ನವದೆಹಲಿ: ಮಹಾಮಾರಿ ಕರೊನಾ ಸೊಂಕಿನ ಹಿನ್ನೆಲೆ ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. ಆದರೆ ಅದೆಷ್ಟೋ ಜನರು ಅದರತ್ತ ಗಮನ ಕೊಡದಿರುವ ಕಾರಣಕ್ಕೆ ದಂಡದ ಮೊತ್ತವನ್ನು ಒಂದು ಸಾವಿರ ರೂಪಾಯಿಗೆ ಏರಿಸಿಲಾಗಿದೆ. ಈ ಹಿಂದೆ ದಂಡದ ಮೊತ್ತ 500 ರೂಪಾಯಿ ಇದ್ದ ವೇಳೆಯಲ್ಲಿ ನಡೆದ ಘಟನೆಯೊಂದು ಇದೀಗ ಕೋರ್ಟ್ ಮೆಟ್ಟಿಲೇರಿದ್ದು ಕೂತೂಹಲ ಮೂಡಿಸಿದೆ.
ಸರ್ಕಾರ ಮಾಸ್ಕ್ ಧರಿಸಲಿರುವ ಕೆಲವೊಂದು ನಿಯಮಗಳನ್ನು ಬದಲಾಯಿಸಿದೆ. ಕಾರಿನಲ್ಲಿ ಒಂಟಿಯಾಗಿ ಹೋಗುತ್ತಿದ್ದರೆ ಮಾಸ್ಕ್ ಧರಿಸುವ ಅಗತ್ಯವಿಲ್ಲ ಎಂದಿದೆ. ಆದರೆ ಒಬ್ಬರಿಗಿಂತ ಹೆಚ್ಚಿದ್ದರೆ ಮಾಸ್ಕ್ ಧರಿಸುವುದು ಕಡ್ಡಾಯ ಇಲ್ಲದಿದ್ದರೆ ದಂಡ ಕಟ್ಟಬೇಕು. ದೆಹಲಿ ಹೈಕೋರ್ಟ್ನ ಸೌರಭ್ ಶರ್ಮ ಎನ್ನುವ ಹಿರಿಯ ವಕೀಲರು ಕಾರಿನಲ್ಲಿ ಒಬ್ಬರೇ ಹೋಗುತ್ತಿದ್ದಾಗ ನಿಯಮಯದಂತೆ ಮಾಸ್ಕ್ ಧರಿಸಿರಲಿಲ್ಲ.
ಆದರೆ ಪೋಲಿಸರು ಅವರು ಕಾರನ್ನು ನಿಲ್ಲಿಸಿದ್ದಾರೆ. ಆ ಪೊಲೀಸರು ಸರಿಯಾಗಿ ನಿಯಮ ತಿಳಿದೋ, ತಿಳಿಯದೆಯೋ ಒಟ್ಟಿನಲ್ಲಿ ವಕೀಲರನ್ನೆ ಅಡ್ಡಗಟ್ಟಿದ್ದರು. ಇನ್ನು ಇವರು ಕಾರಣ ಕೇಳಿದಾಗ, ಮಾಸ್ಕ್ ಹಾಕದ ಹಿನ್ನೆಲೆ, 500 ರೂಪಾಯಿ ದಂಡ ನೀಡುವಂತೆ ಪೊಲೀಸ್ ಹೇಳಿದ್ದಾರೆ. ಇದರಿಂದ ಕೋಪಗೊಂಡ ವಕೀಲರು ನಿಯಮಗಳನ್ನು ಪೊಲೀಸರಿಗೆ ಹೇಳಿದ್ದಾರೆ. ತಾವು ವಕೀಲರಾಗಿದ್ದು, ಎಲ್ಲಾ ನಿಯಮಗಳ ಪಾಲನೆ ಮಾಡಿರುವುದಾಗಿಯೂ ಹೇಳಿದ್ದಾರೆ.
ಆದರೆ ಆ ಪೊಲೀಸ್ ಮಾತ್ರ ಪಟ್ಟು ಬಿಡದೆ, ಅದೆಲ್ಲಾ ಗೊತ್ತಿಲ್ಲ, ಏನಾದರೂ ಮಾಡಿಕೊಳ್ಳಿ. ಈಗ 500 ರೂಪಾಯಿ ದಂಡ ಕಟ್ಟಿ ಎಂದಿದ್ದು, ಸಿಟ್ಟಿನಿಂದ ವಕೀಲರು ದಂಡ ಕಟ್ಟಿದ್ದಾರೆ. ಆದರೆ ವಕೀಲರು ಸುಮ್ಮನೆ ಬಿಡುವುದುಂಟೆ. ಅಂತೆಯೇ ಇದೀಗ ಹೈಕೋರ್ಟ್ಗೆ ಈ ದಂಡದ ವಿರುದ್ಧ ಅರ್ಜಿ ಹಾಕಿದ್ದಾರೆ. ನಿಯಮ ಪಾಲನೆ ಮಾಡಿದರೂ ಪೊಲೀಸ್ ಅಧಿಕಾರಿ ತಮ್ಮ ವಿರುದ್ಧ ನಡೆದುಕೊಂಡಿರುವ ರೀತಿಯ ಕುರಿತು ಅರ್ಜಿಯಲ್ಲಿ ಬರೆದಿರುವ ಸೌರಭ್ ಅವರು, ತಮಗಾಗಿರುವ ಮಾನಸಿಕ ಹಿಂಸೆಯ ಕುರಿತು ಹೇಳಿದ್ದಾರೆ.
ಇಷ್ಪೇ ಅಲ್ಲದೆ 500 ರೂಪಾಯಿ ದಂಡದ ಹಣವನ್ನು ವಾಪಸ್ ನೀಡುವಂತೆ ಮತ್ತು ತಮಗಾಗಿರುವ ಅನ್ಯಾಯಕ್ಕೆ 10 ಲಕ್ಷ ರೂಪಾಯಿ ಪರಿಹಾರವನ್ನು ನೀಡಲು ಪೊಲೀಸರಿಗೆ ಆದೇಶಿಸುವಂತೆ ಅರ್ಜಿಯಲ್ಲಿ ವಿನಂತಿಸಿದ್ದಾರೆ. ಸದ್ಯ ದಂಡ ವಿಧಿಸಿದ ಪೋಲಿಸರು ಮುಜುಗರಕ್ಕೆ ಒಳಗಾಗಿದ್ದು, ಇದೀಗ ಕೋರ್ಟ್ ನ ಆದೇಶದತ್ತ ಎಲ್ಲರ ಚಿತ್ತ ನೆಟ್ಟಿದೆ.