ಬೈಕ್ ವ್ಹೀಲಿಂಗ್ ಹುಚ್ಚಾಟಕ್ಕೆ ಅಪಘಾತ: ಯುವತಿಯರ ಸ್ಥಿತಿ ಗಂಭೀರ

ವ್ಹೀಲಿಂಗ್ ಮಾಡಬೇಡಿ ಎಂದು ಎಷ್ಟು ಹೇಳಿದ್ರೂ ಕೇಳದೆ ಪುಂಡರು ಇದನ್ನು ಲೆಕ್ಕಿಸುವುದೇ ಇಲ್ಲ. ಇಂತಹ ಅವಿವೇಕಿಗಳಿಂದ ಅಮಾಯಕರ ಪ್ರಾಣಕ್ಕೆ ಸಂಚಕಾರ ತಂದಿದೆ. ಇದೇ ರೀತಿ ಹಾಸನ ನಗರದಲ್ಲಿ ಬೈಕ್ ವ್ಹೀಲಿಂಗ್ ಹುಚ್ಚಾಟಕ್ಕೆ ಭೀಕರ ಅಪಘಾತ ಸಂಭವಿಸಿದೆ. ಪುಂಡರ ಅಟ್ಟಹಾಸಕ್ಕೆ ಅಮಾಯಕ ಯುವತಿಯರು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿರುವ ಘಟನೆ ನಡೆದಿದೆ.

ಪುಂಡರು ಬೈಕ್ ನಲ್ಲಿ ವ್ಹೀಲಿಂಗ್ ಮಾಡುತ್ತಿದ್ದ ವೇಳೆ ಯುವತಿಯರಿಗೆ ಡಿಕ್ಕಿ ಹೊಡೆದಿದ್ದಾರೆ. ಇದರಿಂದ ಇಬ್ಬರು ಯುವತಿಯರಿಗೆ ಗಂಭೀರ ಗಾಯವಾಗಿದೆ. ಭೂಮಿಕಾ, ಸಿಂಚನ ಎಂಬ ಯುವತಿಯರಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಾಸನ ನಗರದ ಸಾಲಗಾಮೆ ರಸ್ತೆಯ ಸಹ್ಯಾದ್ರಿ ಚಿತ್ರಮಂದಿರ ಬಳಿ ಘಟನೆ ನಡೆದಿದೆ.

ಬುಧವಾರ ರಾತ್ರಿ ಸಾಲಗಾಮೆ ರಸ್ತೆಯ ಫುಡ್ ಕೋರ್ಟ್ ನಲ್ಲಿ ಊಟ ಮುಗಿಸಿ ಭೂಮಿಕಾ, ಸಿಂಚನ ಎಂಬ ಯುವತಿಯರು ಹೊರಟಿದ್ದರು. ಈ ವೇಳೆ ಜನನಿಬಿಡ ಪ್ರದೇಶದಲ್ಲಿ ವ್ಹೀಲಿಂಗ್ ಮಾಡಿಕೊಂಡು ಬಂದು ಭೂಮಿಕಾ ಹಾಗೂ ಸಿಂಚನಗೆ ಪುಂಡರು ಡಿಕ್ಕಿ ಹೊಡೆದಿದ್ದಾರೆ. ಇದರಿಂದ ಭೂಮಿಕಾ ತಲೆಗೆ ಬಲವಾದ ಪೆಟ್ಟು ಬಿದ್ದ ಹಿನ್ನೆಲೆಯಲ್ಲಿ ಆಕೆಯನ್ನು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.

ಇನ್ನು ವ್ಹೀಲಿಂಗ್ ಮಾಡಿಕೊಂಡು ಬಂದು ಇಬ್ಬರು ಯುವತಿಯರಿಗೆ ಗಂಭೀರ ಗಾಯಗೊಳ್ಳಲು ಕಾರಣರಾದ ಶಾಕೀರ್ ಹಾಗೂ ಅಪ್ರಾಪ್ತನಿಗೆ ಸಾರ್ವಜನಿಕರು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಜನರು ಪುಂಡರಿಬ್ಬರ ಬಟ್ಟೆ ಬಚ್ಚಿ ಗೂಸಾ ಕೊಟ್ಟು ಪೊಲೀಸರಿಗೆ ಒಪ್ಪಿಸಿದ್ದಾರೆ.

ವ್ಹೀಲಿಂಗ್ ಮಾಡಿ ಅಪಘಾತ ಮಾಡಿದ ಶಾಕೀರ್ ಹಾಗೂ ಅಪ್ರಾಪ್ತ ಬಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಾಸನ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಹಾಸನ ನಗರದಲ್ಲಿ ವ್ಹೀಲಿಂಗ್ ಪುಂಡರ ಹಾವಳಿ ಮಿತಿಮೀರಿದ್ದು, ಇದಕ್ಕೆ ಕಡಿವಾಣ ಹಾಕುವಂತೆ ಪೊಲೀಸರಿಗೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

 
 
 
 
 
 
 
 
 
 
 

Leave a Reply