ಉಡುಪಿಯ ಡಾ ಟಿಎಂಎ ಪೈ ಶಿಕ್ಷಣ ಕಾಲೇಜಿನಲ್ಲಿ ಎರಡನೆಯ ಸೆಮೆಸ್ಟರ್ ನ ಕನ್ನಡ ಬೋಧನ ವಿಧಾನಶಾಸ್ತ್ರದ ವಿದ್ಯಾರ್ಥಿ- ಶಿಕ್ಷಕರು ಈಚೆಗೆ ಕನ್ನಡ ನಾಡುನುಡಿ ಕುರಿತಾದ ಕಾರ್ಯಕ್ರಮ ಏರ್ಪಡಿಸಿದ್ದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಾ ಮಹಾಬಲೇಶ್ವರ ರಾವ್ ಮಾತನಾಡುತ್ತಾ ” “ನುಡಿಯೊಲವು,ನಾಡೊಲವು ತಲೆಗೇರಿದ ಅಫೀಮಲ್ಲ. ಹಾಗಾಗಕೂಡದು. ಹಿಡಿದ ಬಾವುಟ,ಕೊರಳಿಗೇರಿದ ಶಾಲು ಮತ್ತು ಜಯಕಾರದಿಂದ ಕನ್ನಡದ ಅಭಿವೃದ್ಧಿಯಾಗದು.ಅದು ಹುಸಿಪ್ರೇಮ. ಕನ್ನಡದ ಅಭಿಮಾನವೆಂದರೆ ಕನ್ನಡ ನೆಲ,ಜಲ, ಜನ, ನಾಡು,ನುಡಿಯ ಚಿಂತನೆ. ಎಲ್ಲ ನಿತ್ಯವ್ಯವಹಾರಗಳಲ್ಲಿ ಕನ್ನಡತನ ಮೈಗೂಡಿಸಿಕೊಂಡ ಸಹಿಷ್ಣುತೆಯ ನಡವಳಿಕೆ.ಕನ್ನಡವನ್ನು ಹೆಚ್ಚುಹೆಚ್ಚು ಬಳಸುತ್ತ ಬೆಳೆಸಬೇಕು” ಎಂದು ನುಡಿದರು.ವಿದ್ಯಾರ್ಥಿ- ಶಿಕ್ಷಕರು ಕನ್ನಡಗೀತೆಗಳನ್ನು ಹಾಡಿ ಕುಣಿದರು.ವ್ಯಾಕರಣದ ಬಗ್ಗೆ ಮತ್ತು ಕಾರಂತರ ‘ ಮೂಕಜ್ಜಿಯ ಕನಸುಗಳು’ ಕಾದಂಬರಿ ಬಗ್ಗೆ ಕಿರು ರೂಪಕಗಳನ್ನು ಪ್ರಸ್ತುತ ಪಡಿಸಿದರು.ಸ್ವರಚಿತ ಕವನ ವಾಚನ,ಗಮಕವಾಚನ ಮತ್ತು ಕನ್ನಡ ಸಾಹಿತ್ಯ ನಡೆದು ಬಂದ ದಾರಿಯ ಬಗ್ಗೆ ಪ್ರಬಂಧ ಮಂಡನೆ ಮಾಡಿದರು. ಕುಮಾರಿ ಶ್ವೇತಾ ಸ್ವಾಗತ ಕೋರಿದರೆ ಶ್ರೀ ಮತಿ ಲಾವಣ್ಯ ಧನ್ಯವಾದ ಸಮರ್ಪಿಸಿದರು. ಶ್ರೀ ಸುಮಂತ್ ಪೂಜಾರಿ ಕಾರ್ಯಕ್ರಮ ನಿರೂಪಣೆ ಮಾಡಿದರು.