ಕಾಲೇಜು ಮುಗಿಸಿ ಮನೆಗೆ ತೆರಳುತ್ತಿದ್ದ ಯುವತಿಯನ್ನು ಬೈಕಿನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಕತ್ತು ಸೀಳಿ ಹತ್ಯೆ ಮಾಡಿರುವ ಘಟನೆ ಸಿಲಿಕಾನ್ ಸಿಟಿ ರಾಜಾನುಕುಂಟೆ ಸಮೀಪದ ಶಾನುಭೋಗನಹಳ್ಳಿ ಮಂಗಳವಾರ ಸಂಜೆ ನಡೆದಿದೆ.
ಶಾನುಭೋಗನಹಳ್ಳಿ ಗ್ರಾಮದ ರಾಶಿ (20) ಹತ್ಯೆಗೀಡಾದವರು. ಮಂಗಳವಾರ ಸಂಜೆ 5 ಗಂಟೆ ಸುಮಾರಿಗೆ ಕಾಲೇಜು ಮುಗಿಸಿ ದಿಬ್ಬೂರು ಗೇಟಿನಲ್ಲಿ ಬಸ್ ಇಳಿದಿದ್ದಾರೆ. ಅಲ್ಲಿಂದ ಶಾನುಭೋಗನಹಳ್ಳಿಗೆ ನಡೆದು ಹೋಗುವಾಗ ಬೈಕಿನಲ್ಲಿ ಬಂದ ಇಬ್ಬರು ಯುವತಿಯ ಕತ್ತುಸೀಳಿ ಹತ್ಯೆ ಮಾಡಿ ಪರಾರಿಯಾಗಿದ್ದಾರೆ.
ಹತ್ಯೆಗೀಡಾದ ಯುವತಿ ಯಲಹಂಕದ ಕಾಲೇಜು ಒಂದರಲ್ಲಿ ಪ್ರಥಮ ಬಿ.ಎ.ವ್ಯಾಸಂಗ ಮಾಡುತ್ತಿದ್ದರು. ಪ್ರೀತಿ ನಿರಾಕರಿಸಿದ ಶಂಕೆ ಹಿನ್ನೆಲೆಯಲ್ಲಿ ಯುವತಿಯನ್ನು ಹತ್ಯೆ ಮಾಡಲಾಗಿದೆ ಎನ್ನಲಾಗಿದೆ.
ಸ್ಥಳಕ್ಕೆ ರಾಜಾನುಕುಂಟೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಗಳಿಗಾಗಿ ಪೊಲೀಸರು ಶೋಧ ಆರಂಭಿಸಿದ್ದಾರೆ.