಕೆ ಹೋದರು” ಎಂದು ಹರೀಶ್ ರಾವ್ ಪ್ರತಿಕ್ರಿಯಿಸಿದ್ದಾರೆ.
10 ಲಕ್ಷ ರೂ. ಪರಿಹಾರವನ್ನು ರಾಜ್ಯ ಸರ್ಕಾರ ಘೋಷಿಸಿದೆ ಎಂದು ಪಂಚಾಯತ್ ರಾಜ್ ಸಚಿವ ಎರ್ರಬೆಳ್ಳಿ ದಯಾಕರ್ ರಾವ್ ಮಾಹಿತಿ ನೀಡಿದ್ದಾರೆ.