ಪುಣ್ಯಕೋಟಿ ಗೋಸೇವಾ ಟ್ರಸ್ಟ್ ವತಿಯಿಂದ ಬ್ರಹ್ಮಾವರ ಬೆಳ್ಳಾರು- ಆರೂರಿನಲ್ಲಿ ಸ್ಥಾಪಿಸಲಾಗಿರುವ ಪುಣ್ಯ ಕೋಟಿ ಗೋಸೇವಾ ಕೇಂದ್ರದ ಪ್ರಾರಂಭೋತ್ಸವ ಹಾಗೂ ಗೋ ದತ್ತು ಸ್ವೀಕಾರ ಕಾರ್ಯಕ್ರಮ ಇದೇ ಜೂ.18ರಂದು ನಡೆಯಲಿದೆ ಎಂದು ಟ್ರಸ್ಟ್ನ ಅಧ್ಯಕ್ಷ ವಿಜಯ ಪ್ರಕಾಶ್ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ 10ಗಂಟೆಗೆ ಕೇಂದ್ರದಲ್ಲಿ ಧಾರ್ಮಿಕ ವಿಧಿ ವಿಧಾನಗಳು ನಡೆಯಲಿದ್ದು, ದಾನಿಗಳಿಗೆ ಕೃತಜ್ಞತೆ ಸಮರ್ಪಣೆ ಕಾರ್ಯಕ್ರಮ ಕೂಡ ಜರಗಲಿದೆ.
11ಗಂಟೆಗೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ವಾರ್ಷಿಕ 12ಸಾವಿರ ರೂ. ನೀಡಿ ಒಂದು ದನವನ್ನು ದತ್ತು ಸ್ವೀಕರಿಸುವ ದಾನಿಗಳಿಗೆ ಗೋ ದತ್ತು ನೀಡಲಾಗುತ್ತದೆ ಎಂದು ಅವರು ತಿಳಿಸಿದರು.
ಕರಾವಳಿಯ ಮೂಲ ತಳಿ ಮಲನಾಡು ಗಿಡದ ಸಂರಕ್ಷಣೆ, ಸಂವರ್ಧನೆ ಹಾಗೂ ಈ ತಳಿಯ ಮಹತ್ವವನ್ನು ಜನರಿಗೆ ತಿಳಿಸುವ ಉದ್ದೇಶದಿಂದ ಈ ಕೇಂದ್ರವನ್ನು ಆರಂಭಿಸಲಾಗಿದೆ. ಸದ್ಯಕ್ಕೆ ಈ ಕೇಂದ್ರದಲ್ಲಿ 70 ಮಲನಾಡು ಗಿಡ ಗೋವುಗಳನ್ನು ಸಂರಕ್ಷಣೆ ಮಾಡಲಾಗಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ನಗರಸಭಾ ಸದಸ್ಯ ವಿಜಯ ಕೊಡವೂರು, ಕೇಂದ್ರದ ಕಾರ್ಯದರ್ಶಿ ನಳಿನಿ ಪ್ರದೀಪ್, ಸದಸ್ಯ ಪ್ರಸಾದ್ ಹಾವಂಜೆ ಉಪಸ್ಥಿತರಿದ್ದರು.