ಹಳೆ ವಿದ್ಯಾರ್ಥಿ ಹಚ್ಚಿದ ಬೆಂಕಿಯಿಂದ ತೀವ್ರವಾಗಿ ಗಾಯಗೊಂಡಿದ್ದ ಇಂದೋರ್ನ ಬಿಎಂ ಫಾರ್ಮಸಿ ಕಾಲೇಜಿನ ಪ್ರಾಂಶುಪಾಲರಾದ ವಿಮುಕ್ತ ಶರ್ಮಾ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಬೆಳಗಿನ ಜಾವ 4 ಗಂಟೆಯ ಸುಮಾರಿಗೆ ನಿಧನರಾದರು ಎಂದು ಶರ್ಮಾ ಅವರ ಸಹೋದರ ಅರವಿಂದ್ ತಿವಾರಿ ಹೇಳಿಕೆಯನ್ನು ಉಲ್ಲೇಖಿಸಿ, ಇಂಡಿಯಾ ಟುಡೇ ವರದಿ ಮಾಡಿದೆ.
ಫೆ.20ರಂದು ನಡೆದಿದ್ದ ಘಟನೆಯಲ್ಲಿ ಶೇ.80ರಷ್ಟು ಸುಟ್ಟ ಗಾಯಗಳಿಂದ ಆಸ್ಪತ್ರೆ ಸೇರಿದ್ದ 54ರ ವಯಸ್ಸಿನ ಪ್ರಾಂಶುಪಾಲರು ಚಿಕಿತ್ಸೆಯ ವೇಳೆ ತೀವ್ರ ಗಾಯದಿಂದಾಗಿ ಮೃತಪಟ್ಟಿದ್ದಾರೆ. ಆರೋಪಿ ಅಶುತೋಷ್ ಶ್ರೀವಾಸ್ತವ(24 ವರ್ಷ) 7 ನೇ ಸೆಮಿಸ್ಟರ್ನಲ್ಲಿ ಅನುತ್ತೀರ್ಣನಾಗಿರುವುದನ್ನು ನಾವು ಕಂಡುಕೊಂಡಿದ್ದೇವೆ. ನಾವು ಈಗಾಗಲೇ ಆರೋಪಿಯನ್ನು ಬಂಧಿಸಿದ್ದೇವೆ”ಎಂದು ಸುದ್ದಿ ಸಂಸ್ಥೆ ಎಎನ್ಐಗೆ ಪೊಲೀಸ್ ವರಿಷ್ಠಾಧಿಕಾರಿ (ಇಂದೋರ್ ಗ್ರಾಮಾಂತರ) ಭಗವತ್ ಸಿಂಗ್ ವಿರ್ಡೆ ತಿಳಿಸಿದ್ದಾರೆ.
ಇಂದೋರ್ ಕಲೆಕ್ಟರ್ ಇಳಯರಾಜ ಟಿ. ಹೊರಡಿಸಿದ ಆದೇಶದಂತೆ ಶ್ರೀವಾಸ್ತವ ವಿರುದ್ಧ ಕಠಿಣ ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್ಎಸ್ಎ) ಅಡಿ ಕೇಸ್ ದಾಖಲಿಸಲಾಗಿದೆ ಎಂದು ವಿರ್ಡೆ ಹೇಳಿದ್ದಾರೆ.
“ತನಿಖೆಯ ಸಮಯದಲ್ಲಿ, ಶ್ರೀವಾಸ್ತವ ವಿರುದ್ಧ ಫಾರ್ಮಸಿ ಕಾಲೇಜು ಅಧಿಕಾರಿಗಳು, ಮಹಿಳಾ ಪ್ರಾಂಶುಪಾಲರು ಹಾಗೂ ಇತರ ಸಿಬ್ಬಂದಿಯಿಂದ ಎರಡು ಮೂರು ದೂರುಗಳು ಬಂದಿವೆ ಎಂದು ನಾವು ಪತ್ತೆ ಹಚ್ಚಿದ್ದೇವೆ, ಆರೋಪಿಯು ಆತ್ಮಹತ್ಯೆ ಬೆದರಿಕೆ ಹಾಕುತ್ತಿದ್ದ ಎಂದು ಹೇಳಿದ್ದಾರೆ” ಎಂದು ವಿರ್ಡೆ ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದರು.
ಕಳೆದ ವಾರ ಮಧ್ಯಪ್ರದೇಶದ ಇಂದೋರ್ನ ಸಿಮ್ರೋಲ್ನಲ್ಲಿ ವಿಮುಕ್ತ ಶರ್ಮಾ ಮೇಲೆ ಹರಿತವಾದ ಆಯುಧದಿಂದ ಹಲ್ಲೆ ಮಾಡಿದ ನಂತರ ಶ್ರೀವಾಸ್ತವ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದ. ಇದರಿಂದ ಶರ್ಮಾ ಅವರು ಶೇಕಡ 80 ರಷ್ಟು ಸುಟ್ಟ ಗಾಯಗಳೊಂದಿಗೆ ಜೀವನ್ಮರಣ ಹೋರಾಟ ನಡೆಸುತ್ತಿದ್ದರು.