ಕೊಡವೂರು ಕಲ್ಮತ್ ಮಸೀದಿ ಜಾಗ ಮರು ನೋಂದಾಯಿಸುವಂತೆ ಜಿಲ್ಲಾ ಮುಸ್ಲಿಂ ಒಕ್ಕೂಟ ಆಗ್ರಹ

ಉಡುಪಿ: ಕೊಡವೂರಿನ ಕಲಮತ್ ಜಾಮೀಯಾ ಜುಮ್ಮಾ ಮಸೀದಿಯ ವಿಚಾರದಲ್ಲಿ ಜಿಲ್ಲಾಧಿಕಾರಿ, ಶಾಸಕರು ಮತ್ತು ಕಂದಾಯ ಸಚಿವರು ಸೇರಿ ಪಹಣೆ ಪತ್ರದಲ್ಲಿ ಬಲವಂತವಾಗಿ ನಿಯಮಗಳನ್ನು ಪಾಲಿಸದೆ ಸರಕಾರದ ಹೆಸರನ್ನು ನೊಂದಾಯಿಸಿದ್ದಾರೆ ಎಂದು ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟ ಆರೋಪಿಸಿದೆ.

ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಹುಸೇನ್ ಕೋಡಿಬೆಂಗ್ರೆ ಮಾತನಾಡಿ ಉಡುಪಿ ತಾಲೂಕು ಕೊಡವೂರು ಗ್ರಾಮದ ಸರ್ವೆ ನಂಬರ್ 53 A ರಲ್ಲಿ 67 ಸೆಂಟ್ಸ್ ವಿಸ್ತೀರ್ಣ ಜಾಮೀನಿನಲ್ಲಿ ಸುಮಾರು ನೂರೈವತ್ತು ವರ್ಷ ಹಿಂದಿನಿಂದಲೂ ಕಲಮತ್ ಜಾಮೀಯಾ ಜುಮ್ಮಾ ಮಸೀದಿ ಅಸ್ತಿತ್ವದಲ್ಲಿದ್ದು ಇದಕ್ಕೆ ಸ್ವತಂತ್ರಪೂರ್ವ ಕಾಲದಿಂದಲೂ ಅದರ ಕಾರ್ಯ ನಿರ್ವಹಣೆಗಾಗಿ ಸರಕಾರದಿಂದ ನಿರಂತರ ತಸ್ದಿಕ್ ಬರುತ್ತಿದೆ. ಸದ್ರಿ ಜುಮ್ಮಾ ಮಸೀದಿಯು ಮತ್ತು ಅದರ ಆಸ್ತಿಯು ವಕ್ಫ್ ಬೋರ್ಡಿನಲ್ಲಿ 1993 ರಲ್ಲಿ ನೋಂದವಣೆಯಾಗಿದ್ದು,2020 ರಲ್ಲಿ ಎಲ್ಲ ಕಾನೂನು ಪ್ರಕ್ರಿಯೆಗಳು ನಡೆದು ಅದಕ್ಕೆ ಬೇಕಾದಂತಹ ದಾಖಲೆಗಳ ಧೃಡೀಕರಣದ ನಂತರ ಗಝೆಟ್ ನೋಟಿಫಿಕೇಷನ್ ಆಗಿರುತ್ತದೆ ಎಂದರು.

ಕಾನೂನು ಬದ್ಧವಾಗಿ ವಕ್ಪ್ ನಲ್ಲಿ ನೊಂದವಣೆ ಹಾಗೂ ಗಝೆಟ್ ನೋಟಿಫಿಕೇಷನ್ ಆದ ಕಲಮತ್ ಜಮ್ಮಾ ಮಸೀದಿಯ ಸ್ಥಿರಾಸ್ತಿಯ ಪಹಣಿ ಪತ್ರದಲ್ಲಿ ಕಾನೂನು ಬಾಹಿರವಾಗಿ ಕಲಮತ್ ಮಸೀದಿಯ ಹೆಸರನ್ನು ಎಲ್ಲ ನಿಯಮಗಳನ್ನು ಉಲ್ಲಂಘಿಸಿ ಕಂದಾಯ ಸಚಿವ ಆರ್ ಅಶೋಕ್ ಅವರ ಆದೇಶದೊಂದಿಗೆ ಸರಕಾರದ ಹೆಸರನ್ನು ನಮೊದಿಸಲಾಗಿದೆ.ಆದ್ದರಿಂದ ಈ ಕಾನೂನು ಬಾಹಿರವಾಗಿ ತೆರವುಗೊಳಿಸಲು ಆದೇಶಿಸಿದ ಆದೇಶವನ್ನು ಹಿಂಪಡೆಯಬೇಕು ಹಾಗೂ ಈ ಮುಂಚಿನಂತೆ ಪಹಣಿ ಪತ್ರದಲ್ಲಿ ಮಸೀದಿಯ ಹೆಸರನ್ನು ಮರು ನೊಂದಾಯಿಸಿ ಸರಕಾರ ನ್ಯಾಯಯುತವಾಗಿ ವರ್ತಿಸಬೇಕೆಂದು ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟ ಆಗ್ರಹಿಸುತ್ತದೆ ಎಂದು ಹೇಳಿದರು.

ಕಲಮತ್ ಜಾಮೀಯಾ ಮಸೀದಿಯ ಅಸ್ತಿತ್ವದ ವಾಸ್ತವಿಕಾಂಶಗಳು:

• ಈ ಮಸೀದಿಯಲ್ಲಿ ಸ್ವತಂತ್ರ ಪೂರ್ವದಿಂದಲೂ ನಮಾಝ್ ನಿರ್ವಹಣೆ ನಡೆಯುತ್ತಿದೆ.

• ಸ್ವತಂತ್ರ ಪೂರ್ವದಿಂದಲೂ ಈ ಮಸೀದಿಯ ನಿರಂತರ ಕಾರ್ಯನಿರ್ವಹಣೆಗಾಗಿ ತಸ್ಧಿಕ್ ಬರುತ್ತಿದೆ.

• ಈ ಮಸೀದಿಯ ಜಾಮೀನಿನ ಹತ್ತಿರ ಪುರಾತನ ಕಬರಸ್ಥಾನವೂ ಇದ್ದು ಅದು ಈಗ ವಾರೀಜ ಪೂಜಾರಿಯವರು ಅತಿಕ್ರಮಿಸಿ ಅವರ ಅಧೀನದಲ್ಲಿದೆ.ಇದರ ಸುತ್ತಲಿನ ಸುಮಾರು 10 ಎಕರೆ ಕ್ಕಿಂತಲೂ ಹೆಚ್ಚಿನ ಭೂಮಿಯು ಅಡಂಗಲ್ ನ ಆಧಾರದಲ್ಲಿ ಸರಕಾರವೆಂದು ನಮೊದಿಸಿರುವುದು ಕಂಡು ಬರುತ್ತದೆ . 

• ಈ ಎಲ್ಲಾ ಜಾಮೀನು ಮಸೀದಿಗೆ ಸಂಬಂಧಪಟ್ಟ ಆಸ್ತಿಯಾಗಿದ್ದು ಇದಕ್ಕೆ ಇದಕ್ಕೆ ಸಾಕ್ಷಿಯಾಗಿ ಈ ಎಲ್ಲಾ ಆಸ್ತಿಯ ಮಧ್ಯೆ ಭಾಗದಲ್ಲಿ ಮಸೀದಿ ಅಸ್ತಿತ್ವದಲ್ಲಿತ್ತು. ಸ್ವತಂತ್ರ ಪೂರ್ವದಲ್ಲಿ ವಕ್ಫ್ ಆಸ್ತಿ ಎಲ್ಲವೂ ಕೂಡ ಸರಕಾರ ಎಂಬುದಾಗಿ ನಮೊದಿಸಲ್ಪಡುತ್ತಿತ್ತು. ಅದರಂತೆ ಈ ಎಲ್ಲಾ ಆಸ್ತಿಯು ಕಲಮತ್ ಜಾಮೀಯಾ ಜುಮ್ಮಾ ಮಸೀದಿಯ ಆಸ್ತಿಯಾಗಿದೆ.

• ಇತ್ತೀಚಿನ ಕೆಲವು ವರ್ಷಗಳಿಂದ ಕೊಡವೂರು ಗ್ರಾಮದ ಪಳ್ಳಿಜಿಡ್ಡ ವಾಠರದಲ್ಲಿರುವ ಕೆಟಿ ಪೂಜಾರಿ ಹಾಗೂ ಅವರ ಸಹವಮಚರರು ತಮ್ಮ ಸ್ವಾರ್ಥ ಸಾಧನೆಗಾಗಿ ಹಾಗೂ ವಠಾರದಲ್ಲಿ ಕೋಮು ವೈಷಮ್ಯ ಹರಡಿ ಶಾಂತಿ ಕದಲಿಸುವ ದುರುದ್ದೇಶದಿಂದ ಸದ್ರಿ ಕಲಮತ್ ಜಾಮೀಯಾ ಜುಮ್ಮಾ ಮಸೀದಿಯ ಜಮೀನಿನ ಮೇಲೆ ಓಎಸ್ ನಂಬರ್ 61/2000 ರಂತೆ ನ್ಯಾಯಾಲಯದಲ್ಲಿ ದಾವೆಯನ್ನು ಹೂಡಲಾಗಿತ್ತು. ಆದರೆ ಸದ್ರಿ ದಾವೆಯು ಕೆಳ ನ್ಯಾಯಾಲಯದಲ್ಲಿ ಡಿಕ್ರಿ ಮಾಡಿದ್ದರೂ ಮೇಲ್ಮನವಿ ನ್ಯಾಯಾಲಯ ಆರ್.ಎ ನಂಬರ್ 10/2008 ಹಾಗೂ ಆರ್.ಎ ನಂಬರ್ 18/2008 ರಲ್ಲಿ ಸಮಗ್ರ ತನಿಖೆ ಮಾಡಿ ಕೆಳ ನ್ಯಾಯಾಲಯದ ತೀರ್ಪನ್ನು ಸಂಪೂರ್ಣವಾಗಿ ರದ್ದು ಮಾಡಿರುತ್ತದೆ.

• ಮೇಲ್ಮನವಿ ನ್ಯಾಯಾಲಯವು ತನ್ನ ತೀರ್ಪಿನಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯದಂತೆ ಕಲ್ಮತ್ ಮಸೀದಿ ಆಡಳಿತ ಮಂಡಳಿಯು ವಕ್ಫ್ ಟ್ರಿಬ್ಯುನಲ್ ನಲ್ಲಿ ದಾವೆ ಸಂಖ್ಯೆ 05/2017 ರಂತೆ ಪ್ರಕರಣವನ್ನು ದಾಖಲಿಸಿ ಸೂಕ್ತ ನ್ಯಾಯವನ್ನು ಕೋರಿಕೊಂಡಿರುತ್ತಾರೆ. ಈ ಮಧ್ಯೆ ವಕ್ಫ್ ಟ್ರಿಬ್ಯುನಲ್ ಮಧ್ಯಾವಧಿ ಆದೇಶದಂತೆ, ಪ್ರತಿವಾದಿಯ ಮನವಿಯಂತೆ ಕುಮ್ಕಿ ಹಕ್ಕಿನ ಬಗ್ಗೆ ಪ್ರತಿಕ್ರಿಯಿಸಿ ಸದ್ರಿ ಸ್ಥಿರಾಸ್ತಿ ಪ್ರದೇಶದ ಹತ್ತಿರ ಯಾವುದೇ ರೀತಿಯ ಕುಮ್ಕಿ ಜಮೀನಿನ ಹಕ್ಕು ಇರುವುದಿಲ್ಲ. ಈ ಕುರಿತು ಕಾರಣ ನೀಡಿರುವ ವಕ್ಫ್ ಟ್ರಿಬ್ಯುನಲ್ ನೂರು ಯಾರ್ಡ್ ವ್ಯಾಪ್ತಿಯಲ್ಲಿ ಕೃಷಿ ಭೂಮಿ ಹೊಂದಿರದಿದ್ದರೆ ಅಲ್ಲಿ ಕುಮ್ಕಿ ಜಾಮೀನು ಹೊಂದಿರಲು ಸಾಧ್ಯವಿಲ್ಲವೆಂದು ಅಭಿಪ್ರಾಯಪಟ್ಟಿದೆ.

• ಕರ್ನಾಟಕ ವಕ್ಫ್ ಬೋರ್ಡ್ ನಲ್ಲಿ 1993ರಲ್ಲಿ ನೋಂದಾಯಿತವಾಗಿರುವ ವಕ್ಫ್ ಆಸ್ತಿಯು ಕಾನೂನು ಬದ್ಧವಾಗಿದೆ ಎಂದು ವಕ್ಫ್ ಟ್ರಿಬ್ಯುನಲ್ ತನ್ನ ಮಧ್ಯಾವಧಿ ತೀರ್ಪಿನಲ್ಲಿ ಧೃಡಿಕರಿಸಿದೆ.

• ಸದ್ರಿ ದಾವೆಯು ವಕ್ಫ್ ಟ್ರಿಬ್ಯುನಲ್ ನಲ್ಲಿ ತನಿಖೆಗೆ ಬಾಕಿ ಇರುವ ಹಂತದಲ್ಲಿ ಕೆಟಿ ಪೂಜಾರಿಯವರ ಸಂಬಂಧಿ ರಮ ಟಿ ಪೂಜಾರಿ ಹಾಗೂ ಇತರರು ಮಾನ್ಯ ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ದಾವೆ ಸಂಖ್ಯೆ ಎಲ್.ಎನ್.ಡಿ ಎಸ್.ಆರ್ 30/2018 ದಾವೆಯನ್ನು ದಾಖಲಿಸಿರುತ್ತಾರೆ. ಸದ್ರಿ ದಾವೆಯಲ್ಲಿ ಎರಡೂ ಪಕ್ಷದವರ ವಾದವನ್ನು ಆಲಿಸಿ ತೀರ್ಪಿಗಾಗಿ ಕಾಯ್ದಿರಿಸಿದೆ.

• ವಕ್ಫ್ ಕಾಯಿದೆ 1995 ಸೆಕ್ಷನ್ 5,6,7 ಮತ್ತು 85 ರ ಪ್ರಕಾರ ವಕ್ಫ್’ಗೆ ಸಂಬಂಧಿಸಿದ ಯಾವುದೇ ರೀತಿಯ ವಿವಾದಗಳಿದ್ದರೆ ಅದನ್ನು ವಕ್ಫ್ ನ್ಯಾಯಾ ಮಂಡಳಿಯಲ್ಲೇ ಬಗೆಹರಿಸತಕ್ಕದ್ದು. ಅದರಂತೆ ಕಲಮತ್ ಜುಮ್ಮಾ ಮಸೀದಿ ಕಾನೂನಿನ ಮಾರ್ಗದರ್ಶನದಂತೆ ವಕ್ಫ್ ಟ್ರಿಬ್ಯುನಲ್ ನಲ್ಲಿ ತನ್ನ ದಾವೆಯನ್ನು ಹೂಡಿದೆ. ಈ ಕುರಿತು ಉಚ್ಚ ನ್ಯಾಯಾಲಯಗಳ ಮತ್ತು ಸರ್ವೊಚ್ಚ ನ್ಯಾಯಾಲಯಗಳ ಆದೇಶವಿದೆ.

• ಕಾನೂನಾತ್ಮಕ ಹೋರಾಟದಲ್ಲಿ ತಮ್ಮ ಪರ ಯಾವುದೇ ರೀತಿಯ ಸಾಕ್ಷ್ಯಾಧಾರ ಇಲ್ಲವೆಂದು ತಿಳಿದ ಪ್ರತಿವಾದಿಗಳು ಹಾಗೂ ಇತರರು ದುರುದ್ದೇಶದಿಂದ ಮಸೀದಿಯ ವಕ್ಫ್ ಆಸ್ತಿಯಲ್ಲಿ ಕಾನೂನು ಬಾಹಿರವಾಗಿ ಬಲವಂತವಾಗಿ ಮೂರ್ತಿಯೊಂದನ್ನು ತಂದಿಟ್ಟು ತಗಡನ್ನು ಅಳವಡಿಸಿದ್ದಾರೆ. 2008ರ ಅಕ್ಟೋಬರ್ ನಲ್ಲಿ ಅಂದಿನ ಜಿಲ್ಲಾಧಿಕಾರಿಗಳು ಅದನ್ನು ಮೇಲೆ ಹೇಳಿದಂತೆ ತಂದಿಟ್ಟ ಮೂರ್ತಿ ಹಾಗೂ ತಗಡುಗಳನ್ನು ತಕ್ಷಣ ತೆರವುಗೊಳಿಸಿ ನ್ಯಾಯಾಲಯದ ತೀರ್ಪು ಬರುವ ತನಕ ಯಾಥಸ್ಥಿತಿ ಕಾಪಾಡಲು ಆದೇಶಿಸಿದ್ದರು.

• ಈ ಮಧ್ಯೆ ಸದ್ರಿ ಸ್ಥಿರಾಸ್ತಿಗೆ ಸಂಬಂಧಿತರಲ್ಲದ, ಸ್ವ ಹಿತಾಸಕ್ತಿ ಹೊಂದಿರುವವರ ಒತ್ತಡಕ್ಕೆ ಮಣಿದು ಜಿಲ್ಲಾಧಿಕಾರಿ ಗಳು ಇಲ್ಲ ಸಲ್ಲದ ಊಹಾಪೋಹಗಳನ್ನೊಳಗೊಂಡ ಮನವಿಯನ್ನು ಸ್ವೀಕರಿಸಿ ಅದರಂತೆ ಆಧಾರ ರಹಿತ ಟಿಪ್ಪಣಿಯೊಂದಿಗೆ ಸಹಾಯಕ ಕಮಿಷನರ್ ಹಾಗೂ ಪೊಲೀಸ್ ಇಲಾಖೆಯ ಅಸ್ಪಷ್ಟ ಹಾಗೂ ಪೂರ್ವಗ್ರಹ ಪೀಡಿತ ವರದಿಯ ಆಧಾರದಲ್ಲಿ ಸದ್ರಿ ಜಮೀನಿನ ಅಧಿಸೂಚನೆಯನ್ನು ರದ್ದು ಮಾಡಲು ಕೋರಿ ಅಪರ ಮುಖ್ಯ ಕಾರ್ಯದರ್ಶಿ, ಅಲ್ಪಸಂಖ್ಯಾತ ಕಲ್ಯಾಣ, ವಕ್ಫ್ ಮತ್ತು ಹಜ್ಜ್ ಇಲಾಖೆ ಕರ್ನಾಟಕ ಸರಕಾರದವರಿಗೆ ಮನವಿ ಮಾಡಿದ್ದಾರೆ.

• ಜಿಲ್ಲಾಧಿಕಾರಿಗಳ ಪತ್ರದ ಆಧಾರದ ಮೇಲೆ ಯಾವುದೇ ರೀತಿಯ ನಿಯಮಗಳನ್ನು ಪಾಲಿಸದೆ ಏಕಾಏಕಿಯಾಗಿ ಕಂದಾಯ ಸಚಿವರಾದ ಆರ್ ಅಶೋಕ್ ಅವರು ಆದೇಶ ಹೊರಡಿಸಿ ಸದ್ರಿ ಮಸೀದಿಯ ಸ್ಥಿರಾಸ್ತಿಯ ಪಹಣಿ ಪತ್ರವನ್ನು ಯಾವುದೇ ಕಾನೂನು ಪ್ರಕ್ರಿಯೆ ಪೂರೈಸದೆ ಮಸೀದಿಯ ಹೆಸರನ್ನು ತೆಗೆದು ‘ಸರಕಾರ’ ವೆಂದು ನಮೂದಿಸಿದ್ದಾರೆ.

ಈ ಎಲ್ಲಾ ವಾಸ್ತವಿಕಾಂಶಗಳನ್ನು ಗಮನಿಸಿದಾಗ ವಕ್ಫ್ ಆಸ್ತಿಯನ್ನು ನೆಲದ ಕಾನೂನಿನ ಪ್ರಕಾರ ರಕ್ಷಿಸಬೇಕಾದ ಜಿಲ್ಲಾಧಿಕಾರಿ, ಶಾಸಕರು ಒಳಗೊಂಡಂತೆ ಉಡುಪಿ ಜಿಲ್ಲಾಡಳಿತವು ಪಕ್ಷಪಾತ ಪೂರ್ಣವಾಗಿ ವರ್ತಿಸಿ ಕಲಮತ್ ನ್ಯಾಯಬದ್ಧ ಹಕ್ಕಿಗೆ ವಿರುದ್ಧವಾದ ಪ್ರಕ್ರಿಯೆ ನಡೆಸಿ ಆ ಮೂಲಕ ಕಂದಾಯ ಸಚಿವರ ಮೇಲೆ ಪ್ರಭಾವ ಬೀರಿ ಅನ್ಯಾಯ ಪೂರ್ಣ ನಿರ್ಣಯ ಕೈಗೊಂಡಿದೆ ಎಂದು ಆರೋಪಿಸಿದರು.

ಪತ್ರಿಕಾಗೋಷ್ಟಿಯಲ್ಲಿ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷ ಇಬ್ರಾಹೀಮ್ ಕೋಟ, ಸುನ್ನಿ ಸಂಯುಕ್ತ ಜಮಾಅತಿನ ಕಾರ್ಯದರ್ಶಿ ಅಬ್ದುಲ್ ರಹ್ಮಾನ್ ಕಲ್ಲಾಟ್ಟ, ಕರ್ನಾಟಕ ಮುಸ್ಲಿಮ್ ಜಮಾಅತ್ ನ ರಫೀಕ್ ಗಂಗೊಳ್ಳಿ, ಎಮ್.ಎ ಬಾವ, ನಝೀರ್ ಪಿ.ಏಫ್.ಐ ಉಡುಪಿ, ಅಝೀಜ್ ಉದ್ಯಾವರ, ಇದ್ರಿಸ್ ಹೂಡೆ ಜಮಾಅತೆ ಇಸ್ಲಾಮಿ ಹಿಂದ್, ಮುಹಮ್ಮದ್ ಮೌಲ, ಸಾಲಹುದ್ದೀನ್ ಉಡುಪಿ, ಇಕ್ಬಾಲ್ ಮನ್ನಾ ಮತ್ತು ಮುಂತಾದವರು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply