ಕೊರೋನಾ ಕಾರಣ ನಾಳಿನ ತೀರ್ಪಿಗೆ ಉಮಾಭಾರತಿ , ಕಲ್ಯಾಣ್ ಸಿಂಗ್ ಹಾಜರಿರುವುದಿಲ್ಲ
ಹೊಸದಿಲ್ಲಿ: ಭಾರತದ ಅತ್ಯಂತ ವಿವಾದಿತ ಬಾಬ್ರಿ ಕಟ್ಟಡ ಧ್ವಂಸ ಪ್ರಕರಣದ ಅಂತಿಮ ತೀರ್ಪು ನಾಳೆ ಸಂಜೆ ಪ್ರಕಟವಾಗಲಿದೆ. ಆರೋಪಿಗಳೆಲ್ಲಾ ಹಾಜರಿರಬೇಕು ಎಂಬ ಆದೇಶ ಕೋರ್ಟ್ ನೀಡಿದ್ದು ಈ ಹಿನ್ನೆಲೆಯಲ್ಲಿ, ಬಿಜೆಪಿಯ ಹಿರಿಯ ನಾಯಕರಾದ ಎಲ್.ಕೆ.ಅಡ್ವಾಣಿ, ಮುರುಳಿ ಮನೋಹರ್ ಜೋಶಿ, ಉಮಾಭಾರತಿ, ಕಲ್ಯಾಣ್ ಸಿಂಗ್, ವಿನಯ್ ಕಟಿಯಾರ್, ಸಾಕ್ಷಿ ಮಹಾರಾಜ್ ಸೇರಿದಂತೆ 32 ಮಂದಿ ಹಾಜರು ಇರಬೇಕಿದೆ.
ಆದರೆ ಉಮಾಭಾರತಿ ಮತ್ತು ಕಲ್ಯಾಣ್ ಸಿಂಗ್ಗೆ ಕೆಲ ದಿನಗಳ ಹಿಂದಷ್ಟೇ ಕೊರೋನಾ ಸೋಂಕು ತಗುಲಿದ್ದು, ಅವರಿಬ್ಬರೂ ಬೇರೆ ಬೇರೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದ್ದರಿಂದ ವೈದ್ಯರು ಅವರ ಪ್ರಯಾಣಕ್ಕೆ ಒಪ್ಪಿಗೆ ಸೂಚಿಸುವ ಸಾಧ್ಯತೆಯೆ ಇಲ್ಲ.
ಈ ಮಧ್ಯೆ ತಮ್ಮ ನಿಲುವನ್ನು ಉಮಾಭಾರತಿ ಸ್ಪಷ್ಟ ಪಡಿಸಿದ್ದಾರೆ: ಯಾವುದೇ ತೀರ್ಪು ಪ್ರಕಟವಾದರು ಪರವಾಗಿಲ್ಲ. ನನ್ನನ್ನು ಗಲ್ಲಿಗೆರಿಸಿದರೂ, ಅದನ್ನು ದೇವರ ಆಶೀರ್ವಾದ ಅಂತ ಭಾವಿಸುತ್ತೇನೆ, ಜಾಮೀನು ಅರ್ಜಿಯನ್ನು ಮಾತ್ರ ನಾನು ಸಲ್ಲಿಸುವುದಿಲ್ಲ. ಯಾಕೆಂದರೆ ಒಂದು ವೇಳೆ ನಾನು ಜಾಮೀನಿಗೆ ಅರ್ಜಿ ಸಲ್ಲಿಸಿದರೆ, ಇದುವರೆಗೆ ರಾಮಜನ್ಮಭೂಮಿಯ ವಿಷಯದಲ್ಲಿ ಮಾಡಿರುವ ಹೋರಾಟದ ಮಹತ್ವಕ್ಕೆ ಕುಂದು ಬರುತ್ತದೆ’ ಎಂದು ಹೇಳಿದ್ದಾರೆ.