ಮಲ್ಪೆ : ಕಡಲ ತೀರದಲ್ಲಿ ಆಡುತ್ತಿದ್ದ ವೇಳೆ ನೀರಿನಲ್ಲಿ ಮುಳುಗಿ ಯುವಕನೋರ್ವ ಮೃತಪಟ್ಟ ಘಟನೆ ನಡೆದಿದೆ.
ಅತ್ತರ್ (23) ಮೃತಪಟ್ಟ ಯುವಕ. ಅ.3 ರಂದು ತುಮಕೂರು ಜಿಲ್ಲೆಯ ಸ್ನೇಹಿತರಾದ ಖಾಯಿ, ಸಲ್ಮಾನ್,ಇಲಿಯಾಜ್, ಸಾಧಿಕ್, ಸಲೀಂ, ಅರ್ಬಾಸ್, ಅತ್ತರ್, ಸುಹೇಲ್ ಸೇರಿ 8 ಜನ ಸ್ನೇಹಿತರ ತಂಡವೊಂದು ಕರಾವಳಿ ಪ್ರವಾಸಕ್ಕೆ ಬಂದಿತ್ತು.
ಅ.4 ರಂದು ಮಂಗಳೂರಿನಲ್ಲಿ ಉಳಿದುಕೊಂಡಿದ್ದ ಸ್ನೇಹಿತರು, ಅ.5 ರಂದು ಮಧ್ಯಾಹ್ನದ ವೇಳೆಗೆ ಮಲ್ಪೆ ಬೀಚ್ ಗೆ ಬಂದಿದ್ದರು. ಈ ವೇಳೆ ಸಲೀಂ, ಸಲ್ಮಾನ್, ಇಲಿಯಾಸ್, ಅರ್ಬಾಸ್, ಅತ್ತರ್, ಸುಹೇಲ್ ಇವರು ಸಮುದ್ರ ನೀರಿನಲ್ಲಿ ಆಟ ಆಡಲು ಸಮುದ್ರಕ್ಕೆ ಇಳಿದಿದ್ದರು.
ಸಮುದ್ರದ ಅಲೆಗಳ ಅಬ್ಬರಕ್ಕೆ ಸಲ್ಮಾನ್,ಅರ್ಬಾಸ್, ಅತ್ತರ್ ನೀರಿನಲ್ಲಿ ಮುಳುಗಿದ್ದರು. ಈ ಪೈಕಿ ಸಲ್ಮಾನ್ ಮತ್ತು ಅರ್ಬಾಸ್ ನನ್ನು ಮಲ್ಪೆ ಬೀಚ್ ನ ಟೂರಿಸ್ಟ್ ಬೋಟ್ ನವರು ರಕ್ಷಣೆ ಮಾಡಿದ್ದರು. ಆದರೆ ಅತ್ತರ್ ನೀರಿನಲ್ಲಿ ಮುಳುಗಿ ಕಾಣೆಯಾಗಿದ್ದರು.
ಬಳಿಕ ಮಧ್ಯಾಹ್ನ 3 ಗಂಟೆಗೆ ಅತ್ತರ್ ಮೃತದೇಹ ನೀರಿನಲ್ಲಿ ದೊರಕಿದ್ದು, ಅತ್ತರ್ ಅವರು ಬೀಚ್ ನಲ್ಲಿ ಆಟವಾಡುತ್ತಿರುವಾಗ ನೀರಿನ ಅಬ್ಬರಕ್ಕೆ ಸಿಲುಕಿ ಕೊಚ್ಚಿಕೊಂಡು ಹೋಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿರುವುದಾಗಿ ಖಾಯಿ ಅವರು ನೀಡಿದ ದೂರಿನಂತೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.