ಪತಿ ಪೊಲೀಸ್​ ಅಧಿಕಾರಿಯ ನೀಚ ಕೃತ್ಯಕ್ಕೆ ಬೇಸತ್ತು ಮಕ್ಕಳನ್ನು ಕೊಂದು ತಾನೂ ಶವವಾದ ಪತ್ನಿ

ಪತ್ನಿ ಮತ್ತು ಇಬ್ಬರು ಮಕ್ಕಳು ಸಾವಿನ ಪ್ರಕರಣದಲ್ಲಿ ಪೊಲೀಸ್​ ಅಧಿಕಾರಿಯೊಬ್ಬರನ್ನು ಬಂಧಿಸಿರುವ ಘಟನೆ ಕೇರಳದ ಆಲಪ್ಪುಳದಲ್ಲಿ ನಡೆದಿದೆ. ಆತ್ಮಹತ್ಯೆಗೆ ಪ್ರಚೋದನೆ ಮತ್ತು ವರದಕ್ಷಿಣೆ ನಿಷೇಧ ಕಾಯ್ದೆ ಅಡಿಯಲ್ಲಿ ಅಂಬಾಲಪುಳ ಠಾಣೆಯ ಸಿವಿಲ್​ ಪೊಲೀಸ್​ ಅಧಿಕಾರಿಯನ್ನು ಬಂಧಿಸಲಾಗಿದೆ.

ಪೊಲೀಸ್ ಅಧಿಕಾರಿಯ ಪತ್ನಿ ನಜ್ಲಾ (27) ಹಾಗೂ ಮಕ್ಕಳಾದ ಟಿಪ್ಪು ಸುಲ್ತಾನ್​ (5) ಮತ್ತು ಮಲಾಲ (1) ಆಲಪ್ಪುಳದ ಎ.ಆರ್​. ಕ್ಯಾಂಪ್​ ಬಳಿಯಿರುವ ಪೊಲೀಸ್​ ಕ್ವಾಟ್ರಸ್​ನಲ್ಲಿ ಶವವಾಗಿ ಪತ್ತೆಯಾಗಿದ್ದರು.

ನಜ್ಲಾ ಅವರ ಸಹೋದರಿ ನಫ್ಲಾ ಹೇಳುವ ಪ್ರಕಾರ, ಆರೋಪಿ ರೆನೀಜ್​ಗೆ ಮತ್ತೊಂದು ಮಹಿಳೆಯ ಜತೆ ಸಂಬಂಧವಿತ್ತು. ಈ ಬಗ್ಗೆ ಪತ್ನಿ ನಜ್ಲಾ ಪ್ರಶ್ನಿಸಿದ್ದಕ್ಕೆ ಆಕೆಗೆ ಕಿರುಕುಳ ನೀಡುತ್ತಿದ್ದ. ಸಂಬಂಧ ಹೊಂದಿದ್ದ ಮಹಿಳೆಯಿಂದ ರೆನೀಜ್​ ಸ್ವೀಕರಿಸುತ್ತಿದ್ದ ಮಸೇಜ್​ಗಳ ಬಗ್ಗೆಯು ನಜ್ಲಾ ತನ್ನ ಪತಿಯ ಬಳಿ ಆಗಾಗ ಪ್ರಶ್ನಿಸುತ್ತಿದ್ದಳು. ಇದೇ ವಿಚಾರಕ್ಕೆ ದಂಪತಿ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಇದರಿಂದ ಮನನೊಂದು ಮಕ್ಕಳನ್ನು ಕೊಂದು ಆತ್ಮಹತ್ಯೆ ಹಾದಿ ಹಿಡಿದಿದ್ದಾಳೆ. ನನ್ನ ಸಹೋದರಿ ಮತ್ತು ಮಕ್ಕಳ ಸಾವಿಗೆ ರೆನೀಜ್ ಕಾರಣ ಎಂದು ನಫ್ಲಾ ಆರೋಪಿಸಿದ್ದಾರೆ.

ರೆನೀಜ್ ಸ್ವೀಕರಿಸುತ್ತಿದ್ದ ಫೋನ್ ಕರೆಗಳಿಗೆ ಸಂಬಂಧಿಸಿದಂತೆ ದಂಪತಿ ನಡುವೆ ಆಗಾಗ ಜಗಳ ನಡೆಯುತ್ತಿತ್ತು ಎಂದು ನೆರೆಹೊರೆಯವರು ಸಹ ಹೇಳಿದ್ದಾರೆ.

ಆರೋಪಿ ರೆನೀಜ್ ವಂದನಂನ ಸರ್ಕಾರಿ ಟಿಡಿ ವೈದ್ಯಕೀಯ ಕಾಲೇಜಿನ ಪೊಲೀಸ್ ಸಹಾಯ ಪೋಸ್ಟ್‌ನಲ್ಲಿ ಕರ್ತವ್ಯ ಮುಗಿಸಿ ಮನೆಗೆ ಹಿಂತಿರುಗಿದಾಗ ಪತ್ನಿ ನಜ್ಲಾ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದಳು. ಮಕ್ಕಳಾದ ಟಿಪ್ಪು ಮತ್ತು ಮಲಾಲ ನೆಲದ ಮೇಲೆ ಬಿದ್ದಿದ್ದರು. ನಜ್ಲಾ ನೇಣು ಬಿಗಿದುಕೊಳ್ಳುವ ಮುನ್ನ ಮಕ್ಕಳಿಬ್ಬರನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.

ಮಗನನ್ನು ಕತ್ತು ಹಿಸುಕಿ ಕೊಂದಿದ್ದರೆ, ಮಗಳನ್ನು ಬಕೆಟ್ ನೀರಿನಲ್ಲಿ ಮುಖ ಮುಳುಗಿಸಿ ಕೊಂದಿದ್ದಾಳೆ ಎಂದು ಪೊಲೀಸರು ಬಹಿರಂಗಪಡಿಸಿದ್ದಾರೆ. ಪ್ರಕರಣ ಸಂಬಂಧ ರೆನೀಜ್​ನನ್ನು ಪೊಲೀಸರು ಬಂಧಿಸಿದ್ದು, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

 
 
 
 
 
 
 
 
 
 
 

Leave a Reply